

ದೋಹಾ: ಕತಾರ್ನ Ras Laffan Industrial City ಕೈಗಾರಿಕಾ ನಗರದಲ್ಲಿರುವ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ 12 ಭಾರತೀಯರು ಸೇರಿದಂತೆ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಭಾನುವಾರ ನಡೆದ ಈ ದುರ್ಘಟನೆಯಲ್ಲಿ 66ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಈ ವಿಷಯವನ್ನು ಕತಾರ್ನ ಇಂಧನ ಸಚಿವ ಸಾದ್ ಅಲ್ ಕಾಬಿ ನಿನ್ನೆ ದೃಢಪಡಿಸಿದ್ದಾರೆ.
ದೋಹದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, “ರಾಸ್ ಲಫಾನ್ ಘಟನೆಯಲ್ಲಿ 12 ಭಾರತೀಯ ಪ್ರಜೆಗಳು ದುರದೃಷ್ಟವಶಾತ್ ಮೃತಪಟ್ಟಿದ್ದಾರೆ” ಎಂದು ತಿಳಿಸಿದೆ.
ಕತಾರ್ ಅಧಿಕಾರಿಗಳ ಮಾಹಿತಿಯಂತೆ, ಗಾಯಗೊಂಡಿರುವ ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾರತೀಯ ರಾಯಭಾರ ಕಚೇರಿ, ಈ ದುರ್ಘಟನೆಯಿಂದ ಬಾಧಿತರಾದ ಭಾರತೀಯರು ಹಾಗೂ ಅವರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ನೆರವನ್ನು ಒದಗಿಸಲು ನಾವು ಕತಾರ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಮೃತರ ಪಾರ್ಥಿವ ಶರೀರಗಳನ್ನು ಶೀಘ್ರದಲ್ಲೇ ಭಾರತಕ್ಕೆ ಕಳುಹಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಸ್ಫೋಟದ ಕಾರಣವನ್ನು ಕತಾರ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಚಿವ ಸಾದ್ ಅಲ್-ಕಾಬಿ ಅವರ ಪ್ರಕಾರ, ಇದು ಅಪಘಾತವಾಗಿದ್ದು, ಯಾವುದೇ ವಿಧದ ವಿಧ್ವಂಸಕ ಕೃತ್ಯ ಅಥವಾ ಶತ್ರುಗಳ ದಾಳಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ರಾಷ್ಟ್ರೀಯತೆ ಹೊಂದಿದ್ದ 13 ಮಂದಿ ಜೀವ ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ. 66 ಮಂದಿ ಗಾಯಗೊಂಡಿದ್ದು, ಯಾರ ಜೀವಕ್ಕೂ ಅಪಾಯವಿಲ್ಲ ಎಂದು ಹೇಳಿದರು.
ಗಾಯಗೊಂಡವರಲ್ಲಿ ಕತಾರ್, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಕೀನ್ಯಾ, ಘಾನಾ, ಟಾಂಜಾನಿಯಾ, ನೈಜೀರಿಯಾ ಮತ್ತು ನೇಪಾಳ ದೇಶಗಳ ಪ್ರಜೆಗಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಕೈಗಾರಿಕೆಗಳಿಗೆ ಅನಿಲ ಪೂರೈಸುವ ಘಟಕದಲ್ಲಿ ಈ ಸ್ಫೋಟ ಸಂಭವಿಸಿದ್ದು, ಇದರ ಆಘಾತ ರಾಜಧಾನಿ ದೋಹಾವರೆಗೂ ಅನುಭವವಾಗಿದೆ.
ಈ ಘಟನೆ ರಫ್ತು ಚಟುವಟಿಕೆಗಳ ಮೇಲೆ ಅಥವಾ ದೇಶೀಯ ಅಗತ್ಯಗಳ ಪೂರೈಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪರಿಸರಕ್ಕೂ ಯಾವುದೇ ಹಾನಿಯಾಗಿಲ್ಲ ಎಂದು ಕಾಬಿ ಹೇಳಿದರು.
