ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2016ನೇ ಸಾಲಿನ ಬಜೆಟ್ ನಲ್ಲಿ ನೀರಾವರಿ ಇಲಾಖೆಗೆ 14 ಸಾವಿರದ 477 ಕೋಟಿ ಮೀಸಲಿಡಲಾಗಿದೆ.
ಈ ಪೈಕಿ ಜಲಸಂಪನ್ಮೂಲ ಮೂಲ ಸೌಕರ್ಯ ಅಭಿವೃದ್ದಿಗೆ 550 ಕೋಟಿ ಅನುದಾನ ನೀಡಲಾಗಿದ್ದು, ನೀರಾವರಿ ಯೋಜನೆಗೆ 3000 ಕೋಟಿ ರು. ಮೀಸಲಿಡಲಾಗಿದೆ. ಮಲಪ್ರಭಾ ನಾಲಾ ಆಧುನೀಕರಣಕ್ಕೆ 962 ಕೋಟಿ ರುಪಾಯಿ ನೀಡಲಾಗಿದ್ದು, ಎತ್ತಿನ ಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರತ್ಯೇಕ 2 ನಿಗಮಗಳನ್ನು ರಚನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಯಲು ಸೀಮೆ ಜಿಲ್ಲೆಗಳಲ್ಲಿನ ನೀರನ ಬರ ನಿಗ್ರಹಕ್ಕೆ ಶಾಶ್ವತ ನೀರಾವರಿ ಯೋಜನೆಗಾಗಿ ವಿಶೇಷ ತಜ್ಞರ ಸಮಿತಿ ಮಾಡಲಾಗುವುದು ಮತ್ತು ಬಾಗಲಕೋಟೆ ಜಿಲ್ಲೆಯ ನವನಗರ ಘಟಕ-2ರ ಮೂಲಸೌಕರ್ಯ ಅಭಿವೃದ್ಧಿಗೆ 550 ಕೋಟಿ ರು.ಗಳನ್ನು ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ದಕ್ಷಿಣ ಪಿನಾಕಿನಿ ನದಿಗೆ ಬೆಂಗಳೂರಿನಿಂದ ಸಂಸ್ಕರಿಸಿದ ಕೊಳಚೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಕೆರೆಗಳಿಗೆ ನೀರು ಹರಿಸಲು ಗ್ರಾಮದ ಬಳಿ ಏತ ನೀರಾವರಿ ಯೋಜನೆ ಜಾರಿ ಮಾಡಲಾಗುವುದು. ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 100 ಕೋಟಿ ರು. ಮೀಸಲಿಡಲಾಗಿದ್ದು, ಘನ ತ್ಯಾಜ್ಯ ನಿರ್ವಹಣೆಗೆ 500 ಕೋಟಿ ರು. ಮಳೆ ನೀರು ಚರಂಡಿ ನಿರ್ಮಾಣಕ್ಕೆ 800 ಕೋಟಿ ಮೀಸಲಿಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
Advertisement