ಕಠ್ಮಂಡು: ಭಾರತೀಯ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ಬಸ್ ಮಧ್ಯ ನೇಪಾಳದಲ್ಲಿ ಕಮರಿಗೆ ಉರುಳಿ ಬಿದ್ದ ಪರಿಣಾಮ ಏಳು ಜನರು ಸಾವಿಗೀಡಾಗಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಶನಿವಾರ ನೇಪಾಳದ ಗಂಡಕಿ ಪ್ರಾಂತ್ಯದಲ್ಲಿ ನಡೆದಿದೆ. ಮನಕಮನ ದೇವಸ್ಥಾನದಿಂದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಮೈಕ್ರೋಬಸ್ ಗೂರ್ಖಾ ಜಿಲ್ಲೆಯಲ್ಲಿ ಉರುಳಿಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೂರ್ಖಾ ಜಿಲ್ಲೆಯ ಜಿಲ್ಲಾ ಸಂಚಾರ ಪೊಲೀಸ್ ಕಚೇರಿಯ ಮುಖ್ಯಸ್ಥ ಸೂರಜ್ ಆರ್ಯಲ್ ಮಾತನಾಡಿ, ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ಐವರು ಪುರುಷರು ಸೇರಿದ್ದಾರೆ. ಅವರೆಲ್ಲರೂ ಪೂಜೆಗಾಗಿ ಮನಕಮನಕ್ಕೆ ಪ್ರಯಾಣಿಸಿದ್ದ ಭಾರತೀಯ ಪ್ರಜೆಗಳು ಎಂದು ತಿಳಿಸಿದ್ದಾರೆ.
ಸಂತ್ರಸ್ತರನ್ನು ಮುತ್ತು ಕುಮಾರ್ (58), ಅನಮಾಲಿಕ್ (58), ಮೀನಾಕ್ಷಿ (59), ಶಿವಗಾಮಿ (53), ವಿಜಯಾಳ್ (57), ಮೀನಾ (58) ಮತ್ತು ತಮಿಳರಸಿ (60) ಎಂದು ಗುರುತಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿ ಮುಖ್ಯಸ್ಥ ಭರತ್ ಬಹದ್ದೂರ್ ಬಿ.ಕೆ. ತಿಳಿಸಿದ್ದಾರೆ.
ಗಾಯಗೊಂಡ ಇತರ ಏಳು ಪ್ರಯಾಣಿಕರನ್ನು ರಕ್ಷಿಸಲಾಗಿದ್ದು, ಅನ್ಬುಖೈರೇನಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಹಿಮಾಲಯನ್ ಟೈಮ್ಸ್ ಪ್ರಕಾರ, ವಿದ್ಯುತ್ ಚಾಲಿತ ಬಸ್ಸಿನ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದು, ಅವರ ಸಹಾಯಕ ಗಾಯಗೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement