ಸಮಂತಾ- ನಾಗಚೈತನ್ಯ ವಿಚ್ಛೇದನಕ್ಕೆ 'ಡಿವೋರ್ಸ್ ಎಕ್ಸ್ ಪರ್ಟ್' ಅಮೀರ್ ಖಾನ್ ಕಾರಣ: ಕಂಗನಾ ರಾನಾವತ್

ಟಾಲಿವುಡ್ ನ ಸ್ಟಾರ್ ದಂಪತಿ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಭಾರೀ ಸುದ್ದಿಯಾಗುತ್ತಿದೆ. ಬಾಲಿವುಡ್ ನಟಿ ಕಂಗನಾ ರಾನಾವತ್ ತಮ್ಮ ಎಂದಿನ ಶೈಲಿಯಲ್ಲಿ ಆರೋಪಿಸಿದ್ದಾರೆ.
ಕಂಗನಾ ರಾನಾವತ್ ಬಲಚಿತ್ರದಲ್ಲಿ ಅಮೀರ್ ಖಾನ್ ಮತ್ತು ನಾಗಚೈತನ್ಯ
ಕಂಗನಾ ರಾನಾವತ್ ಬಲಚಿತ್ರದಲ್ಲಿ ಅಮೀರ್ ಖಾನ್ ಮತ್ತು ನಾಗಚೈತನ್ಯ

ಮುಂಬೈ: ಟಾಲಿವುಡ್ ನ ಸ್ಟಾರ್ ದಂಪತಿ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಭಾರೀ ಸುದ್ದಿಯಾಗುತ್ತಿದೆ. ಬಾಲಿವುಡ್ ನಟಿ ಕಂಗನಾ ರಾನಾವತ್ ತಮ್ಮ ಎಂದಿನ ಶೈಲಿಯಲ್ಲಿ ಆರೋಪಿಸಿದ್ದಾರೆ. ಇದಕ್ಕೆಲ್ಲಾ ಡಿವೋರ್ಸ್ ಎಕ್ಸ್ ಪರ್ಟ್ ಅಮೀರ್ ಖಾನ್ ಕಾರಣ ಎಂದು ಜರೆದಿದ್ದಾರೆ. ನಾಗಚೈತನ್ಯ ಅವರು ಅಮೀರ್ ಖಾನ್ ಜೊತೆಗೆ ನಿಕಟವಾದ ಕೂಡಲೇ ಈ ವಿಚ್ಛೇದನ ನಡೆದಿರುವಾಗ ಹೀಗೆ ಹೇಳದೆ ಮತ್ತಿನ್ನೇನು ಹೇಳಬೇಕು ಎಂದು ಟೀಕಿಸಿದ್ದಾರೆ.

ಕಂಗನಾ ಹೇಳಿದ್ದೇನು?: ನಿನ್ನೆ ಅಪರಾಹ್ನ ಸಮಂತಾ ಮತ್ತು ನಾಗಚೈತನ್ಯ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಚ್ಛೇದನ ಬಗ್ಗೆ ಪ್ರಕಟಿಸಿದ ನಂತರ ತಾರಾ ಲೋಕದಲ್ಲಿ ಹಾಗೂ ಅವರ ಅಭಿಮಾನಿಗಳ ವಲಯದಲ್ಲಿ ಭಾರೀ ಸದ್ದಾಗುತ್ತಿದೆ, ಇಬ್ಬರ ವಿಚ್ಚೇದನಕ್ಕೆ ಏನು ಕಾರಣವಿರಬಹುದು ಎಂದು ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಕಂಗನಾ, ವಿಚ್ಛೇದನ ಏರ್ಪಟ್ಟ ಸಮಯದಲ್ಲಿ ತಪ್ಪು ಯಾವಾಗಲೂ ಪುರುಷನದ್ದೇ ಆಗಿರುತ್ತದೆ. ನಾನು ಹೀಗೆ ಹೇಳಿದರೆ ಗೊಡ್ಡು ಸಂಪ್ರದಾಯದಂತೆ ಅಥವಾ ಪೂರ್ವ ನಿರ್ಧರಿತವಾಗಿ ಪೂರ್ವಾಗ್ರಹಪೀಡಿತವಾಗಿ ಮಾತನಾಡುತ್ತಿದ್ದೇನೆ ಎಂದು ಅನಿಸಬಹುದು, ಆದರೆ ಇದೇ ರೀತಿ ದೇವರು ಪುರುಷ ಮತ್ತು ಮಹಿಳೆಯನ್ನು ಅವರ ಸ್ವಭಾವ ಮತ್ತು ಕ್ರಿಯಾತ್ಮಕತೆಯನ್ನು  ಪ್ರಾಚೀನ ಕಾಲದಿಂದಲೂ ವೈಜ್ಞಾನಿಕವಾಗಿ ತಯಾರು ಮಾಡಿರುವುದು.

