

ಕಠ್ಮಂಡು: ಭೀಕರ ಪ್ರವಾಹಕ್ಕೆ ತುತ್ತಾಗಿರುವ ನೇಪಾಳದಲ್ಲಿ ಸುರಂಗ ಮಾರ್ಗದಲ್ಲಿ ಇಬ್ಬರ ಜೀವಂತ ರಕ್ಷಣೆ ಬಳಿಕ ಮತ್ತೊಂದು ಪವಾಡವೇ ನಡೆದಿದ್ದು, ಕಳೆದ 10 ದಿನಗಳಿಂದ ಅವಶೇಷಗಳಡಿಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಮತ್ತೆ ಇಬ್ಬರನ್ನು ರಕ್ಷಣೆ ಮಾಡಲಾಗಿದೆ.
ಹೌದು.. ಭೀಕರ ಪ್ರವಾಹ ಸಂಭವಿಸಿ 10 ದಿನಗಳ ಬಳಿಕ ನೇಪಾಳದಲ್ಲಿ ಅವಶೇಷಗಳಡಿ ಸಿಲುಕಿದ್ದ ಚೀನಿ ಪ್ರಜೆ ಹಾಗೂ 64 ವರ್ಷದ ಮಹಿಳೆಯನ್ನು ಜೀವಂತವಾಗಿ ರಕ್ಷಿಸಲಾಗಿದೆ. ಇದೇ ವೇಳೆ, ನಾಪತ್ತೆಯಾಗಿರುವ ಸಾವಿರಾರು ಮಂದಿಗಾಗಿ ರಕ್ಷಣಾ ತಂಡಗಳ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಸುಮಾರು 225 ಮೀಟರ್ ದೂರದಲ್ಲಿ ಸಿಲುಕಿದ್ದ ಚೀನಿ ಪ್ರಜೆ ಲುಹೈತಾವೊ ಅವರನ್ನು ನೇಪಾಳ ಸೇನೆ ಹಾಗೂ ವಿದೇಶಿ ರಕ್ಷಣಾ ತಜ್ಞರ ಜಂಟಿ ತಂಡ ಜೀವಂತವಾಗಿ ಹೊರತೆಗೆದಿದೆ. ಬಳಿಕ ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತೆಯೇ ಪ್ರವಾಹದ ಕೆಲವೇ ಗಂಟೆಗಳ ಬಳಿಕ ನುವಾಕೋಟ್ನ ಬೆತ್ರಾವತಿಯಲ್ಲಿ ಅವಶೇಷಗಳಡಿ ಹೂತುಹೋಗಿದ್ದ ನಾಲ್ಕಂತಸ್ತಿನ ಕಟ್ಟಡದ ಮೇಲಿನ ಮಹಡಿಯಿಂದ 64 ವರ್ಷದ ಮಹಿಳೆ ಚಂಡಿಕಾ ಕುಮಾರಿ ಶ್ರೇಷ್ಠಾ ಅವರನ್ನು ಸಶಸ್ತ್ರ ಪೊಲೀಸ್ ಪಡೆ ರಕ್ಷಿಸಿದೆ.
10 ದಿನಗಳ ಕಾಲ ಕಟ್ಟಡದೊಳಗೆ ಸಿಲುಕಿದ್ದ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಾಥಮಿಕ ಚಿಕಿತ್ಸೆಗಾಗಿ ಸೇನಾ ಶಿಬಿರಕ್ಕೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.
9 ದಿನಗಳ ಬಳಿಕ ಇಬ್ಬರು ಕಾರ್ಮಿಕರ ಪಾರು
ಇದಕ್ಕೂ ಒಂದು ದಿನ ಮೊದಲು ನೇಪಾಳದ ಕಾರ್ಮಿಕರಾದ ಸಂಜಯ್ ಸಾಹ್ ಮತ್ತು ಕಬೀರ್ ಮಹಾರ್ಜನ್ ಅವರನ್ನು ಅಪ್ಪರ್ ತ್ರಿಶೂಲಿ-3A ಜಲವಿದ್ಯುತ್ ಯೋಜನೆಯ ಸುರಂಗದಿಂದ ಜೀವಂತವಾಗಿ ರಕ್ಷಿಸಲಾಗಿತ್ತು. ಇಬ್ಬರೂ ಸುಮಾರು 40 ಮೀಟರ್ ಒಳಗೆ ಸಿಲುಕಿದ್ದರು.
