ಬೆಂಗಳೂರಿನಲ್ಲಿ ಇನ್ನು ಮುಂದೆ ನೆಲದಡಿಯಲ್ಲಿ ವಿದ್ಯುತ್ ಕೇಬಲ್: ಬಜೆಟ್ ನಲ್ಲಿ ಹಣ ಮೀಸಲು
ಬೆಂಗಳೂರು: ಜೋರಾಗಿ ಮಳೆ, ಗಾಳಿ ಬಂದರೆ ಮರದ ರೆಂಬೆಗಳು ಬಿದ್ದು ವಿದ್ಯುತ್ ತಂತಿ ಅಥವಾ ಕಂಬ ಬಿದ್ದು ವಿದ್ಯುತ್ ಇಲ್ಲದೆ ಹಲವು ದಶಕಗಳಿಂದ ತೊಂದರೆ ಅನುಭವಿಸುತ್ತಿರುವ ಬೆಂಗಳೂರಿಗರಿಗೆ ಕೊನೆಗೂ ಮುಕ್ತಿ ಸಿಕ್ಕುವ ಲಕ್ಷಣಗಳು ಕಾಣುತ್ತಿವೆ.
ಇನ್ನು ಮುಂದೆ ವಿದ್ಯುತ್ ಪೂರೈಕೆಯ ಕೇಬಲ್ ಗಳನ್ನು ನೆಲದಡಿಯಲ್ಲಿ (ಅಂಡರ್ ಗ್ರೌಂಡ್) ಅಳವಡಿಸಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಿನ್ನೆ ಬಜೆಟ್ ನಲ್ಲಿ ಈ ವಿಷಯ ಪ್ರಕಟಿಸಿದ್ದು , ಈ ಯೋಜನೆ ಬಗ್ಗೆ ವಿಸ್ತ್ರೃತ ಯೋಜನೆಯನ್ನು ತಯಾರಿಸಲಿದ್ದು ಆ ಮೂಲಕ ಹಂತಹಂತವಾಗಿ ಪ್ರಕ್ರಿಯೆಯನ್ನು ಮಾಡಬಹುದು. ನೆಲದಡಿಯಲ್ಲಿ ಕೇಬಲ್ ಅಳವಡಿಸುವ ಕೆಲಸ ನಗರದ ಕೆಲವು ಕಡೆಗಳಲ್ಲಿ ಈಗಾಗಲೇ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ವಿದ್ಯುತ್ ಪೂರೈಕೆ ನಿಗಮದ ಅಧಿಕಾರಿಗಳು ಹೇಳುತ್ತಾರೆ.
ನೆಲದಡಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಸುವುದರಿಂದ ವಿದ್ಯುತಾಘಾತದಿಂದ ಗಾಯವಾಗುವವರು ಮತ್ತು ಮೃತಪಡುವವರ ಸಂಖ್ಯೆಯನ್ನು ತಡೆಗಟ್ಟಬಹುದು. ಅಲ್ಲದೆ ವಿದ್ಯುತ್ ಕಡಿತವನ್ನು ಕೂಡ ತಡೆಗಟ್ಟಬಹುದು ಎಂದು ಅವರು ಹೇಳುತ್ತಾರೆ.
ಬೆಂಗಳೂರು ವಿದ್ಯುಚ್ಛಕ್ತಿ ನಿಗಮದ ನಾಲ್ಕು ಉಪ ವಿಭಾಗಗಳಲ್ಲಿ ಬೆಸ್ಕಾಂ ಪ್ರಾಯೋಗಿಕ ಯೋಜನೆಯನ್ನು ಕೈಗೊಂಡಿದೆ. ಬಾಣಸವಾಡಿ, ಕಮನಹಳ್ಳಿ, ಹೆಚ್ ಆರ್ ಬಿ ಆರ್ ಲೇ ಔಟ್, ಪೀಣ್ಯ, ಯಶವಂತಪುರ, ಜಾಲಹಳ್ಳಿ ಕ್ರಾಸ್, ಲಗ್ಗೆರೆ, ಬನ್ನೇರುಘಟ್ಟ, ಬೇಗೂರು, ಹುಳಿಮಾವು ಮತ್ತು ಎಲೆಕ್ಟ್ರಾನಿಕ್ ಸಿಟಿಗಳಲ್ಲಿ ಕೇಬಲ್ ಗಳನ್ನು ನೆಲದಡಿಗಳಲ್ಲಿ ವರ್ಗಾಯಿಸುವ ಕೆಲಸ ನಡೆಯುತ್ತಿದೆ.
ಈ ಕಾರ್ಯವನ್ನು ಕೈಗೊಳ್ಳಲು ಬೆಸ್ಕಾಂಗೆ ಸುಮಾರು 5 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ವರ್ಷದ ಆರಂಭದಲ್ಲಿ ಬೆಸ್ಕಾಂ 11 ಕೆವಿ ಲೈನ್ನ ಕೇಬಲ್ ಗಳನ್ನು ಬದಲಾಯಿಸಲು 533 ಕಿಲೋ ಮೀಟರ್ ವ್ಯಾಪ್ತಿಗೆ 100 ಕೋಟಿ ವೆಚ್ಚ ಮಾಡಲು ನಿರ್ಧರಿಸಿತ್ತು.