ವಿಚ್ಛೇದನ ವಿಷಯದಲ್ಲಿ ನೂರರಲ್ಲಿ ಒಬ್ಬ ಮಹಿಳೆಯ ತಪ್ಪು ಇರಬಹುದು, ಆದರೆ ಬಹುತೇಕ ಸಂದರ್ಭಗಳಲ್ಲಿ ತಪ್ಪು ಪುರುಷರದ್ದೇ. ಮಹಿಳೆಯರನ್ನು ಬಟ್ಟೆಯಂತೆ ಬದಲಾಯಿಸುವ ಮತ್ತು ನಂತರ ಅವರು ಉತ್ತಮ ಸ್ನೇಹಿತರೆಂದು ಹೇಳಿಕೊಳ್ಳುವ ಇಂತವರಿಗೆ ದಯೆ ತೋರಿಸುವುದನ್ನು ನಿಲ್ಲಿಸಿ ಎಂದು ನೇರವಾಗಿ ನಾಗಚೈತನ್ಯ ಹೆಸರು ಹೇಳದೆ ಕಂಗನಾ ಬೈದಿದ್ದಾರೆ.

ಇಂತಹವರಿಗೆ ಅಭಿಮಾನಿಗಳು, ಮಾಧ್ಯಮಗಳಿಂದ ಬೆಂಬಲ ಸಿಗುತ್ತಿರುವುದು ನೋಡಿದರೆ ನಾಚಿಕೆಯಾಗುತ್ತದೆ. ಪುರುಷರನ್ನು ಅವರು ಹೊಗಳಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿ ತೀರ್ಪು ಕೊಟ್ಟು ಬಿಡುತ್ತಾರೆ, ಇತ್ತೀಚೆಗೆ ವಿಚ್ಛೇದನ ಸಂಸ್ಕೃತಿ ಹೆಚ್ಚಾಗುತ್ತಿದೆ ಎಂದು ಕಂಗನಾ ಬರೆದಿದ್ದಾರೆ.

ಅಮೀರ್ ಕಾರಣ?: ಇಷ್ಟಕ್ಕೇ ನಿಲ್ಲಿಸದ ಕಂಗನಾ ಒಂದು ಹೆಜ್ಜೆ ಮುಂದೆ ಹೋಗಿ ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಬಗ್ಗೆ ಕೂಡ ಕಟು ಟೀಕೆ ಮಾಡಿದ್ದಾರೆ. ನಾಗಚೈತನ್ಯ ಅವರು ಬಾಲಿವುಡ್ ಗೆ ಕಾಲಿಟ್ಟಿದ್ದು ಅಮೀರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. 4 ವರ್ಷಗಳ ಹಿಂದೆ ಮದುವೆಯಾದ 10 ವರ್ಷಗಳಿಂದ ಗೆಳೆತನ ಹೊಂದಿದ್ದ ಪತ್ನಿಗೆ ವಿಚ್ಛೇದನ ನೀಡುತ್ತಿರುವ ಈ ನಟ ಇತ್ತೀಚೆಗೆ ಬಾಲಿವುಡ್ ನ ಸೂಪರ್ ಸ್ಟಾರ್, ಡಿವೋರ್ಸ್ ಎಕ್ಸ್ ಪರ್ಟ್ ಅಮೀರ್ ಖಾನ್ ಜೊತೆ ಸಖ್ಯ ಹೊಂದಿದ್ದಾನೆ. ಆತ ಹಲವು ಮಹಿಳೆಯರು ಮತ್ತು ಮಕ್ಕಳ ಜೀವನವನ್ನು ಹಾಳು ಮಾಡಿದವ, ಅಂತವನ ಮಾರ್ಗದರ್ಶನದಲ್ಲಿ ಈ ನಟ ಇದ್ದಾನೆ ಎಂದ ಮೇಲೆ ವಿಚ್ಛೇದನ ಎಲ್ಲ ಸುಗಮವಾಗಿ ಸಾಗಿತು. ನಾವೇನು ಕುರುಡರಲ್ಲ, ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಮಗೆಲ್ಲಾ ಗೊತ್ತಿದೆ ಎಂದು ಕಟು ಶಬ್ದಗಳಿಂದ ಅಮೀರ್ ಖಾನ್ ರನ್ನು ಕಂಗನಾ ನಿಂದಿಸಿದ್ದಾರೆ.

