

ಮುಂಬೈ: ಇರಾನ್ ಮತ್ತು ಅಮೆರಿಕ ಯುದ್ಧದಿಂದಾಗಿ ಕಳೆದ ಕೆಲ ತಿಂಗಳುಗಳಿಂದ ಮಂಕಾಗಿದ್ದ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಭರ್ಜರಿಯಾಗಿ ಪುಟಿದೆದ್ದಿದೆ.
ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.2.30ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.99ರಷ್ಟು ಏರಿಕೆ ದಾಖಲಿಸಿದೆ.
ಸೆನ್ಸೆಕ್ಸ್ ಇಂದು ಬರೊಬ್ಬರಿ 1,695.41 ಅಂಕಗಳ ಏರಿಕೆಯೊಂದಿಗೆ 75,527.95 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 461.30 ಅಂಕಗಳ ಏರಿಕೆಯೊಂದಿಗೆ 23,622.90 ಅಂಕಗಳಿಗೆ ಏರಿಕೆಯಾಗಿ ದಿನದ ಮತ್ತು ವಾರದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಐಟಿ, ಬಂಡವಾಳ ಸರಕುಗಳು, ರಿಯಲ್ ಎಸ್ಟೇಟ್, ಟೆಲಿಕಾಂ, ಬ್ಯಾಕಿಂಗ್, ಆಟೋ, ಮೀಡಿಯಾ, ಇಂಧನ, ಗ್ಯಾಸ್ ಮತ್ತು ಮೆಟಲ್ ವಲಯಗಳ ಷೇರುಗಳು ಉತ್ತಮ ವಹಿವಾಟು ನಡೆಸಿ ಲಾಭಾಂಶ ಗಳಿಸಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಶ್ರೀರಾಮ್ ಫೈನಾನ್ಸ್, ಎಲ್ & ಟಿ, ಇಂಟರ್ ಗ್ಲೋಬ್ ಏವಿಯೇಷನ್, ಬಜಾಜ್ ಫೈನಾನ್ಸ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ನೆಸ್ಲೆ ಇಂಡಿಯಾ, ಒಎನ್ಜಿಸಿ, ಟೆಕ್ ಮಹೀಂದ್ರಾ, ಪವರ್ ಗ್ರಿಡ್ ಕಾರ್ಪೊರೇಷನ್ ಮತ್ತು ಎಸ್ಬಿಐ ಲೈಫ್ ಇನ್ಶುರೆನ್ಸ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.
ಅಮೆರಿಕ-ಇರಾನ್ ನಡುವೆ ಶಾಂತಿ ಒಪ್ಪಂದ ಸಾಧ್ಯತೆ
ಇಂದಿನ ಷೇರುಮಾರುಕಟ್ಟೆಯ ಸಕಾರಾತ್ಮಕ ವಹಿವಾಟಿಗೆ ಕಚ್ಚಾ ತೈಲದ ಬೆಲೆಗಳ ಬಗ್ಗೆ ಇದ್ದ ಆತಂಕ ಕಡಿಮೆಯಾಗಿರುವುದು ಕಾರಣ ಎನ್ನಲಾಗಿದೆ. ಪ್ರಮುಖವಾಗಿ ಇರಾನ್ ಮತ್ತು ಅಮೆರಿಕ ನಡುವಿನ ಸಂಭಾವ್ಯ ಶಾಂತಿ ಒಪ್ಪಂದ ಜಗತ್ತಿನಾದ್ಯಂತ ಮಾರುಕಟ್ಟೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.
ತೈಲ ಬೆಲೆಗಳು ಇಳಿಕೆಯಾಗಿರುವುದು ಸಾಮಾನ್ಯವಾಗಿ ಭಾರತದ ಆರ್ಥಿಕತೆಗೆ ಅನುಕೂಲಕರ ಆಗಿರುವುದರಿಂದ ಇದು ಮಾರುಕಟ್ಟೆಗೆ ಸ್ವಲ್ಪ ನೆಮ್ಮದಿ ತಂದಿತು.
ಜೊತೆಗೆ, ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ಕಡಿಮೆಯಾಗುವ ನಿರೀಕ್ಷೆಗಳು ಹೆಚ್ಚಿದ ಹಿನ್ನೆಲೆಯಲ್ಲಿ ಹೂಡಿಕೆದಾರರ ಅಪಾಯ ಸ್ವೀಕಾರ ಮನೋಭಾವ (ರಿಸ್ಕ್ ಅಪೆಟೈಟ್) ಸುಧಾರಿಸಿದ್ದು, ಜಾಗತಿಕ ಮಾರುಕಟ್ಟೆಯ ಭಾವನೆಗಳೂ ಸಹಕಾರಿಯಾದವು ಎಂದು ಮಾಸ್ಟರ್ ಕ್ಯಾಪಿಟಲ್ ಸರ್ವಿಸಸ್ನ ಮುಖ್ಯ ಸಂಶೋಧನಾ ಅಧಿಕಾರಿ ರವಿಸಿಂಗ್ (Ravi Singh) ಅಭಿಪ್ರಾಯಪಟ್ಟಿದ್ದಾರೆ.
Advertisement