

ಗಾಜಾ ಪಟ್ಟಿಯಲ್ಲಿ ಸೈನಿಕ ನಿಯಂತ್ರಣವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, 70 ಶೇಕಡಾ ಪ್ರದೇಶವನ್ನು ವಶಕ್ಕೆ ಪಡೆಯುವಂತೆ ಸೇನೆಗೆ ನಿರ್ದೇಶನ ನೀಡಿದ್ದಾರೆ.
ಹಮಾಸ್ ವಿರುದ್ಧದ ಕಾರ್ಯಾಚರಣೆ ತೀವ್ರಗೊಳ್ಳುತ್ತಿರುವ ನಡುವೆಯೇ ಈ ಹೇಳಿಕೆ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಿಸಿದೆ.
ಪಶ್ಚಿಮ ತೀರದಲ್ಲಿನ ಇಸ್ರೇಲಿ ವಸಾಹತು ಪ್ರದೇಶದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಗಾಜಾದ ಸುಮಾರು 60 ಶೇಕಡಾ ಪ್ರದೇಶವನ್ನು ಇಸ್ರೇಲ್ ಸೇನೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಘೋಷಿಸಿದ್ದಾರೆ. ಅಲ್ಲದೆ, ಹಮಾಸ್ ಮೇಲೆ ಎಲ್ಲಾ ದಿಕ್ಕಿನಿಂದ ಒತ್ತಡ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಗಾಜಾದ 70 ಶೇಕಡಾ ಪ್ರದೇಶವನ್ನು ಹಿಡಿತಕ್ಕೆ ತೆಗೆದುಕೊಳ್ಳುವಂತೆಯೂ ಸೇನೆಗೆ ನಿರ್ದೇಶನ ನೀಡಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ.
ನಾವು ಈಗ ಹಮಾಸ್ ಅನ್ನು ಎಲ್ಲಾ ದಿಕ್ಕಿನಿಂದ ಒತ್ತಡಕ್ಕೆ ಒಳಪಡಿಸುತ್ತಿದ್ದೇವೆ. ಈಗಾಗಲೇ 60 ಶೇಕಡಾ ಪ್ರದೇಶ ನಮ್ಮ ಹಿಡಿತದಲ್ಲಿದೆ. ಮುಂದಿನ ಹಂತದಲ್ಲಿ ಅದನ್ನು 70 ಶೇಕಡಾಗೆ ಹೆಚ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಇದರಿಂದ ಗಾಜಾದಲ್ಲಿ ಇಸ್ರೇಲ್ ತನ್ನ ಸೈನಿಕ ಹಸ್ತಕ್ಷೇಪವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರ್ಧಾರಕ್ಕೆ ಬಂದಿದೆ. ಈಗಾಗಲೇ ಕದನ ವಿರಾಮ ಒಪ್ಪಂದ ಜಾರಿಯಲ್ಲಿದ್ದರೂ, ನೆಲಮಟ್ಟದಲ್ಲಿ ಹಿಂಸಾಚಾರ ಮತ್ತು ದಾಳಿಗಳು ಮುಂದುವರಿದಿವೆ.
ಮೊದಲ ಹಂತದ ಕದನ ವಿರಾಮದಡಿಯಲ್ಲಿ, 2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ವೇಳೆ ಅಪಹರಿಸಲ್ಪಟ್ಟ ಇಸ್ರೇಲಿ ಬಂಧಿತರ ಬಿಡುಗಡೆ ಹಾಗೂ ಇಸ್ರೇಲ್ ಕಾರಾಗೃಹದಲ್ಲಿದ್ದ ಪ್ಯಾಲೆಸ್ಟೀನಿಯನ್ ಕೈದಿಗಳ ವಿನಿಮಯ ಪ್ರಕ್ರಿಯೆ ನಡೆದಿತ್ತು.
ಆದರೆ, ಎರಡನೇ ಹಂತದಲ್ಲಿ ಹಮಾಸ್ ಶಸ್ತ್ರತ್ಯಾಗ ಮಾಡುವುದು ಮತ್ತು ಗಾಜಾದ ಕೆಲವು ಪ್ರದೇಶಗಳಿಂದ ಇಸ್ರೇಲ್ ಸೇನೆ ಹಿಂತೆಗೆದುಕೊಳ್ಳುವುದು ನಿರೀಕ್ಷಿತವಾಗಿದ್ದರೂ, ಮಾತುಕತೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಉಭಯ ರಾಷ್ಟ್ರಗಳು ಪರಸ್ಪರ ಕದನ ವಿರಾಮ ಉಲ್ಲಂಘನೆ ಆರೋಪಗಳನ್ನು ಮಾಡುತ್ತಿವೆ.
