

ಮುಂಬೈ: ಮಧ್ಯ ಪ್ರಾಚ್ಯದಲ್ಲಿ ಯುದ್ಧ ಮುಂದುವರೆದಿರುವಂತೆಯೇ ಇತ್ತ ಭಾರತೀಯ ಷೇರು ಮಾರುಕಟ್ಟೆಯಲ್ಲಿನ ತಲ್ಲಣ ಕೂಡ ಮುಂದುವರೆದಿದೆ.
ಭಾರತೀಯ ಷೇರು ಮಾರುಕಟ್ಟೆಗಳು ಸೋಮವಾರ ಭಾರೀ ಮಾರಾಟದ ಒತ್ತಡಕ್ಕೆ ಒಳಗಾಗಿ ಭಾರಿ ನಷ್ಟ ಅನುಭವಿಸಿದೆ. ಗಲ್ಫ್ ಪ್ರದೇಶದಲ್ಲಿ ಮತ್ತೆ ಉದ್ಭವಿಸಿದ ಉದ್ವಿಗ್ನತೆ ಮತ್ತು ಏರುತ್ತಿರುವ ಕಚ್ಚಾ ತೈಲದ ಬೆಲೆಗಳ ಆತಂಕ ಹೂಡಿಕೆದಾರರ ಮನೋಭಾವದ ಮೇಲೆ ಭಾರೀ ಪರಿಣಾಮ ಬೀರಿತು.
ನಿಫ್ಟಿ 50 ಸೂಚ್ಯಂಕವು ಬರೊಬ್ಬರಿ 360.30 ಅಂಕಗಳು ಅಥವಾ 1.49 ಶೇಕಡಾ ಕುಸಿತ ಕಂಡು 23,815.85 ಅಂಕಗಳಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದೆ. ಅಂತೆಯೇ BSE Sensex ಕೂಡ 1,312.91 ಅಂಕಗಳು ಅಥವಾ 1.70 ಶೇಕಡಾ ಇಳಿಕೆಯಾಗಿ 76,015.28 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ.
ಪಶ್ಚಿಮ ಏಷ್ಯಾದ ಹೊಸ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಏರುತ್ತಿರುವ ಕಚ್ಚಾ ತೈಲದ ಬೆಲೆಗಳು ಭಾರತದ ಆರ್ಥಿಕತಿಗೆ ಹೊಡೆತ ನೀಡಬಹುದೆಂಬ ಆತಂಕದಿಂದ ಹೂಡಿಕೆದಾರರ ವಿಶ್ವಾಸ ಕುಸಿದಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಇಂದಿನ ವಹಿವಾಟಿನಲ್ಲಿ ಗ್ರಾಹಕ ಬಾಳಿಕೆ ಬರುವ ವಸ್ತುಗಳು, ಪಿಎಸ್ಯು ಬ್ಯಾಂಕ್, ತೈಲ ಮತ್ತು ಅನಿಲ ಮತ್ತು ರಿಯಾಲ್ಟಿ ಷೇರುಗಳು ಭಾರಿ ನಷ್ಟ ಕಂಡಿವೆ.
ಸಂಧಾನ ತಿರಸ್ಕರಿಸಿದ ಟ್ರಂಪ್
ಮಾರುಕಟ್ಟೆ ತಜ್ಞ Vinod Nair ಅವರ ಪ್ರಕಾರ, ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ನ ಶಾಂತಿ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆಯೆಂಬ ವರದಿಗಳ ಬಳಿಕ ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿ ಮಾರುಕಟ್ಟೆ ಮೇಲೆ ಒತ್ತಡ ತಂದಿದೆ. “ಇರಾನ್ ಶಾಂತಿ ಪ್ರಸ್ತಾವನೆಯನ್ನು ಟ್ರಂಪ್ ತಿರಸ್ಕರಿಸಿದ್ದಾರೆಯೆಂಬ ಬೆಳವಣಿಗೆಯ ನಂತರ ಗಲ್ಫ್ ಉದ್ವಿಗ್ನತೆ ಮರುಕಳಿಸಿದ್ದು, ಅದರ ಪರಿಣಾಮವಾಗಿ ಬೆಂಚ್ಮಾರ್ಕ್ ಸೂಚ್ಯಂಕವು 24,000 ಅಂಕಗಳ ಕೆಳಗೆ ಜಾರಿದೆ,” ಎಂದು ನಾಯರ್ ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಇಂಧನ ಉಳಿತಾಯ ಮಾಡುವುದು ಮತ್ತು ಅನಗತ್ಯ ವಿದೇಶ ಪ್ರವಾಸಗಳನ್ನು ತಪ್ಪಿಸುವಂತೆ ನಾಗರಿಕರಿಗೆ ಮನವಿ ಮಾಡಿದ ನಂತರ ಮಾರುಕಟ್ಟೆಯಲ್ಲಿ ಎಚ್ಚರಿಕೆಯ ವಾತಾವರಣ ಇನ್ನಷ್ಟು ಗಾಢವಾಯಿತು ಎಂದು ಅವರು ತಿಳಿಸಿದ್ದಾರೆ.
