ಮೊದಲ ಬಾರಿಗೆ ದೆಹಲಿ, ಮಣಿಪಾಲದಲ್ಲಿ ಜಾಗತಿಕ ಹೆಲ್ತ್ ಕೇರ್ ಸಮ್ಮಿಟ್

ಭಾರತೀಯ ಮೂಲದ ಅಮೆರಿಕನ್ ವೈದ್ಯರ ಒಕ್ಕೂಟ(ಎಎಪಿಐ) ಇದೇ ಮೊದಲ ಬಾರಿಗೆ ಭಾರತದಲ್ಲಿ ಜಾಗತಿಕ ಹೆಲ್ತ್ ಕೇರ್ ಸಮ್ಮಿಟ್ ಅನ್ನು ಎರಡು ಸ್ಥಳಗಳಾದ ನವದೆಹಲಿ ಹಾಗೂ ಮಣಿಪಾಲದಲ್ಲಿ ಆಯೋಜಿಸುತ್ತಿದ್ದು, ವೈದ್ಯಕೀಯ ವಿಚಾರ...
ಜಾಗತಿಕ ಹೆಲ್ತ್ ಕೇರ್ ಸಮ್ಮಿಟ್
ಜಾಗತಿಕ ಹೆಲ್ತ್ ಕೇರ್ ಸಮ್ಮಿಟ್

ಬೆಂಗಳೂರು: ಭಾರತೀಯ ಮೂಲದ ಅಮೆರಿಕನ್ ವೈದ್ಯರ ಒಕ್ಕೂಟ(ಎಎಪಿಐ) ಇದೇ ಮೊದಲ ಬಾರಿಗೆ ಭಾರತದಲ್ಲಿ ಜಾಗತಿಕ ಹೆಲ್ತ್ ಕೇರ್ ಸಮ್ಮಿಟ್ ಅನ್ನು ಎರಡು ಸ್ಥಳಗಳಾದ ನವದೆಹಲಿ ಹಾಗೂ ಮಣಿಪಾಲದಲ್ಲಿ ಆಯೋಜಿಸುತ್ತಿದ್ದು, ವೈದ್ಯಕೀಯ ವಿಚಾರ ಸಂಕಿರಣ ಹಾಗೂ ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ)ಒಂದೇ ವೇದಿಕೆಯಲ್ಲಿ ಕೈಗೊಳ್ಳಲಾಗುತ್ತಿರುವುದು ಇದರ ವೈಶಿಷ್ಟ್ಯತೆಯಾಗಿದೆ. ನವದೆಹಲಿಯ ಏಮ್ಸ್ (ಎಐಐಎಂಎಸ್) ಮತ್ತು ಕರ್ನಾಟಕದ ಮಣಿಪಾಲ್ ವಿಶ್ವವಿದ್ಯಾಲಯವನ್ನು ಸಮ್ಮಿಟ್ ಗೆ ಆಯ್ಕೆ ಮಾಡಿಕೊಂಡಿದ್ದು, ಈ ಎರಡು ಕೇಂದ್ರಗಳು ದೇಶದಲ್ಲಿ ಅತ್ಯುತ್ತಮ ಶಿಕ್ಷಣ ನೀಡುವ ಸಂಸ್ಥೆಗಳಾಗಿವೆ. 

ಈ ಜಾಗತಿಕ ಹೆಲ್ತ್ ಕೇರ್ ಸಮ್ಮಿಟ್ 2024ರ ಜನವರಿ 1 ರಿಂದ 3ರ ವರೆಗೆ ನವದೆಹಲಿಯ ಲೀ ಮೆರಿಡಿಯನ್ ಹಾಗೂ ಏಮ್ಸ್ ನಲ್ಲಿ ಮತ್ತು ಜನವರಿ 4 ರಿಂದ 6ರ ವರೆಗೆ ಮಣಿಪಾಲದ ಫಾರ್ಚೂನ್ ಇನ್ ವ್ಯಾಲಿ ಹೋಟೆಲ್‍ನಲ್ಲಿ ಆಯೋಜಿಸಲಾಗಿದೆ. ಇದೊಂದು ಮಹತ್ವದ ಕಾರ್ಯಕ್ರಮವಾಗಿದ್ದು, ವೈದ್ಯಕೀಯ ಕ್ಷೇತ್ರದ ನಿಪುಣರು ತಮ್ಮ ಅನುಭವಗಳನ್ನ ಈ ವೇದಿಕೆಯಲ್ಲಿ ಹಂಚಿಕೊಳ್ಳಲಿದ್ದಾರೆ.

21ನೇ ಶತಮಾನದಲ್ಲಿ ಎಐ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದ ಮೇಲೆ ಬೀರುವ ಪ್ರಭಾವ ಮತ್ತು ಅದರ ಸಮರ್ಥ ಬಳಕೆಯ ಕುರಿತು ಸಮಗ್ರ ಮಾಹಿತಿ ಹಂಚಿಕೊಳ್ಳುವುದು ಈ ಜಾಗತಿಕ ಆರೋಗ್ಯ ಶೃಂಗಸಭೆಯ ವೈದ್ಯಕೀಯ ವಿಚಾರ ಸಂಕಿರಣದ ಉದ್ದೇಶವಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಕೇಂದ್ರಗಳಾಗಿ ಗುರುತಿಸಿಕೊಂಡಿರುವ ಏಮ್ಸ್ ಮತ್ತು ಮಣಿಪಾಲ ವಿಶ್ವವಿದ್ಯಾಲಯವು ಈ ಕಾರ್ಯಕ್ರಮಕ್ಕೆ ಸೂಕ್ತ ಸ್ಥಳಗಳಾಗಿವೆ. 

