

ಇಸ್ಲಾಮಾಬಾದ್: ಪಾಕಿಸ್ತಾನದ ಕೆಲ ಪ್ರದೇಶಗಳಿಗೆ ಅಖಂಡ ಭಾರತ ಮೂಲದ ಹಿಂದೂ ಹೆಸರುಗಳನ್ನು ಮರು ನಾಮಕರಣ ಮಾಡುವ ಪ್ರಕ್ರಿಯೆಯನ್ನು ದಿಢೀರ್ ಮುಂದೂಡಲಾಗಿದೆ.
ಹೌದು.. ಪಾಕ್ ಸರ್ಕಾರ ಅಲ್ಲಿನ ಕೆಲ ಪ್ರದೇಶಗಳಿಗೆ ಹಿಂದೂ ಹೆಸರುಗಳ ಮರು ನಾಮಕರಣ ಮಾಡುವ ಪ್ರಕ್ರಿಯೆಯನ್ನು ಮುಂದೂಡಿದ್ದು, ಕೆಲವು "ಅತಿರೇಕಿ ಅಂಶಗಳು" ಮತ್ತು ಮೂಲಭೂತವಾದಿಗಳ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನದ ಪಂಜಾಬ್ ಸರ್ಕಾರವು ಲಾಹೋರ್ ನಗರದ ವಿಭಜನೆಗೂ ಮುಂಚಿನ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ರಸ್ತೆ ಮತ್ತು ಹಲವಾರು ಬೀದಿಗಳ ಮೂಲ ಐತಿಹಾಸಿಕ ಹೆಸರನ್ನು ಮರುಸ್ಥಾಪಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು.
ಲಾಹೋರ್ ಹೆರಿಟೇಜ್ ಏರಿಯಾಸ್ ರಿವೈವಲ್ (LAHR) ತನ್ನ ಇತ್ತೀಚಿನ ಸಭೆಯಲ್ಲಿ, ಪಿಎಂಎಲ್-ಎನ್ ಅಧ್ಯಕ್ಷ ಹಾಗೂ ಮೂರು ಬಾರಿ ಮಾಜಿ ಪ್ರಧಾನಮಂತ್ರಿಯಾಗಿದ್ದ Nawaz Sharif ಮತ್ತು ಅವರ ಪುತ್ರಿ, ಪಂಜಾಬ್ ಮುಖ್ಯಮಂತ್ರಿ Maryam Nawaz ಅವರ ಸಂಯುಕ್ತ ಅಧ್ಯಕ್ಷತೆಯಲ್ಲಿ, ಲಾಹೋರ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ರಸ್ತೆ ಹಾಗೂ ಬೀದಿಗಳ ಮೂಲ ಐತಿಹಾಸಿಕ ಹೆಸರನ್ನು ಮರುಸ್ಥಾಪಿಸಲು ಅನುಮೋದನೆ ನೀಡಿತ್ತು.
ಮುಖ್ಯಮಂತ್ರಿಯ ಕಚೇರಿ ಈ ನಿರ್ಧಾರದ ಕುರಿತು ಮಾಧ್ಯಮಗಳಿಗೆ ಪ್ರಕಟಣೆ ನೀಡಿತ್ತು. 2024ರ ಫೆಬ್ರವರಿಯ ಸಾಮಾನ್ಯ ಚುನಾವಣೆಯ ನಂತರ ಸಕ್ರಿಯ ರಾಜಕೀಯದಿಂದ ದೂರವಿರುವ ಶರೀಫ್ ಅವರು LAHR ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಆದರೆ ಇದೀಗ ಪಾಕಿಸ್ತಾನ ಸರ್ಕಾರ ಈಗ ಈ ನಿರ್ಧಾರದಿಂದ ಹಿಂದೆ ಸರಿದಂತೆ ಕಾಣುತ್ತಿದ್ದು, ಲಾಹೋರ್ನ ರಸ್ತೆ ಮತ್ತು ಬೀದಿಗಳ ಮೂಲ ಹೆಸರನ್ನು ಮರುಸ್ಥಾಪಿಸುವ ವಿಚಾರವನ್ನು ಇನ್ನೂ ಪರಿಗಣಿಸಲಾಗುತ್ತಿದೆ ಎಂದು ಹೇಳಿದೆ.
ಹಿಂದಡಿಗೆ ಕಾರಣವೇನು?
ಮೂಲಭೂತವಾದಿಗಳ ಒತ್ತಡಕ್ಕೆ ಮಣಿದು ಪಾಕಿಸ್ತಾನ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆಯಾದರೂ "ಇಂತಹ ಯಾವುದೇ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ," ಎಂದು ಲಾಹೋರ್ ಉಪ ಆಯುಕ್ತ ಕ್ಯಾಪ್ಟನ್ ಆರ್ ಮುಹಮ್ಮದ್ ಅಲಿ ಇಜಾಜ್ ಅವರು ಸೋಮವಾರ Dawn ಪತ್ರಿಕೆಗೆ ತಿಳಿಸಿದ್ದಾರೆ.
ಶರೀಫ್ ಮತ್ತು ಮಾರ್ಯಂ ಇಬ್ಬರೂ ರಸ್ತೆ ಮತ್ತು ಬೀದಿಗಳ ಮೂಲ ಹೆಸರನ್ನು ಮರುಸ್ಥಾಪಿಸಲು ಅನುಮೋದನೆ ನೀಡಿದ್ದರು ಹಾಗೂ ಮಾರ್ಚ್ 20ರಂದು ಮುಖ್ಯಮಂತ್ರಿ ಕಚೇರಿ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿತ್ತು ಎಂಬ ಪ್ರಶ್ನೆಗೆ, ಇಜಾಜ್ ಅವರು "ಈ ವಿಷಯ ಇನ್ನೂ ಚರ್ಚೆಯಲ್ಲಿರುವುದರಿಂದ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ" ಎಂದು ಪುನರುಚ್ಚರಿಸಿದರು.
ಆದರೆ, ಕೆಲವು ಅತಿರೇಕಿ ಅಂಶಗಳು ಹಾಗೂ ವ್ಲಾಗರ್ಗಳು ಲಾಹೋರ್ನ ರಸ್ತೆ ಮತ್ತು ಬೀದಿಗಳಿಗೆ ವಿಭಜನೆಗೂ ಮುಂಚಿನ "ಹಿಂದೂ ಮತ್ತು ಸಿಖ್" ಹೆಸರನ್ನು ಮರುಸ್ಥಾಪಿಸುತ್ತಿರುವುದಕ್ಕಾಗಿ ವರದಿ ಮಾಡಿದ್ದರು. ಇದಾದ ಬಳಿಕ ಮಾರ್ಯಂ ಅವರನ್ನು ಮೂಲಭೂತವಾದಿಗಳು ತೀವ್ರವಾಗಿ ಟೀಕಿಸಿದ್ದರು ಎಂದು ಅಧಿಕೃತ ಮೂಲವೊಂದು ತಿಳಿಸಿದೆ.
"ವಿಮರ್ಶಕರು ಸರ್ಕಾರದ ನಿರ್ಧಾರಕ್ಕೆ ಧಾರ್ಮಿಕ ಬಣ್ಣ ನೀಡಿದ ನಂತರ, ಪ್ರತಿಕ್ರಿಯೆ ತಪ್ಪಿಸಲು ಮಾರ್ಯಂ ನವಾಜ್ ಆಡಳಿತ ಹಿಂಜರಿದು ಈ ನಿರ್ಧಾರವನ್ನು ಮುಂದೂಡಿದೆ" ಎಂದು ಹೇಳಲಾಗಿದೆ.
Advertisement