ನವದೆಹಲಿ: ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ನೌಕರರ ಭವಿಷ್ಯ ನಿಧಿ ಸಂಸ್ಥೆಯ(ಇಪಿಎಫ್ಒ) ನಿರುದ್ಯೋಗಿ ಖಾತೆದಾರರು ಉದ್ಯೋಗ ಕಳೆದುಕೊಂಡು ಒಂದು ತಿಂಗಳವರೆಗೆ ತಮ್ಮ ಭವಿಷ್ಯ ನಿಧಿಯ ಶೇಕಡಾ 75ರಷ್ಟು ಭಾಗವನ್ನು ಹಿಂಪಡೆಯಬಹುದು ಎಂದು ಕೇಂದ್ರ ಕಾರ್ಮಿಕ ಖಾತೆ ಸಚಿವ ಹಾಗೂ ನೌಕರರ ಭವಿಷ್ಯ ನಿಧಿ ಸಂಸ್ಥೆಯ ಅಧ್ಯಕ್ಷ ಸಂತೋಷ್ ಕುಮಾರ್ ಗಂಗ್ ವಾರ್ ತಿಳಿಸಿದ್ದಾರೆ. ನಿನ್ನೆ ಭವಿಷ್ಯ ನಿಧಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅವರು ಈ ವಿಷಯ ತಿಳಿಸಿದ್ದಾರೆ.
ಒಂದು ವೇಳೆ ವ್ಯಕ್ತಿ ನೌಕರಿ ಕಳೆದುಕೊಂಡು ಎರಡು ತಿಂಗಳವರೆಗೆ ನಿರುದ್ಯೋಗಿಯಾಗಿದ್ದರೆ ಉಳಿದ ಶೇಕಡಾ 25 ಭಾಗ ಹಣವನ್ನು ಹಿಂತೆಗೆದುಕೊಳ್ಳಬಹುದು. ಈ ಮೂಲಕ ಭವಿಷ್ಯ ನಿಧಿ ಸಂಸ್ಥೆಯಲ್ಲಿ ನಿರುದ್ಯೋಗಿಗಳಿಗೆ ತಮ್ಮ ಖಾತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು. ಇಡೀ ಮೊತ್ತವನ್ನು ಹಿಂಪಡೆದ ನಂತರ ನಿರುದ್ಯೋಗಿಗಳಿಗೆ ಖಾತೆಯನ್ನು ಮುಚ್ಚುವ ಅಧಿಕಾರವಿರುತ್ತದೆ.
ಈ ಕುರಿತು ಭವಿಷ್ಯನಿಧಿ ಸಂಸ್ಥೆ ಕೂಡ ಟ್ವೀಟ್ ಮಾಡಿದೆ.ಕೆಲಸ ಕಳೆದುಕೊಂಡವರು ಜೀವನಕ್ಕೆ ಕಷ್ಟಪಡಬಾರದು ಎಂಬ ದೃಷ್ಟಿಯಿಂದ ಸರ್ಕಾರ ಈ ಅನುಕೂಲ ಮಾಡಿಕೊಟ್ಟಿದೆ. ಕೇವಲ ನಿರುದ್ಯೋಗಿಗಳು ಮಾತ್ರವಲ್ಲದೆ ಉದ್ಯೋಗಿಗಳಿಗೆ ಸಹ ಮನೆ ನಿರ್ಮಾಣ ಅಥವಾ ಮನೆ ಖರೀದಿ, ಮದುವೆ ಮತ್ತು ವೈದ್ಯಕೀಯ ವೆಚ್ಚಗಳಿಗೆ ಭವಿಷ್ಯನಿಧಿ ಹಣವನ್ನು ಹಿಂಪಡೆಯುವ ಸೌಲಭ್ಯವಿದೆ, ಆದರೆ ಪ್ರತಿ ಕಾರಣಕ್ಕೆ ನಿಗದಿತ ಮಾನದಂಡಗಳನ್ನು ಈಡೇರಿಸಬೇಕಾಗುತ್ತದೆ.
ಇತ್ತೀಚೆಗೆ ಭವಿಷ್ಯ ನಿಧಿಯಡಿ ಖಾತೆ ಹೊಂದಿರುವವರಿಗೆ ಶೇಕಡಾ 8.55ರಷ್ಟು ಬಡ್ಡಿ ಘೋಷಿಸಲಾಗಿತ್ತು. ಇದು ಕಳೆದ 5 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ.
Advertisement