ಸ್ಫೋಟ ಸಂಭವಿಸಿದ ವೇಳೆ ದೋಹಾದಲ್ಲಿ ಇದ್ದ ಪತ್ರಕರ್ತರು ಸುಮಾರು 64 ಕಿಲೋಮೀಟರ್ ದೂರದಲ್ಲಿಯೂ ಸ್ಫೋಟದ ಶಬ್ದವನ್ನು ಕೇಳಿದ್ದಾರೆ. ಮತ್ತೊಬ್ಬರು ಸುಮಾರು 20 ಕಿಲೋಮೀಟರ್ ದೂರದಿಂದ ಕಿತ್ತಳೆ ಬಣ್ಣದ ಜ್ವಾಲೆಗಳು ಹಾಗೂ ಹೊಗೆಯ ಮೋಡವನ್ನು ಕಂಡಿದ್ದಾರೆ. ಈ ಪ್ರದೇಶವು ವಿಶ್ವದ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (LNG) ಕೇಂದ್ರಗಳಲ್ಲಿ ಒಂದಾಗಿದೆ.
ಭಾರತೀಯ ರಾಯಭಾರ ಕಚೇರಿ ಈ ಘಟನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿ, ಈ ಸಂಕಷ್ಟದ ಸಮಯದಲ್ಲಿ ಕತಾರ್ ಸರ್ಕಾರ ಮತ್ತು ಜನರೊಂದಿಗೆ ಭಾರತೀಯ ಸಮುದಾಯ ಸಂಪೂರ್ಣ ಐಕ್ಯತೆಯಿಂದ ನಿಂತಿದೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಹಾಗೂ ನಾಪತ್ತೆಯಾದವರು ಸುರಕ್ಷಿತವಾಗಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಹೇಳಿದೆ.
ಕತಾರ್ನ ಸರ್ಕಾರಿ ಸ್ವಾಮ್ಯದ ಇಂಧನ ಸಂಸ್ಥೆ ಕತಾರ್ ಎನರ್ಜಿ ನೀಡಿದ ಮಾಹಿತಿಯಂತೆ, ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿ ಕಾರ್ಯಾಚರಣೆ ಮರು ಪ್ರಾರಂಭಿಸುವ ವೇಳೆ ಬರ್ಜಾನ್ ಅನಿಲ ಸೌಲಭ್ಯ ಕೇಂದ್ರದಲ್ಲಿ ಸ್ಫೋಟ ಮತ್ತು ಬೆಂಕಿ ಕಾಣಿಸಿಕೊಂಡಿತು. ತುರ್ತು ಪ್ರತಿಕ್ರಿಯಾ ತಂಡಗಳನ್ನು ನಿಯೋಜಿಸಿದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಘಟನೆ ಮೊದಲು ಅಮೆರಿಕಾ–ಇರಾನ್ ಯುದ್ಧದ ಸಂದರ್ಭದಲ್ಲಿ ಇರಾನ್ ದಾಳಿಗಳಿಂದ ರಾಸ್ ಲಫಾನ್ ಪ್ರದೇಶಕ್ಕೆ ಹಾನಿಯಾಗಿದ್ದು, ಕತಾರ್ ಅನಿಲ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿತ್ತು.
ಕಾಬಿ ಅವರ ಪ್ರಕಾರ, ಹಾರ್ಮುಜ್ ಜಲಸಂಧಿ ಪರಿಸ್ಥಿತಿ ಹಾಗೂ ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗಳು ಭೌಗೋಳಿಕ-ರಾಜಕೀಯ ಮತ್ತು ಸೈನಿಕ ವಿಚಾರಗಳಾಗಿದ್ದು, ಭಾನುವಾರದ ಸ್ಫೋಟವು ಅವುಗಳಿಂದ ಭಿನ್ನವಾದ ಘಟನೆ ಎಂದು ಹೇಳಿದರು.
ಕತಾರ್ ಗೃಹ ಸಚಿವಾಲಯವು ಈ ಘಟನೆಯನ್ನು “ಆಂತರಿಕ ಸ್ಫೋಟ” ಹಾಗೂ “ತಾಂತ್ರಿಕ ದೋಷ” ಎಂದು ವಿವರಿಸಿದೆ.
ಕತಾರ್ ಎನರ್ಜಿ ಪ್ರಕಾರ, ಬಾರ್ಜಾನ್ ಘಟಕವು ದಿನಕ್ಕೆ ಸುಮಾರು 1.4 ಬಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಫೀಟ್ ಅನಿಲವನ್ನು ವಿದ್ಯುತ್ ಉತ್ಪಾದನೆ, ನೀರು ಶುದ್ಧೀಕರಣ ಘಟಕಗಳು ಮತ್ತು ಸ್ಥಳೀಯ ಕೈಗಾರಿಕೆಗಳಿಗೆ ಪೂರೈಸುವ ಸಾಮರ್ಥ್ಯ ಹೊಂದಿದೆ.