ಒಪ್ಪಂದದ ಪ್ರಕಾರ, ಹಮಾಸ್ ನಿಯಂತ್ರಣದ ಪ್ರದೇಶ ಮತ್ತು ಇಸ್ರೇಲ್ ಸೇನೆಯ ನಿಯಂತ್ರಣದ ಪ್ರದೇಶಗಳ ನಡುವೆ “ಯೆಲ್ಲೋ ಲೈನ್” ಎನ್ನುವ ಗಡಿಯ ಹಿಂದೆ ಇಸ್ರೇಲ್ ಪಡೆಗಳು ಹಿಂತೆಗೆದುಕೊಳ್ಳಬೇಕಿತ್ತು. ಆದರೆ, ನೆತನ್ಯಾಹು ಇತ್ತೀಚಿನ ಹೇಳಿಕೆಗಳು ಆ ಪ್ರಕ್ರಿಯೆ ಇನ್ನಷ್ಟು ದೂರ ಸಾಗುವ ಸಾಧ್ಯತೆಯನ್ನು ಕುಂಠಿತಗೊಳಿಸಿವೆ.
ಇದಕ್ಕೂ ಮುನ್ನ ಮೇ 15ರಂದು ಮಾತನಾಡಿದ್ದ ನೆತನ್ಯಾಹು, “ನಾವು ಹೊರಬರಲಿಲ್ಲ. ಇಂದು 60 ಶೇಕಡಾ ಪ್ರದೇಶ ನಮ್ಮ ಹಿಡಿತದಲ್ಲಿದೆ. ನಾಳೆ ಏನಾಗುತ್ತದೆ ನೋಡೋಣ” ಎಂದು ಹೇಳಿದ್ದರು.
ಇದೀಗ ಅದೇ ಹೇಳಿಕೆಯನ್ನು ಮುಂದುವರಿಸಿರುವ ಅವರು, ಗಾಜಾದ ಮೇಲೆ ಸಂಪೂರ್ಣ ಸೈನಿಕ ಒತ್ತಡ ಮುಂದುವರಿಯಲಿದೆ ಎಂಬ ಸಂದೇಶ ನೀಡಿದ್ದಾರೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತೆ ತಾರಕಕ್ಕೇರುವ ಸಾಧ್ಯತೆಗಳು ಕಂಡು ಬರುತ್ತಿವೆ.
ಕದನ ವಿರಾಮ ಇದ್ದರೂ ಗಾಜಾದಲ್ಲಿ ಪ್ರತಿದಿನವೂ ಸ್ಫೋಟಗಳು, ವಾಯುದಾಳಿಗಳು ಮತ್ತು ಗುಂಡಿನ ಚಕಮಕಿಗಳು ವರದಿಯಾಗುತ್ತಿವೆ.
ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಕದನ ವಿರಾಮ ಜಾರಿಯಾದ ನಂತರವೂ ಇಸ್ರೇಲ್ ದಾಳಿಗಳಲ್ಲಿ 900ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ತಿಳಿಸಿದೆ. ವಿಶ್ವಸಂಸ್ಥೆ ಕೂಡ ಈ ಅಂಕಿಅಂಶಗಳನ್ನು ವಿಶ್ವಾಸಾರ್ಹವೆಂದು ಪರಿಗಣಿಸಿದೆ.
ಇದರ ನಡುವೆ, ಇಸ್ರೇಲ್ ಸೇನೆ ಹಮಾಸ್ನ ಸಶಸ್ತ್ರ ವಿಭಾಗದ ಹೊಸ ಮುಖ್ಯಸ್ಥ ಮೊಹಮ್ಮದ್ ಓದೆಹ್ ಹತ್ಯೆಗೀಡಾಗಿರುವುದಾಗಿ ಘೋಷಿಸಿದೆ. ಅವರ ಉತ್ತರಾಧಿಕಾರಿಯನ್ನೂ ಕೆಲವು ವಾರಗಳ ಹಿಂದೆ ಇಸ್ರೇಲ್ ಹೊಡೆದುರುಳಿಸಿತ್ತು. 2023ರ ಅಕ್ಟೋಬರ್ ದಾಳಿಯ ನಂತರದಿಂದ ಹಮಾಸ್ ನಾಯಕತ್ವವನ್ನು ಸಂಪೂರ್ಣವಾಗಿ ದುರ್ಬಲಗೊಳಿಸುವ ಉದ್ದೇಶದಿಂದ ಇಸ್ರೇಲ್ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.
Advertisement