ನವದೆಹಲಿ: ಭಾರತ ಕ್ರೀಡಾ ಜಗತ್ತಿನ ದಂತಕಥೆ ಹಾಗೂ ನಟಿ ದೀಪಿಕಾ ಪಡುಕೋಣೆ ಅವರ ತಂದೆ ಪ್ರಕಾಶ್ ಪಡುಕೋಣೆಗೆ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಜೀವಮಾನ ಸಾಧನೆ ಗೌರವವನ್ನು ನೀಡಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ನಿನ್ನೆ ದೆಹಲಿಯಲ್ಲಿ ಸನ್ಮಾನಿಸಿದರು.
ತಮ್ಮ ತಂದೆ ಪ್ರಶಸ್ತಿ ಸ್ವೀಕರಿಸುವುದನ್ನು ನೋಡಿ ಭಾವುಕರಾದ ನಟಿ ದೀಪಿಕಾ ಸಮಾರಂಭದಲ್ಲಿ ಕಣ್ಣೀರು ಸುರಿಸಿದ ಪ್ರಸಂಗ ನಡೆಯಿತು. ಅವರ ಜೊತೆ ತಾಯಿ ಉಜ್ಜಲಾ ಪಡುಕೋಣೆ ಮತ್ತು ಸೋದರಿ ಅನಿಶಾ ಪಡುಕೋಣೆ ಸಹ ಇದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ಪಡುಕೋಣೆ, ಬ್ಯಾಡ್ಮಿಂಟನ್ ನಿಮಗೆ ಏನು ಕೊಡುತ್ತದೆ ಎಂದು ಕೇಳುವ ಬದಲು ನೀವು ಬ್ಯಾಡ್ಮಿಂಟನ್ ಗೆ ಏನು ಕೊಟ್ಟಿದ್ದೇವೆ ಎಂದು ಕೇಳಿ. ನಾನು ಹಣ, ಬಹುಮಾನ ಅಥವಾ ಖ್ಯಾತಿಗಾಗಿ ಬ್ಯಾಡ್ಮಿಂಟನ್ ಆಡಲಿಲ್ಲ. ಆ ಕ್ರೀಡೆಯ ಮೇಲಿನ ಪ್ರೀತಿಯಿಂದ ಆಡಿದೆನು ಎಂದರು.
ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಹೇಮಂತ್ ಸರ್ಮ ಮಾತನಾಡಿ, ಭಾರತೀಯ ಕ್ರೀಡಾರಂಗದಲ್ಲಿ ಪ್ರಕಾಶ್ ಪಡುಕೋಣೆಯವರು ಟ್ರೆಂಡ್ ಸೆಟ್ಟರ್ ಮತ್ತು ಹೊಸ ಹಾದಿಯನ್ನು ಹುಟ್ಟುಹಾಕಿದವರು. ವಿಶ್ವದ ಪ್ರಮುಖ ಕ್ರೀಡಾಪಟುಗಳನ್ನು ಸೋಲಿಸಿದ ಭಾರತ ಮೊದಲ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆಯವರು ಎಂದು ಶ್ಲಾಘಿಸಿದರು.