

ಇರಾಕ್ನ ಬಸ್ರಾ ಕರಾವಳಿಯ ಸಮೀಪ ತೈಲ ಟ್ಯಾಂಕರ್ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಅಮೆರಿಕದ ಕಂಪನಿಗೆ ಸೇರಿದ ಸಫೇಸಿಯಾ ವಿಷ್ಣು ಎಂಬ ತೈಲ ಟ್ಯಾಂಕರ್ ಮೇಲೆ ಇರಾನ್ ಮೂಲದ ಆತ್ಮಹತ್ಯಾ ದೋಣಿ ಮೂಲಕ ದಾಳಿ ನಡೆದಿದ್ದು, ಈ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಇರಾಕ್ನ ಖೋರ್ ಅಲ್ ಜುಬೈರ್ ಬಂದರು ಸಮೀಪ ಈ ದಾಳಿ ನಡೆದಿದೆ. ಸರಕು ವರ್ಗಾವಣೆ ನಡೆಯುವ ಪ್ರದೇಶದಲ್ಲೇ ದಾಳಿ ನಡೆದಿದೆ ಎಂದು ಇರಾಕ್ ಬಂದರುಗಳ ಸಾಮಾನ್ಯ ಕಂಪನಿಯ ಮಹಾನಿರ್ದೇಶಕ ಫರ್ಹಾನ್ ಅಲ್ ಫರ್ತೂಸಿ ತಿಳಿಸಿದ್ದಾರೆ.
ದಾಳಿಯಲ್ಲಿ ಒಬ್ಬ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದು, ಉಳಿದ 27 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ಬಸ್ರಾಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಮೃತಪಟ್ಟ ಭಾರತೀಯ ಪ್ರಜೆ ಗುರುತನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಈ ಘಟನೆಯ ಬಗ್ಗೆ ಹಡಗು ನಿರ್ವಹಣಾ ಸಂಸ್ಥೆಯ ಮೂಲಗಳು ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯಲ್ಲಿ ಹಡಗುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಭದ್ರತೆಗಾಗಿ ಕ್ರಮ ಕೈಗೊಳ್ಳುವಂತೆ ಭಾರತ ಸರ್ಕಾರವನ್ನು ಆಗ್ರಹಿಸಿವೆ.
ಜಾಗತಿಕ ಮಟ್ಟದಲ್ಲಿ ಸಮುದ್ರ ನಾವಿಕರಲ್ಲಿ ಭಾರತೀಯರ ಪ್ರಮಾಣವು ಸುಮಾರು 15 ಶೇಕಡಾ ಇರುವುದರಿಂದ, ಇಂತಹ ದಾಳಿಗಳಲ್ಲಿ ಭಾರತೀಯರು ಹಾನಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕವನ್ನೂ ಮೂಲಗಳು ವ್ಯಕ್ತಪಡಿಸಿವೆ.
ವೆಸೆಲ್ ಫೈಂಡರ್ ವೆಬ್ಸೈಟ್ನಲ್ಲಿರುವ ಮಾಹಿತಿಯ ಪ್ರಕಾರ, 228.6 ಮೀಟರ್ ಉದ್ದ ಮತ್ತು 32.57 ಮೀಟರ್ ಅಗಲದ ಸಫೆಸಿಯಾ ವಿಷ್ಣು 2007 ರಲ್ಲಿ ನಿರ್ಮಿಸಲಾದ ಕಚ್ಚಾ ತೈಲ ಟ್ಯಾಂಕರ್ ಆಗಿದ್ದು, ಪ್ರಸ್ತುತ ಮಾರ್ಷಲ್ ದ್ವೀಪಗಳ ಧ್ವಜದಡಿಯಲ್ಲಿ ಪ್ರಯಾಣಿಸುತ್ತಿದೆ. ಇದರ ಒಟ್ಟು ತೂಕ ಸುಮಾರು 42,010 ಟನ್ ಆಗಿದೆ.
Advertisement