ಮುಂಬೈ: ಖ್ಯಾತ ಹಿನ್ನಲೆ ಗಾಯಕ, ಸಂಗೀತ ರಚನೆಕಾರ ಕೈಲಾಶ್ ಖೇರ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಪತ್ರಕರ್ತೆಯೊಬ್ಬರು ಮಾಡಿರುವ ಆರೋಪಕ್ಕೆ ಕೈಲಾಶ್ ಖೇರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಪತ್ರಕರ್ತೆ ಹೇಳಿರುವ ಘಟನೆ ಬಗ್ಗೆ ತಮಗೆ ಅರಿವು ಇಲ್ಲ, ನೆನಪು ಕೂಡ ಇಲ್ಲ ಎಂದಿದ್ದಾರೆ. ಅಲ್ಲದೆ ತಾನು ಮಾನವೀಯತೆಗೆ ಬೆಲೆ ಕೊಡುವ ವ್ಯಕ್ತಿಯಾಗಿದ್ದು ಮಹಿಳೆಯರಿಗೆ ಅಪಾರ ಗೌರವ ನೀಡುವುದಾಗಿ ಹೇಳಿದ್ದಾರೆ.
ಬಾಲಿವುಡ್ ನಟ ನಾನಾ ಪಾಟೇಕರ್ ತಮ್ಮ ಮೇಲೆ 10 ವರ್ಷಗಳ ಹಿಂದೆ ಚಿತ್ರೀಕರಣ ಸೆಟ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ನಟಿ ತನುಶ್ರೀ ದತ್ತಾ ಆರೋಪಿಸಿದ ನಂತರ ಬಾಲಿವುಡ್ ನಲ್ಲಿ ಒಂದೊಂದೇ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬರುತ್ತಿವೆ. ಬೇರೆ ಕ್ಷೇತ್ರಗಳ ಮಹಿಳೆಯರು ಕೂಡ ತಮ್ಮ ಮೇಲೆ ಪುರುಷರು ತೋರಿದ ದೌರ್ಜನ್ಯದ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ.
ಪತ್ರಕರ್ತೆಯೊಬ್ಬರು ಇತ್ತೀಚೆಗೆ ಗಾಯಕ ಕೈಲಾಶ್ ಖೇರ್ ಅವರನ್ನು ಸಂದರ್ಶನ ಮಾಡಲು ಹೋಗಿದ್ದ ಸಂದರ್ಭದಲ್ಲಿ ಸಂದರ್ಶನ ಮುಗಿಸಿ ಫೋಟೋ ತೆಗೆಯಲು ಕುಳಿತಿದ್ದಾಗ ಖೇರ್ ನನ್ನ ತೊಡೆ ಮೇಲೆ ಕೈಯಿಟ್ಟು ಗಟ್ಟಿಯಾಗಿ ಹಿಡಿದುಕೊಂಡರು ಎಂದು ಆರೋಪಿಸಿದ್ದರು.
ಈ ಬಗ್ಗೆ ಐಎಎನ್ಎಸ್ ಸುದ್ದಿ ಸಂಸ್ಥೆಗೆ ಹೇಳಿಕೆ ಹೊರಡಿಸಿರುವ ಕೈಲಾಶ್ ಖೇರ್, ನನ್ನ ಬಗ್ಗೆ ಗೊತ್ತಿರುವ ಎಲ್ಲರೂ, ನನ್ನನ್ನು ಇಷ್ಟು ವರ್ಷಗಳ ಕಾಲ ನೋಡಿದವರಿಗೆ ನಾನು ಏನು ಎಂದು ಗೊತ್ತಿದೆ, ನಾನು ಮಾನವೀಯತೆಗೆ ಎಷ್ಟು ಬೆಲೆ ಕೊಡುತ್ತೇನೆ ಎಂದು ಅವರು ತಿಳಿದಿದ್ದಾರೆ. ನಾನು ಮಹಿಳೆಯರಿಗೆ ಅಪಾರ ಗೌರವ ತೋರಿಸುತ್ತೇನೆ, ಅದರಲ್ಲೂ ಮಾಧ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರ ಕಷ್ಟ ನನಗೆ ಗೊತ್ತಿದ್ದು ಅವರಿಗೆ ಇನ್ನಷ್ಟು ಗೌರವ ನೀಡುತ್ತೇನೆ ಎಂದಿದ್ದಾರೆ.
ಕಳೆದ ವಾರ ಈ ಸುದ್ದಿ ಹೊರಬಂದಿದ್ದ ಸಂದರ್ಭದಲ್ಲಿ ನಾನು ಪಾಟ್ನಾದಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿದ್ದೆ. ಈ ಸುದ್ದಿ ನನಗೆ ಗೊತ್ತಾದಾಗ ಸಂಗೀತ ಕಾರ್ಯಕ್ರಮದ ವೇಳೆ ಇದ್ದ ನನ್ನ ಸಂತೋಷಗಳೆಲ್ಲವೂ ಹೊರಟುಹೋದವು. ನನಗೆ ಆ ಘಟನೆ ಬಗ್ಗೆ ನೆನಪು ಇಲ್ಲ, ಅರಿವು ಕೂಡ ಇಲ್ಲ ಎಂದಿದ್ದಾರೆ.
ನಾನು ಯಾವತ್ತೂ ನನ್ನ ಸರಳ ಪ್ರಪಂಚದಲ್ಲಿಯೇ ಬದುಕುವವನು. ಆದರೆ ನನ್ನಲ್ಲಿ ಬೇರೆಯವರು ಏನಾದರೂ ವ್ಯತ್ಯಾಸ ಕಂಡುಬಂದರೆ, ನನ್ನ ವರ್ತನೆಯಲ್ಲಿ ಏನಾದರೂ ಬದಲಾವಣೆಯಾಗಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ಸಂಗೀತದ ಮೇಲಿನ ಭಕ್ತಿಯೇ ನನ್ನನ್ನು ಇಂದು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ. ನನಗೆ ಪ್ರೀತಿ, ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಕೈಲಾಶ್ ಖೇರ್ ಹೇಳಿದ್ದಾರೆ.
Advertisement