ನವದೆಹಲಿ: ಮೀಟೂ ಆರೋಪಿ ಬಾಲಿವುಡ್ ನಿರ್ಮಾಪಕ ಸಾಜಿದ್ ಖಾನ್ ರನ್ನು ಬಿಗ್ ಬಾಸ್ನಿಂದ ತೆಗೆದುಹಾಕುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದಿದ್ದ ದೆಹಲಿ ಮಹಿಳಾ ಆಯೋಗದ(ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಳಿವಾಲ್ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಾಚಾರದ ಬೆದರಿಕೆಗಳು ಬಂದಿವೆ.
ಸ್ವಾತಿ ಮಳಿವಾಲ್ ಅವರು ತನಗೆ ಅತ್ಯಾಚಾರ ಬೆದರಿಕೆ ಹಾಕಿರುವ ವ್ಯಕ್ತಿಗಳನ್ನು ಬಂಧಿಸುವಂತೆ ದೆಹಲಿ ಪೊಲೀಸರನ್ನು ಕೇಳಿಕೊಂಡಿದ್ದಾರೆ.
'ಸಾಜಿದ್ ಖಾನ್ ಅವರನ್ನು ಬಿಗ್ ಬಾಸ್ನಿಂದ ಹೊರ ಹಾಕುವಂತೆ ನಾನು ಕೇಂದ್ರ ಸಚಿವರಿಗೆ ಪತ್ರ ಬರೆದಾಗಿನಿಂದ, ಇನ್ಸ್ಟಾಗ್ರಾಮ್ನಲ್ಲಿ ನನಗೆ ಅತ್ಯಾಚಾರ ಬೆದರಿಕೆಗಳು ಬರುತ್ತಿವೆ. ನಿಸ್ಸಂಶಯವಾಗಿ, ಅವರು ನಮ್ಮ ಕೆಲಸವನ್ನು ನಿಲ್ಲಿಸಲು ಬಯಸುತ್ತಾರೆ. ನಾನು ದೆಹಲಿ ಪೊಲೀಸರಿಗೆ ಈ ಬಗ್ಗೆ ದೂರು ನೀಡುತ್ತಿದ್ದೇನೆ. ತನಿಖೆ ನಡೆಸಿ, ಬೆದರಿಕೆಯ ಹಿಂದಿರುವವರನ್ನು ಬಂಧಿಸಿ ಎಂದು ಟ್ವೀಟ್ ಮಾಡಿದ್ದಾರೆ.
'#MeToo ಆಂದೋಲನದ ಸಂದರ್ಭದಲ್ಲಿ ಹತ್ತು ಮಹಿಳೆಯರು ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಎಲ್ಲಾ ದೂರುಗಳು ಸಾಜಿದ್ ಅವರ ಅಸಹ್ಯಕರ ಮನಸ್ಥಿತಿಯನ್ನು ತೋರಿಸುತ್ತವೆ. ಈಗ ಈ ವ್ಯಕ್ತಿಗೆ ಬಿಗ್ ಬಾಸ್ನಲ್ಲಿ ಸ್ಥಾನ ನೀಡಲಾಗಿದೆ. ಅದು ತಪ್ಪು. ನಾನು @ianuragthakur ಗೆ ಪತ್ರ ಬರೆದಿದ್ದೇನೆ. ಈ ಕಾರ್ಯಕ್ರಮದಿಂದ ಸಾಜಿದ್ ಖಾನ್ ರನ್ನು ತೆಗೆದುಹಾಕುವಂತೆ ಮನವಿ ಮಾಡಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.
ಅಕ್ಟೋಬರ್ 1ರಂದು ಪ್ರಾರಂಭವಾದ ಹಿಂದಿಯ ಬಿಗ್ ಬಾಸ್ ನ 16ನೇ ಆವೃತ್ತಿಯಲ್ಲಿ ಚಿತ್ರ ನಿರ್ಮಾಪಕ ಸಾಜಿದ್ ಖಾನ್ ಭಾಗವಹಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
Advertisement