

ಮುಂಬೈ: ವಾರದ ಮೊದಲ ದಿನವೇ ಭಾರತೀಯ ಷೇರುಮಾರುಕಟ್ಟೆ ಕುಸಿತವಾಗಿದ್ದು, ಷೇರುಮಾರುಕಟ್ಟೆ ಉಭಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿವೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.48ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.46ರಷ್ಟು ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಇಂದು 372.10ಅಂಕಗಳ ಕುಸಿತದೊಂದಿಗೆ 76,728.37 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 109.75 ಅಂಕಗಳ ಇಳಿಕೆಯೊಂದಿಗೆ 23,946.25 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಆಟೋ ವಲಯದ ಷೇರುಗಳ ಮೌಲ್ಯದಲ್ಲಿ ಶೇ.2ರಷ್ಟು ಕುಸಿತವಾಗಿದ್ದರೆ, ಪಿಎಸ್ಯು ಬ್ಯಾಂಕ್, ಮಾಧ್ಯಮ, ಐಟಿ ಹಾಗೂ ತೈಲ ಮತ್ತು ಅನಿಲ (ಆಯಿಲ್ & ಗ್ಯಾಸ್) ವಲಯಗಳ ಸೂಚ್ಯಂಕಗಳು ಶೇ.1ರಿಂದ 1.5ರಷ್ಟು ಇಳಿಕೆ ದಾಖಲಿಸಿದವು.
ಇದಕ್ಕೆ ವ್ಯತಿರಿಕ್ತವಾಗಿ ಲೋಹ (ಮೆಟಲ್), ಔಷಧ (ಫಾರ್ಮಾ) ಹಾಗೂ ಆರೋಗ್ಯ ಸೇವೆ (ಹೆಲ್ತ್ಕೇರ್) ವಲಯಗಳ ಸೂಚ್ಯಂಕಗಳು ತಲಾ ಶೇ.1ರಷ್ಟು ಏರಿಕೆ ಕಂಡವು. ಅಂತೆಯೇ ನಿಫ್ಟಿ ಮಿಡ್ಕ್ಯಾಪ್ ಸೂಚ್ಯಂಕ ಶೇ.0.2ರಷ್ಟು ಕುಸಿದರೆ, ಸ್ಮಾಲ್ಕ್ಯಾಪ್ ಸೂಚ್ಯಂಕ ಶೇ.0.6ರಷ್ಟು ಇಳಿಕೆ ದಾಖಲಿಸಿತು.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಕೊಟಕ್ ಮಹೀಂದ್ರ ಬ್ಯಾಂಕ್, ಎಂ & ಎಂ, ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್, ಅದಾನಿ ಎಂಟರ್ಪ್ರೈಸಸ್ ಹಾಗೂ ಇಂಟರ್ಗ್ಲೋಬ್ ಏವಿಯೇಷನ್ ಸಂಸ್ಥೆಗಳ ಷೇರುಗಳು ಅತಿಹೆಚ್ಚು ನಷ್ಟ ಅನುಭವಿಸಿದವು.
ಈ ಪೈಕಿ ಕೋಟಕ್ ಮಹಿಂದ್ರ ಸಂಸ್ಥೆಯ ಷೇರುಗಳ ಮೌಲ್ಯ ಬರೊಬ್ಬರಿ ಶೇ.3.24 ರಷ್ಟು ಕುಸಿದಿದೆ. ಉಳಿದಂತೆ ಎಟರ್ನಲ್, ಟ್ರೆಂಟ್, ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಎನ್ಟಿಪಿಸಿ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿವೆ.
MD ಅವಧಿ ಮುಕ್ತಾಯ
ಇೃತ್ತ ಕೋಟಕ್ ಮಹೀಂದ್ರಾ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಶೋಕ್ ವಾಸ್ವಾನಿ ಅವರು ತಮ್ಮ ಮೂರು ವರ್ಷಗಳ ಅಧಿಕಾರಾವಧಿ ಮುಗಿದ ನಂತರ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಮತ್ತು ಅವರ ಪ್ರಸ್ತುತ ಅವಧಿ ಡಿಸೆಂಬರ್ 31, 2026 ರಂದು ಮುಕ್ತಾಯಗೊಳ್ಳಲಿದ್ದು, ಅವರು ಮರು ನೇಮಕಾತಿಗೆ ಪ್ರಯತ್ನಿಸುವುದಿಲ್ಲ ಎಂದು ಹೇಳಿರುವುದು ಸಂಸ್ಥೆಯ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಮಧ್ಯಪ್ರಾಚ್ಯ ಸಂಘರ್ಷ
ಇಂದಿನ ಮಾರುಕಟ್ಟೆ ಕುಸಿತಕ್ಕೆ ಮತ್ತೆ ಉಲ್ಬಣಗೊಂಡಿರುವ ಮಧ್ಯ ಪ್ರಾಚ್ಯ ಸಂಘರ್ಷ ಕಾರಣ ಎನ್ನಲಾಗಿದೆ. ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿರುವುದು ಭಾರತ ಮಾತ್ರವಲ್ಲದೇ ಜಾಗತಿಕ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತಿದೆ. ವಾರಾಂತ್ಯದಲ್ಲಿ ಇರಾನ್, ಕುವೈತ್ ಮತ್ತು ಬಹ್ರೇನ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ.
ಇದರಿಂದ ಅಮೆರಿಕದಿಂದ ಮತ್ತಷ್ಟು ಪ್ರತಿದಾಳಿ ನಡೆಯುವ ಸಾಧ್ಯತೆಯ ಆತಂಕ ಜಾಗತಿಕ ಹೂಡಿಕೆದಾರರಲ್ಲಿ ಹೆಚ್ಚಿದ್ದು, ಅದರ ಪರಿಣಾಮ ಭಾರತೀಯ ಷೇರುಪೇಟೆಯ ಮೇಲೂ ಕಂಡುಬಂದಿತು.
ಜಾಗತಿಕ ಭೌರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಅಪಾಯದ ಹೂಡಿಕೆಗಳಿಂದ ದೂರ ಉಳಿಯಲು ಮುಂದಾಗಿದ್ದು, ಅದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.