ಇದರೆ ಜೊತೆಗೆ ಹೆಚ್ಚುತ್ತಿರುವ ಕಚ್ಚಾ ತೈಲದ ಬೆಲೆ, ಭಾರತೀಯ ರೂಪಾಯಿಯ ದುರ್ಬಲತೆ ಮತ್ತು ಪ್ರಸ್ತುತ ಖಾತೆ ಕೊರತೆಯ ಮೇಲಿನ ಒತ್ತಡದ ಆರ್ಥಿಕ ಪರಿಣಾಮಗಳನ್ನು ಹೂಡಿಕೆದಾರರು ಮರುಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ನಾಯರ್ ಹೇಳಿದರು.
“ಪ್ರಸ್ತುತ ಭಾರತದ ಬಲವಾದ ಹಣಕಾಸು ಸ್ಥಿತಿ ಮತ್ತು ಆರೋಗ್ಯಕರ ವಿದೇಶಿ ವಿನಿಮಯ ಸಂಗ್ರಹಗಳು ಹೆಚ್ಚಿದ ಕಚ್ಚಾ ತೈಲದ ಬೆಲೆಗಳ ಪರಿಣಾಮವನ್ನು ತಡೆಯಲು ಸರ್ಕಾರಕ್ಕೆ ನೆರವಾಗುತ್ತಿವೆ. ಆದರೆ ದೀರ್ಘಕಾಲದ ಭೌಗೋಳಿಕ ಉದ್ವಿಗ್ನತೆ ಮ್ಯಾಕ್ರೋ ಆರ್ಥಿಕ ಒತ್ತಡವನ್ನು ಹೆಚ್ಚಿಸಬಹುದು,” ಎಂದು ಅವರು ಹೇಳಿದರು.
ಹೆಚ್ಚುತ್ತಿರುವ ಬಾಂಡ್ ಯೀಲ್ಡ್ಗಳು ಮತ್ತು ವಿದೇಶಿ ಸಂಸ್ಥಾ ಹೂಡಿಕೆದಾರರ (FII) ನಿರಂತರ ಹಣ ಹೊರಹರಿವು ಮುಂದಿನ ದಿನಗಳಲ್ಲಿ ಮಾರುಕಟ್ಟೆಯನ್ನು ನಿರ್ದಿಷ್ಟ ವ್ಯಾಪ್ತಿಯೊಳಗೆ ಉಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ವಲಯವಾರು ನೋಡಿದರೆ, ರಾಷ್ಟ್ರೀಯ ಷೇರುಪೇಟೆ (NSE) ಯ ಬಹುತೇಕ ಎಲ್ಲಾ ಸೂಚ್ಯಂಕಗಳಲ್ಲೂ ಮಾರಾಟದ ಒತ್ತಡ ಕಂಡುಬಂತು. Nifty Consumer Durables ಅತ್ಯಂತ ದುರ್ಬಲ ಪ್ರದರ್ಶನ ನೀಡಿದ ವಲಯವಾಗಿದ್ದು, ವಹಿವಾಟಿನ ವೇಳೆ 3 ಶೇಕಡಕ್ಕಿಂತ ಹೆಚ್ಚು ಕುಸಿತ ಕಂಡಿತು. Nifty PSU Bank 2.52 ಶೇಕಡಾ ಇಳಿಕೆಯಾಗಿದ್ದರೆ, Nifty Media 2.49 ಶೇಕಡಾ ಕುಸಿತ ಕಂಡಿತು. Nifty Auto 1.86 ಶೇಕಡಾ ಇಳಿಕೆಯಾಗಿದ್ದು, Nifty IT ಕೂಡ 0.22 ಶೇಕಡಾ ನಷ್ಟದೊಂದಿಗೆ ಮುಕ್ತಾಯಗೊಂಡಿತು.
ಪ್ರಮುಖ ವಲಯಗಳಲ್ಲಿ ಎಫ್ಎಂಸಿಜಿ ಮತ್ತು ಫಾರ್ಮಾ ವಲಯಗಳು ಮಾತ್ರ ದಿನದ ವಹಿವಾಟನ್ನು ಲಾಭದೊಂದಿಗೆ ಮುಕ್ತಾಯಗೊಳಿಸಿವೆ.
6 ಲಕ್ಷ ಕೋಟಿ ರೂ ನಷ್ಟ
BSE Sensex ಸೂಚ್ಯಂಕದ 30 ಕಂಪನಿಗಳಲ್ಲಿ 26 ಕಂಪನಿಗಳ ಷೇರುಗಳು ನಷ್ಟದೊಂದಿಗೆ ವಹಿವಾಟು ಮುಕ್ತಾಯಗೊಳಿಸಿವೆ. ಇದೇ ವೇಳೆ, ಬಿಎಸ್ಇನಲ್ಲಿ ಪಟ್ಟಿಗೊಂಡಿರುವ ಕಂಪನಿಗಳ ಮಾರುಕಟ್ಟೆ മൂಲ್ಯದಲ್ಲಿ ಸುಮಾರು ರೂ. 6 ಲಕ್ಷ ಕೋಟಿ ನಷ್ಟವಾಗಿದ್ದು, ಹೂಡಿಕೆದಾರರಿಗೆ ಭಾರೀ ಹೊಡೆತ ಬಿದ್ದಿದೆ.
ಮೋದಿ ಚಿನ್ನ ಖರೀದಿ ಹೇಳಿಕೆ
ಇಷ್ಟು ಮಾತ್ರವಲ್ಲದೇ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನ ಖರೀದಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಮೇಲೆ ಮಿತಿ ಹೇರುವಂತೆ ಸಲಹೆ ನೀಡಿದ್ದರು. ಇದೂ ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Advertisement