ಆಗಸ್ಟ್ 26ರಂದು ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭಾರೀ ಕುಸಿತದಿಂದ ಭೋಟೇಕೋಶಿ ನದಿಯಲ್ಲಿ ಸುನಾಮಿಯಂತೆಯೇ ನೀರು, ಮಣ್ಣು ಹಾಗೂ ಅವಶೇಷಗಳ ಪ್ರವಾಹ ಉಂಟಾಗಿ ಹಲವಾರು ವಸತಿ ಪ್ರದೇಶಗಳು ಮತ್ತು ಜಲವಿದ್ಯುತ್ ಯೋಜನೆಗಳಿಗೆ ಭಾರೀ ಹಾನಿಯಾಗಿತ್ತು.
ಸಾವಿನ ಸಂಖ್ಯೆ 1,344ಕ್ಕೇರಿಕೆ, 4,898 ಮಂದಿ ನಾಪತ್ತೆ
ನೇಪಾಳ ಪೊಲೀಸರ ಪ್ರಕಾರ ಶನಿವಾರದ ವೇಳೆಗೆ 1,344 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 4,898 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಒಟ್ಟು 8,631 ಮಂದಿಯನ್ನು ರಕ್ಷಿಸಲಾಗಿದ್ದು, 3,655 ಮಂದಿ ತಾತ್ಕಾಲಿಕ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಪತ್ತೆಯಾದ ಮೃತದೇಹಗಳ ಪೈಕಿ 501 ಇನ್ನೂ ಗುರುತಿಸಲಾಗಿಲ್ಲ. ಮೃತರ ಗುರುತು ಪತ್ತೆಹಚ್ಚಲು 1,260 ಮೃತದೇಹಗಳಿಂದ ಹಾಗೂ 972 ಸಂಬಂಧಿಕರಿಂದ DNA ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಪ್ರವಾಹದಿಂದ 11 ಜಲವಿದ್ಯುತ್ ಯೋಜನೆಗಳು ಮತ್ತು ಒಂದು ಸೌರ ವಿದ್ಯುತ್ ಘಟಕ ಹಾನಿಗೊಳಗಾಗಿದ್ದು, ಈ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದವರೂ ಸೇರಿದಂತೆ 942 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ರಸುವಾಗಢಿ ಜಲವಿದ್ಯುತ್ ಯೋಜನೆಯೊಂದರಲ್ಲೇ 93 ಮಂದಿ ನಾಪತ್ತೆಯಾಗಿದ್ದಾರೆ.
ಭಾರತ, ಚೀನಾ, ದಕ್ಷಿಣ ಕೊರಿಯಾ ತಂಡಗಳಿಂದ ನೆರವು
ನೇಪಾಳ ಸೇನೆಯೊಂದಿಗೆ ಭಾರತ, ಚೀನಾ ಮತ್ತು ದಕ್ಷಿಣ ಕೊರಿಯಾದ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆಯಲ್ಲಿ ಕೈಜೋಡಿಸಿವೆ. 500ಕ್ಕೂ ಹೆಚ್ಚು ಎಂಜಿನಿಯರ್ಗಳು ವಾಟ್ಸಾಪ್ ಗುಂಪಿನ ಮೂಲಕ ಸುರಂಗಗಳ ನಕ್ಷೆ, ವಿದ್ಯುತ್ ಘಟಕಗಳ ವಿನ್ಯಾಸ ಹಾಗೂ ನಾಪತ್ತೆಯಾದ ಕಾರ್ಮಿಕರ ಮಾಹಿತಿಯನ್ನು ರಕ್ಷಣಾ ತಂಡಗಳಿಗೆ ಒದಗಿಸುತ್ತಿದ್ದಾರೆ.
ಮಣ್ಣು, ಕೆಸರು, ಬಂಡೆಗಳು ಹಾಗೂ ಕುಸಿದ ಕಾಂಕ್ರೀಟ್ಗಳ ನಡುವೆ ರಕ್ಷಣಾ ಕಾರ್ಯಾಚರಣೆ ಸವಾಲಿನದ್ದಾಗಿದ್ದರೂ, ನಾಪತ್ತೆಯಾದವರಿಗಾಗಿ ಶೋಧ ಮುಂದುವರಿದಿದೆ.