ತೆಂಗಿನ ಮರ ಎಂದರೆ ಭಾರತೀಯರಿಗೆ ಪೂಜ್ಯ ಭಾವ. ತೆಂಗಿನ ಮರವನ್ನು ಕಲ್ಪವೃಕ್ಷ ಎಂತಲೂ ಕರೆಯುತ್ತಾರೆ. ತೆಂಗಿನಕಾಯಿ ಮರವನ್ನು ಕಲ್ಪವೃಕ್ಷ ಎನ್ನುತಾರೆ. ಏಕೆಂದರೆ ತೆಂಗಿನಮರ ಕೊಡುವ ತೆಂಗಿನ ಕಾಯಿ, ಇದರ ಎಲೆ/ಗರಿ, ಕತ್ತ, ಕಾಂಡ ಎಲ್ಲ ಉಪಯೋಗಕಾರಿಯಾಗಿವೆ. ತೆಂಗಿನ ಮರದ ಪ್ರತಿಯೊಂದು ಭಾಗವು ಮನುಷ್ಯನಿಗೆ ಬಹುಪಯೋಗಿ.
ಭಾರತದಾದ್ಯಂತ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಒರಿಸ್ಸಾ, ಗೋವಾರಾಜ್ಯಗಳ ಕರಾವಳಿ ಪ್ರಾಂತಗಳಲ್ಲಿ ಹೆಚ್ಚಾಗಿ ಸಾಗುವಳಿ ಮಾಡುತ್ತಾರೆ. ಅಂಡಮಾನ್-ನಿಕೋಬಾರ್ ದ್ವೀಪಗಳ ಸಮುದ್ರ ತೀರ ಪ್ರಾಂತ್ಯದಲ್ಲೂ ತೆಂಗು ಬೆಳೆಯಲಾಗುತ್ತದೆ. ಅಸ್ಸಾಂ, ಗುಜರಾತ್, ಮಹಾರಾಷ್ಟ್ರ, ನಾಗಲ್ಯಾಂಡ್ ತ್ರಿಪುರ, ಪಶ್ಚಿಮ ಬಂಗಾಳ, ಲಕ್ಷದ್ವೀಪ, ಪಾಂಡಿಚೆರಿ ರಾಜ್ಯಗಳಲ್ಲಿಯೂ ಸಾಗುವಳಿ ನಡೆಯುತ್ತಿದೆ.
ಇನ್ನು ಕರ್ನಾಟಕದಲ್ಲಿ ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತೆಂಗನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
ತೆಂಗಿಗೆ ರೋಗ ಬಾಧೆ ಸಾಮಾನ್ಯ. ಕಾಯಿ ಪೀಚು ಪೀಚಾಗುವುದು, ಮಿಳ್ಳೆಗಳು ಉದುರಿ ಹೋಗುವುದು, ನುಸಿಪೀಡೆ, ರಸಸೋರುವಿಕೆ ಬಾಧೆ... ಹೀಗೆ ಹತ್ತು ಹಲವಾರು ಸಮಸ್ಯೆಗಳಿಂದ ತೆಂಗಿನ ಮರ ಬಳಲುತ್ತದೆ.
ತೆಂಗಿನ ಮರ ಚೆನ್ನಾಗಿ ಬೆಳೆಯಲು ಕಾಯಿ ಬಿಡುವ ಪ್ರತಿ ತೆಂಗಿನ ಮರಕ್ಕೆ ಕನಿಷ್ಠ 45 ಲೀಟರ್ ನೀರು ಉಣಿಸಬೇಕು. ಈ ಮರಕ್ಕೆ ವರ್ಷಕ್ಕೆ 100 ಕೆ.ಜಿ. ಹಸಿರೆಲೆ ಗೊಬ್ಬರ, 30 ಕೆ.ಜಿ. ತಿಪ್ಪೆಗೊಬ್ಬರ ಮತ್ತು 10 ಕೆ.ಜಿ. ಒಲೆಬೂದಿ ಹಾಕಬೇಕು.
