ಪ್ರಭಾಸ್ ಜೊತೆ ಲವ್, ಡೇಟಿಂಗ್ ವದಂತಿ: ಪ್ರತಿಕ್ರಿಯೆ ನೀಡಿದ ಕೃತಿ ಸನೋನ್ ಹೇಳಿದ್ದೇನು?

'ಬಾಹುಬಲಿ' ಖ್ಯಾತಿಯ ನಾಯಕ ನಟ ಪ್ರಭಾಸ್ ಮತ್ತು ಬಾಲಿವುಡ್ ನಟಿ ಕೃತಿ ಸನೋನ್ ಮಧ್ಯೆ ಪ್ರೀತಿ-ಪ್ರೇಮ-ಪ್ರಣಯಗಳು ನಡೆಯುತ್ತಿದ್ದು ಇಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ವ್ಯಾಪಕವಾಗಿ ಹರಡಿತ್ತು.
ಪ್ರಭಾಸ್-ಕೃತಿ ಸನೋನ್
ಪ್ರಭಾಸ್-ಕೃತಿ ಸನೋನ್
Updated on

ಮುಂಬೈ: 'ಬಾಹುಬಲಿ' ಖ್ಯಾತಿಯ ನಾಯಕ ನಟ ಪ್ರಭಾಸ್ ಮತ್ತು ಬಾಲಿವುಡ್ ನಟಿ ಕೃತಿ ಸನೋನ್ ಮಧ್ಯೆ ಪ್ರೀತಿ-ಪ್ರೇಮ-ಪ್ರಣಯಗಳು ನಡೆಯುತ್ತಿದ್ದು ಇಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ವ್ಯಾಪಕವಾಗಿ ಹರಡಿತ್ತು. ಈ ವದಂತಿ ನಿಜವಾಗಿರಬಹುದು ಎಂದೇ ಬಹುತೇಕರು ನಂಬಿದ್ದರು. ಆದರೆ ಇದೆಲ್ಲವೂ ಆಧಾರರಹಿತ, ಊಹಾಪೋಹವಷ್ಟೇ ಎಂದು ಹೇಳುವ ಮೂಲಕ ಸ್ವತಃ ಕೃತಿ ಸನೋನ್ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

ನಿನ್ನೆ ರಾತ್ರಿ ಇನ್ಸ್ಟಾಗ್ರಾಂನಲ್ಲಿ ಹೇಳಿಕೆ ನೀಡಿರುವ ನಟಿ ಈ ವದಂತಿಯನ್ನು ತಳ್ಳಿಹಾಕಿದ್ದಾರೆ. 'ಇದು ಪ್ರೀತಿಯೂ ಅಲ್ಲ, ಪ್ರಚಾರದ ತಂತ್ರವೂ ಅಲ್ಲ, ನಟ ವರುಣ್ ಧವನ್ ನನ್ನು ಉದ್ದೇಶಿಸಿ ನಮ್ಮ ಬೇಡಿಯಾ ರಿಯಾಲಿಟಿ ಶೋನಲ್ಲಿ ಅವರು ಸ್ವಲ್ಪ ತಮಾಷೆ ಜಾಸ್ತಿ ಮಾಡಲು ಹೊರಟರಷ್ಟೆ, ಅವರ ತಮಾಷೆಯನ್ನೇ ನಿಜ ಎಂದು ಭಾವಿಸಿ ವದಂತಿ ಹಬ್ಬಿಸಿದ್ದಾರೆ. ಕೆಲವು ಪೋರ್ಟಲ್ ಗಳು ನನ್ನ ಮದುವೆ ಸುದ್ದಿಯನ್ನು ಘೋಷಿಸುವ ಮೊದಲು ನಾನೇ ನಿಮ್ಮ ವದಂತಿಯ ಗುಳ್ಳೆಯನ್ನು ಒಢೆದು ಹಾಕುತ್ತೇನೆ. ವದಂತಿ ಸಂಪೂರ್ಣ ಆಧಾರರಹಿತ ಎಂದಿದ್ದಾರೆ.

