

ಫ್ರಾನ್ಸ್: ಒಮಾನ್ ಕೊಲ್ಲಿಯಲ್ಲಿ ಅಮೆರಿಕ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟ ಬೆನ್ನಲ್ಲೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿ7 ಶೃಂಗಸಭೆಯಲ್ಲಿ ಜಾಗತಿಕ ನಾಯಕರ ಸಮ್ಮುಖದಲ್ಲೇ ಈ ವಿಷಯವನ್ನು ಪ್ರಸ್ತಾಪಿಸಿ, ಕಳವಳ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಪಸ್ಥಿತರಿದ್ದ ವೇದಿಕೆಯಲ್ಲೇ ಮೋದಿ ಅವರು ಕಡಲ ಮಾರ್ಗಗಳ ಸುರಕ್ಷತೆ ಮತ್ತು ನಾಗರಿಕ ನಾವಿಕರ ರಕ್ಷಣೆಯ ಕುರಿತು ಜಾಗತಿಕ ಸಮುದಾಯಕ್ಕೆ ಅವರ ಹೊಣೆಗಾರಿಕೆಯನ್ನು ನೆನಪಿಸಿದ್ದಾರೆ.
ಫ್ರಾನ್ಸ್ನಲ್ಲಿ ನಡೆದ ಜಿ7 ಶೃಂಗಸಭೆಯ ‘Forging New Partnerships and Rebuilding International Solidarity’ ಅಧಿವೇಶನದಲ್ಲಿ ಮಾತನಾಡಿದ ಮೋದಿಯವರು, ಇತ್ತೀಚಿನ ಮಧ್ಯಪ್ರಾಚ್ಯ ಸಂಘರ್ಷಗಳು ಮಾನವ ಜೀವ, ಆರ್ಥಿಕತೆ ಹಾಗೂ ಅಂತರರಾಷ್ಟ್ರೀಯ ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರಿವೆ. ಅನೇಕ ದೇಶಗಳಲ್ಲಿ ಜೀವಹಾನಿ ಮತ್ತು ಆಸ್ತಿ ನಷ್ಟ ಉಂಟಾಗಿದ್ದು, ಭಾರತ ಸೇರಿದಂತೆ ಹಲವು ರಾಷ್ಟ್ರಗಳ ನಾಗರಿಕರು ಇದರ ಪರಿಣಾಮ ಅನುಭವಿಸಿದ್ದಾರೆ. ಶೇಷವಾಗಿ, ಹಾರ್ಮುಜ್ ಜಲಸಂಧಿಯಲ್ಲಿನ ಅಶಾಂತಿಯಿಂದ ತೈಲ ಮತ್ತು ಸರಕು ಸಾಗಣೆ ವ್ಯವಹಾರಕ್ಕೆ ತೊಂದರೆಯಾಗಿದ್ದು, ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ.
ಜಾಗತಿಕ ಸಮುದ್ರ ವ್ಯಾಪಾರದ ಮೂಲಕ ರಾಷ್ಟ್ರಗಳನ್ನು ಸಂಪರ್ಕಿಸುವ ಸಮುದ್ರಯಾನಿಕರ ಸುರಕ್ಷತೆಯನ್ನು ಖಚಿತಪಡಿಸುವುದು ನಮ್ಮೆಲ್ಲರ ಕರ್ತವ್ಯ. ಸಮುದ್ರ ಮಾರ್ಗಗಳು ಸುರಕ್ಷಿತವಾಗಿರಬೇಕು. ನಾವಿಕರು ಯಾವುದೇ ಭಯವಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಹೇಳಿದ್ದಾರೆ.