ಒಂದು ತಿಂಗಳವರೆಗೆ ದೇಸೀ ಆಕಳ ಮಜ್ಜಿಗೆ ಸಂಗ್ರಹಿಸಿ, ಚೆನ್ನಾಗಿ ಹುಳಿ ಬಂದ ಎರಡು ಲೀಟರ್ ಮಜ್ಜಿಗೆಯನ್ನು 18 ಲೀಟರ್ಗೆ ನೀರಿಗೆ ಸೇರಿಸಿ ರೋಗ ಪೀಡಿತ ಬೆಳೆಗಳಿಗೆ ಸಿಂಪಡಿಸಬೇಕು.
ಮೊಸರನ್ನು ಮರದ ಬೇರಿನ ಸುತ್ತ ಪ್ರತಿದಿನ ಹಾಕಬೇಕು. ಸ್ವಲ್ಪ ತಿಂಗಳು ನಿತ್ಯ ಇದನ್ನು ಮಾಡುತ್ತಿದ್ದರೆ ತೆಂಗಿನ ಮಿಳ್ಳೆ ಉದುರುವುದು ಕಮ್ಮಿಯಾಗುತ್ತದೆ. ಹಸಿಮೆಣಸಿನಕಾಯಿ ಹಾಗೂ ಬೇವಿನ ಸೊಪ್ಪನ್ನು ಚೆನ್ನಾಗಿ ಅರೆದು 18 ಲೀಟರ್ ನೀರಿಗೆ ಒಂದು ಲೀಟರ್ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಕಿ ಸಿಂಪಡಿಸಿದರೆ ಕೀಟಬಾಧೆ ಬರುವುದಿಲ್ಲ.ಹುಳು, ನುಸಿ ನಿಯಂತ್ರಣಕ್ಕೆ ತೆಂಗಿನ ಮರದ ಸುಳಿಯ ಬಳಿ ಅರಿಶಿಣ, ಇಂಗು, ಬೆಳ್ಳುಳ್ಳಿ, ಶುಂಠಿಗಳನ್ನು ಕಟ್ಟಬಹುದು.
ತೇವಾಂಶ ಹೆಚ್ಚಾಗಿ ಅತಿ ಶೀತದಿಂದ ರಸ ಸೋರುವ ರೋಗ ಬರುತ್ತದೆ. ಅಂತಹ ಸಂದರ್ಭದಲ್ಲಿ 4 ಅಡಿ ಎತ್ತರದಲ್ಲಿ ದಪ್ಪ ಮೊಳೆಯಿಂದ ಎರಡೂ ಕಡೆ ರಂಧ್ರ ಮಾಡಬೇಕು. ರಸ ಸೋರಿಹೋದ ಮೇಲೆ ಬೆಂಕಿ ಹಚ್ಚಿದ ಶಾಖ ಕೊಡಬೇಕು. ಕಾಂಡಕ್ಕೆ ಸುಣ್ಣ ಬಳಿಯಬೇಕು. ಮಣ್ಣು, ಗೊಬ್ಬರ, ನೀರು ಸರಿಪಡಿಸಿ ಗುಣಪಡಿಸಬಹುದು. ಉಳಿಯಿಂದ ರಸ ಸೋರುವ ಜಾಗವನ್ನು ಚೌಕಾಕಾರವಾಗಿ ಕೆತ್ತಬೇಕು. ಅದಕ್ಕೆ ಎಕ್ಕದ ಸೊಪ್ಪು, ತುಂಬೆ ಸೊಪ್ಪು, ಅಂಬಳಿ ಸೊಪ್ಪು, ಸೇರಿಸಿ ಅರೆದು ರಸವನ್ನು ಹಚ್ಚಬೇಕು. ಹೀಗೆ ನಾಲ್ಕಾರು ಬಾರಿ ಹಚ್ಚಿದರೆ. ಕ್ರಮೇಣ ರೋಗ ವಾಸಿಯಾಗುತ್ತಾ ಬರುತ್ತದೆ.