ಅಮೀರ್ ಖಾನ್ ಮೊದಲ ಪತ್ನಿ ರೀನಾ ದತ್ತಗೆ ವಿಚ್ಛೇದನ ನೀಡಿದ ನಂತರ 2015ರಲ್ಲಿ ಬೆಂಗಳೂರು ಮೂಲದ ಕಿರಣ್ ರಾವ್ ಅವರನ್ನು ಮದುವೆಯಾಗಿ ಇತ್ತೀಚೆಗೆ ಅವರಿಗೆ ಸಹ ವಿಚ್ಛೇದನ ನೀಡಿದ್ದಾರೆ. 

ಈ ಮಧ್ಯೆ ನಿನ್ನೆ ಟ್ವೀಟ್ ಮಾಡಿರುವ ಬಹುಭಾಷಾ ಹಿರಿಯ ನಟಿ ಖುಷ್ಬು ಸುಂದರ್, ಸಮಂತ ಮತ್ತು ನಾಗಚೈತನ್ಯ ವಿಚ್ಛೇದನ ಬಗ್ಗೆ ನಾವು ಊಹಾಪೋಹಗಳನ್ನು ಹಬ್ಬಿಸುವುದು ತಕ್ಷಣವೇ ನಿರ್ಧಾರಕ್ಕೆ ಬರುವುದು ಬೇಡ. ಗಂಡ-ಹೆಂಡತಿ ವಿಚ್ಛೇದನ ನೀಡಿದಾಗ ಅದಕ್ಕೆ ಏನು ಕಾರಣ ಎಂದು ಅವರಿಗಷ್ಟೇ ಗೊತ್ತು, ಬೇರೆಯವರಿಗೆ ನಿಜವಾದ ಕಾರಣ ತಿಳಿದಿರುವುದಿಲ್ಲ, ಮನುಷ್ಯರಾಗಿ ನಾವು ಮಾಡಬಹುದಾದ ಕೆಲಸ ಈ ಸಮಯದಲ್ಲಿ ಅವರಿಬ್ಬರ ಖಾಸಗಿತನವನ್ನು ಗೌರವಿಸುವುದು ಮತ್ತು ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಮಯಾವಕಾಶ ನೀಡುವುದು, ಅಲ್ಲಿಯವರೆಗೆ ವದಂತಿಗಳನ್ನು ಹಬ್ಬಿಸುವುದು, ಗ್ರಹಿಸುವುದು, ಊಹೆಗಳನ್ನು ಮಾಡಿ ನಿರ್ಧಾರಕ್ಕೆ ಬರುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ.

ಸಮಂತಾ ಮತ್ತು ನಾಗಚೈತನ್ಯ ನಿನ್ನೆ ವಿಚ್ಛೇದನವನ್ನು ಪ್ರಕಟಿಸುವ ಮೂಲಕ ತಮ್ಮ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇವರು 2017ರ ಅಕ್ಟೋಬರ್ 7ರಂದು ವಿವಾಹವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com