ಮುಂಬೈ: ಬೆಲೆ ಏರಿಕೆಯಾಗುತ್ತಿರುವುದರಿಂದ ಈರುಳ್ಳಿ ವರ್ತಕರು ತಮ್ಮ ಬಳಿ ಇರುವ ಈರುಳ್ಳಿಗೆ ಭದ್ರತೆ ಒದಗಿಸುತ್ತಿರುವ ವ್ಯಂಗ್ಯ ಚಿತ್ರಗಳನ್ನು ನೋಡಿದ್ದಿರಿ. ಆದರೆ ಈರುಳ್ಳಿ ವರ್ತಕರು ನಿಜವಾಗಿಯೂ ತಮ್ಮ ಸರಕಿಗೆ ಭದ್ರತೆ ಒದಗಿಸುವ ಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಈರುಳ್ಳಿ ಕದಿಯುವ ಮೂಲಕವೇ ಕಳ್ಳರು ಲಾಭ ಮಾಡಿಕೊಂಡಿದ್ದಾರೆ.
ಮುಂಬೈ ನಲ್ಲಿ ಸುಮಾರು 50 ಸಾವಿರ ಮೌಲ್ಯದ ಬರೋಬ್ಬರಿ 700 ಕೆ.ಜಿಯಷ್ಟು ಇರುಳ್ಳಿ ಕಳ್ಳತನವಾಗಿದೆ. ಮುಂಬೈ ನ ಪ್ರತೀಕ್ಷಾ ನಗರದ ಅನಂತ್ ನಾಯ್ಕ್ ಎಂಬುವ ವ್ಯಾಪಾರಿಗೆ ಸೇರಿದ 14 ಮೂಟೆ ಈರುಳ್ಳಿ ಕಳ್ಳತನವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ ರಾತ್ರಿ ಅಂಗಡಿಗೆ ಬೀಗ ಹಾಕಿ ತೆರಳಿದ್ದ ನಾಯ್ಕ್, ಶನಿವಾರ ಬೆಳಿಗ್ಗೆ ಬರುವ ವೇಳೆಗೆ ಈರುಳ್ಳಿ ಮೂಟೆಗಳು ಇಲ್ಲದೇ ಇರುವುದನ್ನು ಕಂಡು ಗಾಬರಿಯಾಗಿದ್ದಾರೆ. ಕಳ್ಳತನವಾಗಿರುವ ಇರುಳ್ಳಿ ಮೌಲ್ಯ, ಸುಮಾರು 50 ಸಾವಿರ ಎಂದು ಅಂದಾಜಿಸಲಾಗಿದೆ. ಐಪಿಸಿ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಮಹಾರಾಷ್ಟ್ರದಲ್ಲಿ ಸಗಟು ಈರುಳ್ಳಿ ದರ ಪ್ರತಿ ಕೆ.ಜಿ ಗೆ ರೂ 57 ರಷ್ಟಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆ.ಜಿಗೆ 80 ರೂಪಾಯಿಯಾಗಿದೆ.
Advertisement