ತೆಂಗಿನ ಮರಗಳ ಬುಡಭಾಗದಲ್ಲಿ ಕಾಂಡ ಸೋರುವ ಲಕ್ಷಣಗಳು ಕಂಡುಬರುತ್ತವೆ. ಬುಡದಿಂದ ಒಂದು ಮೀಟರ್ ಎತ್ತರದೊಳಗೆ ಕೆಂಪುಮಿಶ್ರಿತ ಕಂದುಬಣ್ಣದ ದ್ರವ ತೊಗಟೆಯ ಸೀಳುಗಳಿಂದ ಹೊರಬರುತ್ತದೆ. ಈ ರೋಗ ನಿಯಂತ್ರಿಸಲು 50 ಕೆ.ಜಿ. ಕೊಟ್ಟಿಗೆ ಗೊಬ್ಬರವನ್ನು ಪ್ರತಿ ತೆಂಗಿನ ಮರಕ್ಕೆ ವರ್ಷಕ್ಕೊಮ್ಮೆ ಸೇರಿಸುವ ಜೊತೆಗೆ 5 ಕೆ.ಜಿ. ಬೇವಿನ ಹಿಂಡಿ, 50 ಗ್ರಾಂ ಟ್ರೈಕೋಡರ್ಮ ಎಂಬ ಜೀವಾಣುವನ್ನು ತೆಂಗಿನಮರದ ಬುಡಕ್ಕೆ ಸೇರಿಸಬೇಕು. ರೋಗದ ಸೋಂಕು ಕಾಣಿಸಿಕೊಳ್ಳುವ ಮರಗಳನ್ನು ಗುರುತಿಸಿ, ತೊಗಟೆ ಸಹಿತ ರೋಗಕಾರಕ ಮಚ್ಚೆಗಳನ್ನು ಕೆತ್ತಿ ತೆಗೆಯಬೇಕು. ಕೆತ್ತಿದ ಭಾಗಕ್ಕೆ ಶೇ 10ರ ತಾಮ್ರದ ಆಕ್ಸಿ ಕ್ಲೋರೈಡ್ ಶಿಲೀಂಧ್ರನಾಶಕ ಲೇಪಿಸಿ, ಬೇರಿನ ಮೂಲಕ ಪ್ರತಿ ಮೂರು ತಿಂಗಳಿಗೊಮ್ಮೆ 5 ಮಿ.ಲೀ. ಟ್ರೈಕೋಮಾಫರ್ ಅನ್ನು 100 ಲೀಟರ್ ನೀರಿನಲ್ಲಿ ಮಿಶ್ರಣಮಾಡಿ ಕೊಡಬೇಕು.
1 ಕೆ.ಜಿ. ಕಡಲೆಕಾಯಿ ಹಿಂಡಿಯನ್ನು 4 ಲೀಟರ್ ನೀರಿನಲ್ಲಿ ಸ್ವಲ್ಪ ಹುಳಿ ಮಜ್ಜಿಗೆಯೊಂದಿಗೆ 5–6 ದಿನ ಹುದುಗಿಸಿ 2 ಲೀಟರ್ ಅಳತೆ ಡಬ್ಬದಲ್ಲಿ ಅರ್ಧದಷ್ಟು ತುಂಬಿಸಿ ನೆಲದಿಂದ 5 ಅಡಿ ಎತ್ತರದಲ್ಲಿ ಕಟ್ಟಿದರೆ ಸುಳಿ ಕೊರೆಯುವ ಹುಳುಗಳನ್ನು ನಾಶಪಡಿಸಬಹುದು.
