ಮುಂಬೈ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಬಳಿಕ ಭಾರಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಸೋಮವಾರ ಭರ್ಜರಿ ಕಮ್ ಬ್ಯಾಕ್ ಮಾಡಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಮಂಡಿಸಿದ್ದ ಕೇಂದ್ರ ಬಜೆಟ್ 2026ರ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆ ಭಾನುವಾರ ಮಹಾ ಪತನ ಕಂಡಿತ್ತು. ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರಿ ಕುಸಿತ ಕಂಡಿತ್ತು.
ಸೆನ್ಸೆಕ್ಸ್ ಇಂದು ಬರೊಬ್ಬರಿ 1,843.43ಅಂಕಗಳ ಇಳಿಕೆಯೊಂದಿಗೆ 80,722.94 ಅಂಕಗಳಿಗೆ ಕುಸಿತವಾಗಿದ್ದರೆ, ನಿಫ್ಟಿ 593.45 ಅಂಕಗಳ ಕುಸಿತದೊಂದಿಗೆ 24,825.45 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿತ್ತು.
ಇದೀಗ ಸೋಮವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.17ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.06ರಷ್ಟು ಏರಿಕೆ ದಾಖಲಿಸಿದೆ.
ಸೆನ್ಸೆಕ್ಸ್ ಇಂದು ಬರೊಬ್ಬರಿ 943.52ಅಂಕಗಳ ಏರಿಕೆಯೊಂದಿಗೆ 81,666.46 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 262.95 ಅಂಕಗಳ ಏರಿಕೆಯೊಂದಿಗೆ 25,088.40 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಈ ಮೂಲಕ ಬಜೆಟ್ ದಿನದ ಕುಸಿತದ ನಂತರ ಭಾರತೀಯ ಷೇರುಮಾರುಕಟ್ಟೆ ಸಂಪೂರ್ಣವಾಗಿ ಅಲ್ಲದಿದ್ದರೂ ಬಹುತೇಕ ಚೇತರಿಸಿಕೊಂಡಿವೆ. ಮಾರುಕಟ್ಟೆ ಚೇತರಿಕೆಗೆ ಮೌಲ್ಯ ಖರೀದಿ ಮತ್ತು ಜಾಗತಿಕ ಕಚ್ಚಾ ತೈಲ ಬೆಲೆಗಳು ದುರ್ಬಲಗೊಂಡಿರುವುದು ಕಾರಣ ಎಂದು ಹೇಳಲಾಗಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಬಜಾಜ್ ಕನ್ಸೂಮರ್ ಕೇರ್, ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್, ಸುಂದರಂ ಫೈನಾನ್ಸ್, ಲೆಟೆಂಟ್ ವ್ಯೂ ಅನಲಿಟಿಕ್ಸ್, ಸೆಂಚುರಿ ಪ್ಲೇ ಬೋರ್ಡ್ ಸಂಸ್ಥೆಯ ಷೇರುಗಳ ಮೌಲ್ಯ ಕೂಡ ಗಣನೀಯ ಏರಿಕೆ ಕಂಡಿದೆ.
ಉಳಿದಂತೆ ಡಿಎಸ್ ಜೆ ಕೀಪ್ ಲರ್ನಿಂಗ್, ಎಂಒಐಎಲ್, ಫ್ಯೂಚರ್ ಲೈಫ್ ಸ್ಟೈಲ್ ಫ್ಯಾಷನ್, ಎಬಿ ಕಾಸ್ಟ್ ಪಿನ್ ಇಂಡಿಯಾ ಮತ್ತು ಭಾರತ್ ಡೈನಾಮಿಕ್ಸ್ ಸಂಸ್ಥೆಗಳು ಲಾಭಾಂಶ ಗಳಿಸಿವೆ.
Advertisement