ವಿಭಿನ್ನ ರೀತಿಯ ಈ  ಕಾರ್ಯಕ್ರಮವು ಭಾರತೀಯ ಮೂಲದ ವೈದ್ಯರನ್ನು ಆಕರ್ಷಿಸುವುದರ ಜೊತೆಗೆ  ನವದೆಹಲಿ ಹಾಗೂ ಕರ್ನಾಟಕದಲ್ಲಿನ ವೈದ್ಯರ ಪಾಲ್ಗೊಳ್ಳುವಿಕೆಗೆ ಬೃಹತ್ ವೇದಿಕೆಯಾಗಲಿದೆ. ಈ ಮೂಲಕ ಆರೋಗ್ಯ ಕ್ಷೇತ್ರದಲ್ಲಿನ ನವನವೀನ ಬದಲಾವಣೆಗೆ ತೆರೆದುಕೊಳ್ಳುವುದು, ಆ ಕುರಿತಾದ ಚರ್ಚೆ ಮತ್ತು ಆಲೋಚನೆಗಳ ವಿನಿಮಯ ಕೇಂದ್ರಬಿಂದುವಾಗಿ ಈ ಕಾರ್ಯಕ್ರಮವು ಹೊರಹೊಮ್ಮಲಿದೆ.

ವೈದ್ಯಕೀಯ ವೃತ್ತಿಯಲ್ಲಿ ನಿಪುಣತೆ ಹೊಂದಿದವರಿಂದ ಭವಿಷ್ಯದಲ್ಲಿ ಆರೋಗ್ಯ ರಕ್ಷಣೆಗೆ ಬೇಕಾದ ಎಐ ತಂತ್ರಜ್ಞಾನದ ಕುರಿತಾದ ಚರ್ಚೆಗಳು ಕಾರ್ಯಕ್ರಮದಲ್ಲಿ ನಡೆಯುತ್ತವೆ. ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆ ರೂಪಿಸುವ ಎಐ ತಂತ್ರಜ್ಞಾನ ಕುರಿತಾಗಿ ತಿಳಿಯುವ ನಿಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರ್ನಾಟಕ ವೈದ್ಯಕೀಯ ಸಮುದಾಯಕ್ಕೆ ಸಂಘಟಕರು ವಿಶೇಷ ಆಮಂತ್ರಣವನ್ನು ನೀಡಿದ್ದಾರೆ. 
 
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮಣಿಪಾಲ ವೈದ್ಯಕೀಯ ಶಿಕ್ಷಣದ ಅಧ್ಯಕ್ಷ, ಪದ್ಮಭೂಷಣ ಡಾ. ರಾಮದಾಸ್ ಪೈ ಅವರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 

ಮನರಂಜನಾ ಕಾರ್ಯಕ್ರಮಗಳು
ಈ ಹೆಲ್ತ್ ಸಮ್ಮಿಟ್, ಶೈಕ್ಷಣಿಕ ವಿಷಯಗಳ ಚರ್ಚೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಎಎಪಿಐ ಉಪಾಧ್ಯಕ್ಷ ಡಾ. ಅಮಿತ್ ಚಕ್ರವರ್ತಿ ಅವರ ಲೈವ್ ಸಂಗೀತ ಕಾರ್ಯಕ್ರಮ, ಮಾನಸಿ ಸುಧೀರ್ ಅವರ 'ಕಾವ್ಯಾಭಿನಯ' ಪ್ರದರ್ಶನ ಮತ್ತು ಅನಿರುದ್ಧ ಶಾಸ್ತ್ರಿ ಹಾಗೂ ನುಡಿಸಿರಿ ತಂಡದ ಅದ್ಭುತ ಸಂಗೀತ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. 

ಈ ಶೃಂಗಸಭೆಯು ಐತಿಹಾಸಿಕ ಕ್ಷಣವಾಗಿ ಗುರುತಿಸಿಕೊಳ್ಳುವುದರ ಜೊತೆಗೆ ವೈದ್ಯಕೀಯ ಜ್ಞಾನಾರ್ಜನೆ ಹಾಗೂ ಜಾಗತಿಕ ಮಟ್ಟದಲ್ಲಿ ಪರಸ್ಪರ ಸಹಯೋಗವನ್ನು ಬೆಳೆಸುವ ವೇದಿಕೆಯಾಗಿ ರೂಪುಗೊಳ್ಳಲಿದೆ. ಉನ್ನತ ವೈದ್ಯಕೀಯ ವೃತ್ತಿಪರರ ಪಾಲ್ಗೊಳ್ಳುವಿಕೆ, ವಿವಿಧ ವಿಷಯಗಳ ಕುರಿತ ಚರ್ಚೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವು ನಿಜಕ್ಕೂ ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಮೈಲಿಗಲ್ಲು ಮೂಡಿಸಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com