"ಆರ್ಯನ್ ಖಾನ್ ಇನ್ನೂ ಮಗು, ಡ್ರಗ್ಸ್ ಸೇವಿಸಿರಬಹುದು ಆದರೆ ಆತನಿಗೆ ಉಸಿರಾಡಲು ಅವಕಾಶ ನೀಡಿ...: ಸುನಿಲ್ ಶೆಟ್ಟಿ"
ಮುಂಬೈ: ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನ್ನು ಡ್ರಗ್ಸ್ ಆರೋಪದಡಿ ಎನ್ ಸಿಬಿ ಬಂಧಿಸಿದ ಬೆನ್ನಲ್ಲೇ ಬಾಲಿವುಡ್ ನಟ ಸುನಿಲ್ ಶೆಟ್ಟಿ ಆರ್ಯನ್ ಖಾನ್ ಬೆಂಬಲಕ್ಕೆ ಧಾವಿಸಿದ್ದಾರೆ.
ಆರ್ಯನ್ ಖಾನ್ ಅತಿಥಿಯಾಗಿ ಭಾಗವಹಿಸಿದ್ದ, ಮುಂಬೈ ನ ಕಡಲ ತೀರದಲ್ಲಿ ನಡೆಯುತ್ತಿದ್ದ ಕ್ರೂಸ್ ಪಾರ್ಟಿಯ ಮೇಲೆ ಶನಿವಾರ ಎನ್ ಸಿಬಿ ದಾಳಿ ನಡೆಸಿ ಡ್ರಗ್ಸ್ ನ್ನು ಪತ್ತೆ ಮಾಡಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸುನಿಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, " ಎಲ್ಲೇ ದಾಳಿ ನಡೆದರೂ ಹಲವು ಮಂದಿ ಹಿಡಿಯಲ್ಪಡುತ್ತಾರೆ. ಹಾಗೆಯೇ ಈ ಮಗು (ಆರ್ಯನ್ ಖಾನ್) ಸಹ ಡ್ರಗ್ಸ್ ಸೇವಿಸಿರಬಹುದು ಎಂದು ಊಹಿಸುತ್ತಿದ್ದೇವೆ. ಆದರೆ ಪ್ರಕ್ರಿಯೆಗಳು ಜಾರಿಯಲ್ಲಿವೆ. ಆ ಮಗುವಿಗೆ ಉಸಿರಾಡಲು ಅವಕಾಶ ನೀಡಬೇಕು" ಎಂದು ಹೇಳಿದ್ದಾರೆ.
ಬಾಲಿವುಡ್ ನಲ್ಲಿ ಏನೇ ಸಂಭವಿಸಿದರೂ ಮಾಧ್ಯಮಗಳು ಪರಿಶೀಲನೆ ಮಾಡಿ ನಿರ್ಧಾರಕ್ಕೆ ಬಂದುಬಿಡುತ್ತವೆ. ಆ ಮಗುವಿಗೆ ಒಂದು ಅವಕಾಶ ನೀಡಿ, ವರದಿಗಳು ಬರಲಿ. ಆರ್ಯನ್ ಖಾನ್ ಇನ್ನೂ ಮಗು ಆತನ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿ ಎಂದು ಸುನಿಲ್ ಶೆಟ್ಟಿ ಹೇಳಿದ್ದಾರೆ.
ಎನ್ ಸಿಬಿಯ ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ "ಎನ್ ಸಿಬಿಯಿಂದ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನ್ನು ವಿಚಾರಣೆ ನಡೆಸಲಾಗುತ್ತಿದೆ. ರೇವ್ ಪಾರ್ಟಿ ನಡೆಯುತ್ತಿದ್ದ ಕ್ರೂಸ್ ಶಿಪ್ ಮೇಲೆ ಎನ್ ಸಿಬಿ ದಾಳಿ ನಡೆಸಿದಾಗ ಅದರಲ್ಲಿ ಆರ್ಯನ್ ಖಾನ್ ಕೂಡ ಇದ್ದರು" ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