ದೇಶಗಳ ನಡುವಿನ ಪರಸ್ಪರ ನಂಬಿಕೆಯೇ ಇಂದಿನ ಜಗತ್ತಿನ ಅತ್ಯಂತ ಮಹತ್ವದ ತಂತ್ರಜ್ಞಾನಿಕ ಮತ್ತು ಆರ್ಥಿಕ ಸಂಪತ್ತಾಗಿದೆ. “ಖನಿಜ ಸಂಪತ್ತು, ತಂತ್ರಜ್ಞಾನ ಅಥವಾ ಮಾರುಕಟ್ಟೆಗಿಂತ ಇಂದು ವಿಶ್ವಕ್ಕೆ ಅಗತ್ಯವಿರುವುದು ಪರಸ್ಪರ ವಿಶ್ವಾಸ. ತಂತ್ರಜ್ಞಾನ ಮತ್ತು ಸರಬರಾಜು ಸರಪಳಿಗಳು ಜಾಗತಿಕ ಹಿತಕ್ಕಾಗಿ ಬಳಸಲ್ಪಡಬೇಕು; ಅವುಗಳನ್ನು ಆಯುಧಗಳಾಗಿ ಬಳಸಬಾರದು ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಇದೇ ವೇಳೆ, ‘ಗ್ಲೋಬಲ್ ಸೌತ್’ ರಾಷ್ಟ್ರಗಳ ಆಶಯಗಳ ಕುರಿತು ಮಾತನಾಡಿದ ಅವರು, ಅಭಿವೃದ್ಧಿಶೀಲ ರಾಷ್ಟ್ರಗಳು ಕೇವಲ ನೆರವಿನ ಫಲಾನುಭವಿಗಳಾಗಲು ಬಯಸುವುದಿಲ್ಲ; ಜಾಗತಿಕ ಅಭಿವೃದ್ಧಿಯ ಸಮಾನ ಪಾಲುದಾರರಾಗಲು ಬಯಸುತ್ತಿವೆ ಎಂದು ತಿಳಿಸಿದರು.
ಬಳಿಕ ಭಾರತದ ಅಭಿವೃದ್ಧಿ ಮಾದರಿಯನ್ನು ವಿವರಿಸಿದ ಮೋದಿಯವರು, “ಸರ್ವ ಜನ ಹಿತಾಯ, ಸರ್ವ ಜನ ಸುಖಾಯ” ಎಂಬ ತತ್ವದಡಿ ಭಾರತ ಕಾರ್ಯನಿರ್ವಹಿಸುತ್ತಿದ್ದು, ಹಣಕಾಸು ಸೇರ್ಪಡೆ, ಆರೋಗ್ಯ ಭದ್ರತೆ, ಡಿಜಿಟಲ್ ಗುರುತು, ತಂತ್ರಜ್ಞಾನ ಆಧಾರಿತ ಸಬಲೀಕರಣ ಹಾಗೂ ಮಹಿಳಾ ನೇತೃತ್ವದ ಅಭಿವೃದ್ಧಿಯಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಹೇಳಿದರು.
ಗಮನಾರ್ಹವಾಗಿ, ಅಮೆರಿಕದ ಸೆಂಟ್ರಲ್ ಕಮಾಂಡ್ ಜೂನ್ 8, 9 ಮತ್ತು 11ರಂದು ಇರಾನ್ ಬಂದರುಗಳ ಮೇಲಿನ ನಿರ್ಬಂಧ ಉಲ್ಲಂಘಿಸಲು ಯತ್ನಿಸುತ್ತಿದ್ದ ಹಡಗುಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದು, ಆ ದಾಳಿಗಳಲ್ಲೇ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ಅವರ ಈ ಹೇಳಿಕೆ ಮಹತ್ವ ಪಡೆದಿದೆ.
ಫ್ರಾನ್ಸ್ನ ಆಹ್ವಾನದ ಮೇರೆಗೆ ಜಿ7 ಶೃಂಗಸಭೆಯಲ್ಲಿ ಅತಿಥಿ ರಾಷ್ಟ್ರವಾಗಿ ಭಾಗವಹಿಸಿರುವ ಮೋದಿ, ಸ್ಲೋವಾಕಿಯಾ ಪ್ರವಾಸ ಮುಗಿಸಿ ಫ್ರಾನ್ಸ್ನ ಎವಿಯನ್-ಲೆ-ಬೇನ್ಸ್ಗೆ ಆಗಮಿಸಿದ್ದರು.
ಜಿ7 ಒಕ್ಕೂಟದಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಸದಸ್ಯ ರಾಷ್ಟ್ರ. ಜೊತೆಗೆ ಯುರೋಪಿಯನ್ ಯೂನಿಯನ್ ಕೂಡ ಇದರ ಭಾಗವಾಗಿದೆ.
ಭಾರತ ಈ ಬಾರಿ ಅತಿಥಿ ರಾಷ್ಟ್ರವಾಗಿ ಆಹ್ವಾನಿತವಾಗಿದ್ದು, ಜಾಗತಿಕ ಆರ್ಥಿಕತೆ, ಭದ್ರತೆ, ಶಾಂತಿ ಮತ್ತು ಅಭಿವೃದ್ಧಿ ಕುರಿತ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ವಿಶ್ವ ನಾಯಕರೊಂದಿಗೆ ಮೋದಿ ನಡೆಸಲಿರುವ ಮಾತುಕತೆಗಳ ಮೇಲೂ ಜಾಗತಿಕ ಗಮನ ಕೇಂದ್ರೀಕೃತವಾಗಿದೆ.
Advertisement