ಅಣಬೆ ರೋಗ ತಡೆಯಲು ಬಸಿಗಾಲುವೆ ಸರಿಪಡಿಸಿ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದನ್ನು ನಿಯಂತ್ರಿಸಲು ಈ ಮೇಲೆ ತಿಳಿಸಿರುವ (ಕಾಂಡ ಸೋರುವ ಸಮಸ್ಯೆಗೆ ನೀಡಿರುವ ಪರಿಹಾರ) ಉಪಚಾರದೊಂದಿಗೆ ರೋಗಬಾಧಿತ ಮರಗಳ ಸುತ್ತ 2 ಮೀ. ಸುತ್ತಳತೆಯಲ್ಲಿ 1 ಮೀ. ಆಳ, 30 ಸೆ.ಮೀ. ಅಗಲದ ಕಾಲುವೆ ನಿರ್ಮಿಸಿ 4 ಕೆ.ಜಿ. ಗಂಧಕದ ಪುಡಿ ಸೇರಿಸಬೇಕು. ರೋಗಕ್ಕೆ ಬಲಿಯಾದ ಮರಗಳನ್ನು ಬುಡಸಮೇತ ತೆಗೆದು ಆ ಗುಂಡಿಗೆ 3 ಮಿ.ಲೀ. ಟ್ರೈಕೋಮಾಫರ್ ಅನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣಮಾಡಿ 10- 15ಲೀ. ಸುರಿಯುವುದರಿಂದ ಮಣ್ಣಿನಲ್ಲಿರುವ ರೋಗಾಣುಗಳನ್ನು ನಿರ್ಮೂಲನೆ ಮಾಡಬಹುದು.
ತೆಂಗಿನ ಸುಳಿಯೊಳಗೆ ದುಂಬಿ ಅಥವಾ ಕೆಂಪುಮೂತಿಯ ಹುಳುಗಳು ಹೊಕ್ಕಿ ಮರವನ್ನು ಹಾಳು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಉಪ್ಪು, ಮರಳಿನ ಮಿಶ್ರಣವನ್ನು ಸುಳಿಯ ಒಳಗೆ ಪ್ರತಿವರ್ಷ ಹಾಕಬೇಕು. ಮರ ಅಲ್ಲಾಡಿದಂತೆ ಸುಳಿಯೊಳಗೆ ಮರಳು ಇಳಿಯುತ್ತದೆ. ಹುಳುಗಳಿದ್ದರೆ ಹೊರಬರಲು ಆಗದು. ಆಹಾರ ತಿನ್ನಲಾಗದೇ ಸತ್ತುಹೋಗುತ್ತವೆ.
ಸುಳಿ ಕೀಟಗಳು ಸಸ್ಯಗಳನ್ನು ಕತ್ತರಿಸಿದ ಭಾಗಕ್ಕೆ ಬೋರ್ಡೊ ಪೇಸ್ಟ್ ಲೇಪಿಸಿದರೆ ಸುಳಿರೋಗ ಬಾಧೆಯನ್ನು ತಡೆಗಟ್ಟಬಹುದು.
ಮಳೆಗಾಲದಲ್ಲಿ ಕೊಳೆರೋಗ ಕಾಡದಿರಲು, ಕಾಡು ಸುವರ್ಣಗಡ್ಡೆಯ ಗಡ್ಡೆ ಮತ್ತು ಮೇಲ್ಭಾಗದ ಸಸ್ಯವನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಕುದಿಯುವ ನೀರಿಗೆ ಹಾಕಬೇಕು. 24 ಗಂಟೆ ನಂತರ ಸೋಸಿ ಶೇಖರಿಸಬೇಕು. ಆಗಸ್ಟ್ ತಿಂಗಳಿನಲ್ಲಿ ಸಿಂಪಡಿಸಿದರೆ ಉತ್ತಮ.
ತೆಂಗಿನ ಜೊತೆ ಅಂತರ ಬೆಳೆಯಾಗಿ ದ್ವಿದಳ ಧಾನ್ಯ ಬೆಳೆದರೆ ಉತ್ತಮ. ದ್ವಿದಳ ಧಾನ್ಯ ಬೆಳೆದಾಗ ಸಾರಜನಕ ಭೂಮಿಯಲ್ಲಿ ಸೇರಿ ತೆಂಗಿಗೆ ಉಪಯುಕ್ತವಾಗುತ್ತದೆ. ಉಪ ಬೆಳೆಗಳಿಗೆ ಕೊಡುವ ನೀರು ತೇವಾಂಶವನ್ನು ಕಾಪಾಡಿ, ತೆಂಗಿಗೆ ಸಹಾಯವಾಗುತ್ತದೆ.
Advertisement