ನವದೆಹಲಿ: ಉತ್ತರ ಪ್ರದೇಶ, ಬಿಹಾರ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಮಳೆ ಅಬ್ಬರ ಮುಂದುವರೆದು ಪ್ರಹಾವ ಪರಿಸ್ಥಿತಿ ತಲೆದೋರಿರುವ ಹೊರತಾಗಿಯೂ ಭಾರತದಲ್ಲಿ ಮಳೆ ಕೊರತೆ ಉಂಟಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ.
ಅಸ್ಸಾಂ, ಬಿಹಾರ, ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಇದ್ದರೂ, ಒಟ್ಟಾರೆಯಾಗಿ ಆಗಸ್ಟ್ ತಿಂಗಳಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ. 24ರಷ್ಟು ಕಡಿಮೆ ಮಳೆ ಬಿದ್ದಿದೆ. ಕೇಂದ್ರ ಭಾರತದಲ್ಲಿ ಹಲವು ದಿನಗಳಿಂದ ಮಳೆ ಬೀಳದಿರುವುದು ಇದಕ್ಕೆ ಕಾರಣ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಬಗ್ಗೆ ವರದಿ ನೀಡಿರುವ ಹವಾಮಾನ ಇಲಾಖೆ, ಕೇಂದ್ರ ಭಾರತದಲ್ಲಿ ಈವರೆಗೂ ಶೇ. 58 ರಷ್ಟು ಮಳೆ ಕೊರತೆಯಾಗಿದ್ದು, ಈಶಾನ್ಯ ಭಾರತದಲ್ಲಿ ಆಗಸ್ಟ್ನಲ್ಲಿ ಶೇಕಡ 37ರಷ್ಟು ಕಡಿಮೆ ಮಳೆ ಬಿದ್ದಿದೆ.
ಇದರಿಂದಾಗಿ ಜೂನ್ ತಿಂಗಳ ಮೊದಲ ವಾರದ ಬಳಿಕ ಒಟ್ಟಾರೆ ಸರಾಸರಿ ಮುಂಗಾರು ಮಳೆ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ದೇಶಾದ್ಯಂತ ಧೀರ್ಘಾವಧಿ ಮಳೆ ಕೊರತೆ ಪ್ರಮಾಣ ಶೇಕಡ 5ರಷ್ಟಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಮುಂದಿನ ದಿನಗಳಲ್ಲಿ ಮಳೆ ಚೇತರಿಕೆ
ಇದೇ ವೇಳೆ ಪ್ರಸ್ತುತ ಮಳೆ ಕೊರತೆ ಎದುರಿಸುತ್ತಿರುವ ಮಧ್ಯ ಭಾರತ ಹಾಗೂ ಈಶಾನ್ಯ ಭಾರತದಲ್ಲಿ ಮುಂದಿನ ದಿನಗಳಲ್ಲಿ ಮಳೆ ಚೇತರಿಕೆ ಕಾಣುವ ಮುನ್ಸೂಚನೆ ಲಭಿಸಿದೆ. ಬಂಗಾಳಕೊಲ್ಲಿಯಲ್ಲಿ ಗಾಳಿಯ ಒತ್ತಡ ಕಡಿಮೆಯಾಗಿದ್ದು, ವಾರಾಂತ್ಯಕ್ಕೆ ಮಳೆ ಹೆಚ್ಚು ಸಕ್ರಿಯವಾಗಲಿದೆ. ಕೇಂದ್ರ ಭಾರತ ಹಾಗೂ ಪಶ್ಚಿಮ ಕರಾವಳಿಯಲ್ಲಿ ಮಳೆ ಪರಿಸ್ಥಿತಿ ಸುಧಾರಿಸಲಿದೆ ಎಂಬ ವಿಶ್ವಾಸವನ್ನು ಹವಾಮಾನ ಇಲಾಖೆಯ ಧೀರ್ಘಾವಧಿ ಮುನ್ಸೂಚನೆ ವಿಭಾಗದ ಮುಖ್ಯಸ್ಥ ಡಿ.ಶಿವಾನಂದ ಪೈ ಹೇಳಿದ್ದಾರೆ.
Advertisement