2025ರ ಡಿಸೆಂಬರ್ನಿಂದ ನಿರ್ವಹಣಾ ಕಾಮಗಾರಿಗಳ ಕಾರಣದಿಂದ ಸ್ಥಗಿತಗೊಂಡಿದ್ದ ಈ ಘಟಕವನ್ನು ಸ್ಫೋಟಕ್ಕೂ ಎರಡು ದಿನಗಳ ಮೊದಲು ಮರು ಪ್ರಾರಂಭಿಸಲಾಗಿತ್ತು.
ExxonMobil ಸಂಸ್ಥೆಯು ಬಾರ್ಜಾನ್ ಯೋಜನೆಯಲ್ಲಿ 7 ಶೇಕಡಾ ಪಾಲು ಹೊಂದಿದ್ದು, ಉಳಿದ 93 ಶೇಕಡಾ ಪಾಲು ಕತಾರ್ ಸರ್ಕಾರದ ಕಂಪನಿಯದ್ದಾಗಿದೆ.
ಇರಾನ್ನೊಂದಿಗೆ ಸೌತ್ ಪಾರ್ಸ್ ಅನಿಲ ಘಟಕ ಅನಿಲ ಕ್ಷೇತ್ರವನ್ನು ಹಂಚಿಕೊಂಡಿರುವ ಕತಾರ್, ಅಮೆರಿಕಾ, ಆಸ್ಟ್ರೇಲಿಯಾ ಮತ್ತು ರಷ್ಯಾ ಜೊತೆಗೆ ವಿಶ್ವದ ಪ್ರಮುಖ LNG ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ.
ಇರಾನ್ ಡ್ರೋನ್ ದಾಳಿಗಳ ನಂತರ ಕತಾರ್ ಮಾರ್ಚ್ 2ರಂದು LNG ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಮಾರ್ಚ್ 18ರ ದಾಳಿಗಳಿಂದ ಉಂಟಾದ ಹೆಚ್ಚುವರಿ ಹಾನಿಯಿಂದ LNG ರಫ್ತು ಸಾಮರ್ಥ್ಯದಲ್ಲಿ 17 ಶೇಕಡಾ ಕುಸಿತ ಉಂಟಾಗುವ ಸಾಧ್ಯತೆ ಇದೆ ಮತ್ತು ಸಂಪೂರ್ಣ ದುರಸ್ತಿ ಕಾರ್ಯಕ್ಕೆ 3 ರಿಂದ 5 ವರ್ಷಗಳು ಬೇಕಾಗಬಹುದು ಎಂದು ಕಾಬಿ ತಿಳಿಸಿದ್ದರು.
ಈ ಬೆಳವಣಿಗೆಯಿಂದ ಚೀನಾ, ದಕ್ಷಿಣ ಕೊರಿಯಾ, ಇಟಲಿ ಹಾಗೂ ಬೆಲ್ಜಿಯಂ ಸೇರಿದಂತೆ ಪ್ರಮುಖ ಅನಿಲ ಆಮದು ರಾಷ್ಟ್ರಗಳು ಹೆಚ್ಚು ಪರಿಣಾಮಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ವಿದೇಶಾಂಗ ಸಚಿವರ ಸಂತಾಪ
ಕತಾರ್ನ Ras Laffan Industrial City ಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಭಾರತೀಯ ಪ್ರಜೆಗಳು ಸೇರಿದಂತೆ ಹಲವರು ಮೃತಪಟ್ಟಿರುವುದು ಹಾಗೂ ಗಾಯಗೊಂಡಿರುವುದಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಈ ದುರ್ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿರುವಂತೆ, ನಮ್ಮ ರಾಯಭಾರ ಕಚೇರಿಯು ಕತಾರ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈ ದುರಂತದಿಂದ ಬಾಧಿತರಾದ ಭಾರತೀಯ ಪ್ರಜೆಗಳ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳುತ್ತಿದೆ ಎಂದಿದ್ದಾರೆ.
Advertisement