ಮುಂಬೈ: ಹಮಾಸ್ನ ಮಾರಣಾಂತಿಕ ದಾಳಿ ಮತ್ತು ದೇಶದ ರಕ್ಷಣಾ ಪಡೆಗಳ ಪ್ರತೀಕಾರದ ವೈಮಾನಿಕ ದಾಳಿಯ ನಡುವೆ ಇಸ್ರೇಲ್ನಲ್ಲಿ ಸಿಕ್ಕಿಬಿದ್ದಿದ್ದ ನಟಿ ನುಶ್ರತ್ ಭರುಚ್ಚಾ ಈಗ ಭಾರತೀಯ ರಾಯಭಾರಿ ಕಚೇರಿಯ ನೆರವಿನೊಂದಿಗೆ ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗುವ ಪ್ರಕ್ರಿಯೆಯಲ್ಲಿದ್ದಾರೆ.
"ನುಶ್ರುತ್ ಅವರು ಸುರಕ್ಷಿತವಾಗಿದ್ದು, ಯಶಸ್ವಿಯಾಗಿ ಅವರು ವಾಪಸ್ ಆಗಲಿದ್ದಾರೆ. ರಾಯಭಾರ ಕಚೇರಿಯ ಸಹಾಯದಿಂದ ಆಕೆಯನ್ನು ಸುರಕ್ಷಿತವಾಗಿ ಮನೆಗೆ ಕರೆತರಲಾಗುತ್ತಿದೆ. ನಮಗೆ ನೇರ ವಿಮಾನ ಸಿಗಲಿಲ್ಲ, ಆದ್ದರಿಂದ ಅವರು ಸಂಪರ್ಕ ವಿಮಾನದ ಭಾರತಕ್ಕೆ ಹಿಂತುರುಗಿದ್ದಾರೆ. ಅವರು ಭಾರತಕ್ಕೆ ಬಂದಿಳಿದ ತಕ್ಷಣ ನಾವು ನಿಮಗೆ ತಿಳಿಸುತ್ತೇವೆ ಎಂದು ನುಶ್ರತ್ ಅವರ ಪ್ರಚಾರಕರಾದ ಸಂಚಿತಾ ತ್ರಿವೇದಿ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
“ನುಶ್ರತ್ ಭರುಚ್ಚಾ ಇಸ್ರೇಲ್ನಲ್ಲಿ ಸುರಕ್ಷಿತವಾಗಿದ್ದಾಳೆ. ಅವಳ ಜತೆ ಮಾತನಾಡಿದ್ದೇನೆ. ಟೆಲ್ಅವಿವ್ನಿಂದ ಅವಳು ಮುಂಬೈಗೆ ಆಗಮಿಸಲಿದ್ದಾಳೆ. ಅವಳು ಸುರಕ್ಷಿತವಾಗಿರುವುದು ಸಮಾಧಾನ ತಂದಿದೆ. ಟೆಲ್ಅವಿವ್ನಿಂದ ದುಬೈಗೆ ತೆರಳಿ, ಅಲ್ಲಿಂದ ಮುಂಬೈಗೆ ಆಗಮಿಸಲಿದ್ದಾಳೆ” ಎಂದು ನುಶ್ರತ್ ಭರುಚ್ಚಾ ಅವರ ತಾಯಿ ತಸ್ನೀಮ್ ಭರುಚ್ಚಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರಿಂದ ನುಶ್ರತ್ ಭರುಚ್ಚಾ ಅಭಿಮಾನಿಗಳು ನಿಟ್ಟುಸಿರುವ ಬಿಟ್ಟಿದ್ದಾರೆ.
ಇಸ್ರೇಲ್ನಲ್ಲಿ ನಿನ್ನೆ ಹಮಾಸ್ ಉಗ್ರರು ದಾಳಿ ನಡೆಸಿದ ಬಳಿಕ ನಟಿ ನುಶ್ರತ್ ಭರುಚ್ಚಾ ಅವರು ಮೊಬೈಲ್ ಸಂಪರ್ಕ ಕಳೆದುಕೊಂಡಿದ್ದರು. “ನುಶ್ರತ್ ಭರುಚ್ಚಾ ಅವರು ಹೈಫಾ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ನಲ್ಲಿ ಪಾಲ್ಗೊಳ್ಳಲು ಇಸ್ರೇಲ್ಗೆ ತೆರಳಿದ್ದರು. ಶನಿವಾರ ಮಧ್ಯಾಹ್ನ 12.30ಕ್ಕೆ ನಾವು ಅವರ ಜತೆ ಮಾತನಾಡಿದ್ದೆವು. ಆದರೆ, ಉಗ್ರರ ದಾಳಿಯ ಬಳಿಕ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಫೋನ್ಗೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರು ಎಲ್ಲಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಹಾಗಾಗಿ, ಅವರು ಇಸ್ರೇಲ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನಿಸುತ್ತಿದೆ. ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಯತ್ನಿಸಲಾಗುತ್ತಿದೆ” ಎಂದು ನಟಿಯ ತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದ್ದರು. ನುಸ್ರತ್ ಭರುಚ್ಚಾ ಅವರು ಡ್ರೀಮ್ ಗರ್ಲ್, ಅಕೇಲಿ, ಸೆಲ್ಫಿ, ಜನ್ ಹಿತ್ ಮೇ ಜಾರಿ ಸೇರಿ ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
Advertisement