ಇದೆಲ್ಲಾ ಶುರುವಾಗಿದ್ದು ಹೇಗೆ?: ಅಷ್ಟಕ್ಕೂ ಕೃತಿ ಸನೋನ್ ಮತ್ತು ಪ್ರಭಾಸ್ ಮಧ್ಯೆ ಕುಚು ಕುಚ್ ನಡೆಯುತ್ತಿದೆ, ಇಬ್ಬರೂ ಸಂಬಂಧವನ್ನು ಗಂಭೀರವಾಗಿ ತೆಗೆದುಕೊಂಡು ಮುಂದಿನ ಹಂತಕ್ಕೆ ಹೋಗಿದ್ದಾರೆ ಎಂದು ನಂಬಲು ಕಾರಣ ನಟ ವರುಣ್ ಧವನ್ ರಿಯಾಲಿಟಿ ಶೋವೊಂದರಲ್ಲಿ ಮಾತನಾಡಿದ್ದು.

ವರುಣ್ ಧವನ್ ಮತ್ತು ಕೃತಿ ಸನೋನ್ ನಟಿಸಿರುವ ಬೇಡಿಯಾ ಚಿತ್ರದ ಪ್ರಚಾರಕ್ಕೆ ಝಲಕ್ ದಿಕ್ ಲಾಜಾ ರಿಯಾಲಿಟಿ ಶೋಗೆ ಹೋಗಿದ್ದರು. ಅದರಲ್ಲಿ ನಿರ್ದೇಶಕ ಕರಣ್ ಜೋಹರ್ ಜೊತೆ ವರುಣ್ ಧವನ್ ತಮಾಷೆ ಮಾತನಾಡುತ್ತಾ ಒಂದಷ್ಟು ನಟಿಯರ ಪಟ್ಟಿ ಮಾಡಿ ಅದರಲ್ಲಿ ಕೃತಿಯ ಹೆಸರು ಇಲ್ಲವೇಕೆ ಎಂದು ಕೇಳುತ್ತಾರೆ. ಅದಕ್ಕೆ ವರುಣ್, ಕೃತಿಯ ಹೆಸರು ಇಲ್ಲಿ ಇಲ್ಲವೇಕೆ ಎಂದರೆ ಕೃತಿಯ ಹೆಸರು ಬೇರೆ ಯಾರದ್ದೋ ಹೃದಯದಲ್ಲಿದೆ ಎನ್ನುತ್ತಾರೆ, ಒಬ್ಬ ವ್ಯಕ್ತಿ ಇದ್ದಾರೆ, ಅವರು ಮುಂಬೈಯವರು ಅಲ್ಲ, ಅವರು ದೀಪಿಕಾ ಪಡುಕೋಣೆ ಜೊತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಎನ್ನುತ್ತಾರೆ.

ವರುಣ್ ಹೀಗೆ ಹೇಳಿದ್ದೇ ತಡ ಕೃತಿ ನಾಚಿ ನೀರಾದರು. ರಿಯಾಲಿಟಿ ಶೋ ಪ್ರಸಾರವಾಗಿದ್ದೇ ತಡ ಸೋಷಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿ ಕೃತಿ ಮತ್ತು ಪ್ರಭಾಸ್ ಲವ್ ಲ್ಲಿದ್ದಾರೆ, ಮದುವೆಯಾಗುತ್ತಾರೆ ಎಂದು ವದಂತಿ ಹಬ್ಬಿತು. 

ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಪ್ರಾಜೆಕ್ಟ್ ಕೆಯಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮುಖ್ಯ ಪಾತ್ರದಲ್ಲಿದ್ದಾರೆ. ಇದೊಂದು ಬಿಗ್ ಬಜೆಟ್ ಸಿನಿಮಾವಾಗಿದೆ. 

ಕೃತಿ ಸನೋನ್ ಮತ್ತು ಪ್ರಭಾಸ್ ಆದಿಪುರುಷ್ ನಲ್ಲಿ ಒಟ್ಟಿಗೆ ನಟಿಸಿದ್ದು ಓಂ ರಾವತ್ ನಿರ್ದೇಶನದ ಚಿತ್ರ ಮುಂದಿನ ವರ್ಷ ಜನವರಿ 12ರಂದು ತೆರೆಗೆ ಬರಲಿದೆ ಎಂದು ಹೇಳಲಾಗಿತ್ತಾದರೂ ಮುಂದೂಡಲ್ಪಟ್ಟು ಬರುವ ಜೂನ್ ನಲ್ಲಿ ತೆರೆ ಕಾಣಲಿದೆ. ಮಹಾಕಾವ್ಯ ರಾಮಾಯಣದ ಕಥೆಯನ್ನು ಹೊಂದಿದ್ದು ಪ್ರಭಾಸ್ ರಾಮನಾಗಿ ಮತ್ತು ಸೈಫ್ ಆಲಿಖಾನ್ ಲಂಕೆಯ ರಾವಣನಾಗಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com