ಆರ್ ಬಿಐ ತನ್ನ ಬಳಿ ಹೆಚ್ಚುವರಿಯಾಗಿ ಸಂಗ್ರಹಣೆಯಾಗಿರುವ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಬೇಕಿದ್ದು, ಎಷ್ಟು ಮೊತ್ತವನ್ನು ವರ್ಗಾವಣೆ ಮಾಡಬೇಕೆಂಬುದನ್ನು ನಿರ್ಧರಿಸುವುದಕ್ಕೆ ಸಮಿತಿ ರಚನೆ ಮಾಡಲು ನ.26 ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ಹಿಂದಿನ ಸಭೆಯ ನಿರ್ಧಾರದ ಪ್ರಕಾರ ಒಂದು ವಾರದಲ್ಲಿ ಸಮಿತಿ ರಚನೆಯಾಗಿ 90 ದಿನಗಳಲ್ಲಿ ವರದಿ ಸಲ್ಲಿಕೆಯಾಗಬೇಕಿತ್ತು. ಆದರೆ ಸಮಿತಿಯಲ್ಲಿ ಇರಬೇಕಾದ ಸದಸ್ಯರ ಬಗ್ಗೆ ಈಗ ಆರ್ ಬಿಐ-ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ಉಂಟಾಗಿದ್ದು, ಸರ್ಕಾರ ಆರ್ ಬಿಐ ನ ಮಾಜಿ ಗೌರ್ನರ್ ಬಿಮಾಲ್ ಜಲನ್ ಅವರು ಸಮಿತಿಯಲ್ಲಿರಬೇಕೆಂದು ಪಟ್ಟು ಹಿಡಿದ್ದಿದ್ದರೆ ಆರ್ ಬಿಐ ನ ಮಾಜಿ ಡೆಪ್ಯುಟಿ ಗೌರ್ನರ್ ರಾಕೇಶ್ ಮೋಹನ್ ಇರಬೇಕೆಂದು ಆರ್ ಬಿಐ ಪಟ್ಟು ಹಿಡಿದಿದೆ. ಆದರೆ ಈ ವರೆಗೂ ಸಮಿತಿ ಸದಸ್ಯರನ್ನು ಅಂತಿಮಗೊಳಿಸಲಾಗಿಲ್ಲ. ಸಮಿತಿಯ ಸದಸ್ಯರು ಯಾರಿರಬೇಕೆಂಬುದರ ಬಗ್ಗೆ ಸ್ವಲ್ಪ ಮಟ್ಟಿಗಿನ ಗೊಂದಲಗಳಿವೆ. ಒಂದು ವಾರದಲ್ಲಿ ಅದನ್ನು ಬಗೆಹರಿಸಲಾಗುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ಲಭ್ಯವಾಗಿದೆ.