ಚಿರಂಜೀವಿಯ ಮಗಧೀರ ರಾಮ್ ಚರಣ್ ತೇಜನ ಹೊಸ ಚಿತ್ರಕ್ಕೆ ಪಂಜಾಬಿನ ಸುಂದರಿ ರಾಕುಲ್ ಪ್ರೀತಿ ಸಿಂಗ್ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಈ ಮಿಸ್ ಇಂಡಿಯಾ ಸ್ಪರ್ಧಿಯ ಬಗ್ಗೆ ತೆಲುಗು ಇಂಡಸ್ಟ್ರಿಯ ನಾಯಕಿಯರೆಲ್ಲ ಭಯಪಡಲಾರಂಭಿಸಿದ್ದಾರೆ.
ಇಂಡಸ್ಟ್ರಿಯ ಸಮೀಕ್ಷೆಗಳ ಪ್ರಕಾರ ಈ ವರ್ಷದಲ್ಲಿ ರಾಕುಲ್ ತೆಲುಗು ನಂಬರ್ ಒನ್ ಹೀರೋಯಿನ್ ಆಗುವ ಸಾಧ್ಯತೆ ಕಾಣಿಸುತ್ತಿದೆ. ಆದರೆ ಇದನ್ನು ಕೇವಲ ಅದೃಷ್ಟ ಎಂದು ಕೂಡ ಹೇಳಲಾಗುತ್ತಿದೆ. ಕಾರಣ ಇಷ್ಟೆ. ಈಕೆಗೆ ಸಿಕ್ಕಿರುವ ಚಿತ್ರಗಳೆಲ್ಲವೂ ಆಕಸ್ಮಿಕವಾಗಿ ಒಲಿದು ಬಂದಂಥವು. ವೆಂಕಟಾದ್ರಿ ಎಕ್ಸ್ ಪ್ರೆಸ್ಗೆ ನಾಯಕಿಯಾಗಿದ್ದು ಖ್ಯಾತ ನಾಯಕಿಯೊಬ್ಬಳ ಕೊನೆಗಳಿಗೆಯ ಕಿರಿಕ್ಕಿನಿಂದ.
ಅದು ಸೂಪರ್ಹಿಟ್ ಆಗಿದ್ದೇ ತಡ, ಹೊಸ ನಾಯಕರ ಚಿತ್ರಗಳಿಗೆ ನಾಯಕಿಯಾಗಲು ರಾಶಿ ರಾಶಿ ಆಫರ್. ಆದರೆ ರಾಕುಲ್ ಚೂಸಿ ಆಗಿಬಿಟ್ಟಳು. ಇದೀಗ ಎರಡು ದೊಡ್ಡ ಚಿತ್ರಗಳಿಗೆ ನಾಯಕಿಯಾಗುವ ಮೂಲಕ ತಮನ್ನ, ಸಮಂತ, ಹನ್ಸಿಕಾ ಥರದವರಿಗೆ ನಡುಕ ಹುಟ್ಟಿಸಿದ್ದಾಳೆ. ರವಿತೇಜನ ಕಿಕ್2ಗೆ ಇವಳೇ ನಾಯಕಿ. ಇದರ ಬೆನ್ನಲ್ಲೇ ಸಮಂತ ತಿರಸ್ಕರಿಸಿದ ರಾಮ್ ಚರಣ್ ತೇಜ-ಸೀನು ವೈಟ್ಲ ಕಾಂಬಿನೇಷನ್ನಿನ ಪಂಡಗ ಚೇಸ್ಕೋ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದು, ತೆಲುಗು ಇಂಡಸ್ಟ್ರಿ ಇದನ್ನು ಶುಭಶಕುನ ಎಂದು ಹೇಳುತ್ತಿದೆ. ಈಕೆ ಮೊದಲು ಆಯ್ಕೆ ಆಗಿರುವ ನಾಯಕಿಯನ್ನು ರೀಪ್ಲೇಸ್ ಮಾಡಿದ ಚಿತ್ರಗಳೆಲ್ಲ ಹಿಟ್ ಆಗುತ್ತವೆಂಬ ನಂಬಿಕೆ ಟಾಲಿವುಡ್ದು! ವರ್ಷದ ಕೊನೆಯ ಹೊತ್ತಿಗೆ ರಾಕುಲ್ ನಂಬರ್ ಒನ್ ಆಗಿರ್ತಾಳಾ ಕಾದುನೋಡಬೇಕು.
Advertisement