ಕೆಲವರಿಗೆ 'ಅನಿಮಲ್' ಬಗ್ಗೆ ಸಮಸ್ಯೆ ಇರಬಹುದು, ಬಾಕ್ಸ್ ಆಫೀಸ್ ಯಶಸ್ಸು ಚಿತ್ರದ ಮೇಲಿನ ಪ್ರೀತಿ ತೋರಿಸಿದೆ: ರಣಬೀರ್ ಕಪೂರ್

ಅನಿಮಲ್ ಚಿತ್ರದೊಂದಿಗೆ ಕೆಲವು ಜನರಿಗೆ ಸಮಸ್ಯೆ ಇರಬಹುದು. ಆದರೆ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಾಧಿಸಿರುವ ಯಶಸ್ಸು ಅದರ ಮೇಲಿನ ಜನರ ಪ್ರೀತಿಯನ್ನು ಸಾಬೀತುಪಡಿಸಿದೆ ಎಂದು ಬಾಲಿವುಡ್ ನಟ ರಣಬೀರ್ ಕಪೂರ್ ಹೇಳಿದರು. 
ಅನಿಮಲ್ ಚಿತ್ರದ ಸಕ್ಸಸ್ ಪಾರ್ಟಿ ವೇಳೆ ಮಹೇಶ್ ಭಟ್, ಆಲಿಯಾ ಭಟ್, ರಣಬೀರ್ ಕಪೂರ್ ಮತ್ತು ನೀತು ಸಿಂಗ್
ಅನಿಮಲ್ ಚಿತ್ರದ ಸಕ್ಸಸ್ ಪಾರ್ಟಿ ವೇಳೆ ಮಹೇಶ್ ಭಟ್, ಆಲಿಯಾ ಭಟ್, ರಣಬೀರ್ ಕಪೂರ್ ಮತ್ತು ನೀತು ಸಿಂಗ್
Updated on

ಮುಂಬೈ: ಅನಿಮಲ್ ಚಿತ್ರದೊಂದಿಗೆ ಕೆಲವು ಜನರಿಗೆ ಸಮಸ್ಯೆ ಇರಬಹುದು. ಆದರೆ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಾಧಿಸಿರುವ ಯಶಸ್ಸು ಅದರ ಮೇಲಿನ ಜನರ ಪ್ರೀತಿಯನ್ನು ಸಾಬೀತುಪಡಿಸಿದೆ ಎಂದು ಬಾಲಿವುಡ್ ನಟ ರಣಬೀರ್ ಕಪೂರ್ ಹೇಳಿದರು. 

ಕ್ರೈಮ್ ಆ್ಯಕ್ಷನ್ ಎಂಟರ್‌ಟೈನರ್ ಆಗಿರುವ ಅನಿಮಲ್ ಚಿತ್ರಕ್ಕೆ ಒಂದು ವರ್ಗದಿಂದ ಸ್ತ್ರೀದ್ವೇಷಿ ಮತ್ತು ಹಿಂಸಾತ್ಮಕವಾಗಿದೆ ಎಂಬ ಟೀಕೆಗಳು ಕೇಳಿಬಂದರೂ ಕೂಡ 2023 ರಲ್ಲಿ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಸಿನಿಮಾಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಈ ಚಿತ್ರ ಡಿಸೆಂಬರ್ 1 ರಂದು ದೇಶದಾದ್ಯಂತ ಬಿಡುಗಡೆಯಾಯಿತು. ಇದು ಪ್ರಪಂಚದಾದ್ಯಂತ 900 ಕೋಟಿ ರೂಪಾಯಿಗಳನ್ನು ಗಳಿಸಿತು.

ಶನಿವಾರ ರಾತ್ರಿ 'ಅನಿಮಲ್' ಸಕ್ಸಸ್ ಪಾರ್ಟಿಯಲ್ಲಿ ಮಾತನಾಡಿದ ರಣಬೀರ್ ಕಪೂರ್, ತಮ್ಮನ್ನು ನಿರ್ದೇಶಕರು ತಮ್ಮ ದೃಷ್ಟಿಕೋನದ ಭಾಗವಾಗಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

'ಇಂದು ಅನಿಮಲ್ ಚಿತ್ರದ ಯಶಸ್ಸನ್ನು ಆಚರಿಸಲು ಇಲ್ಲಿಗೆ ಬಂದಿದ್ದಕ್ಕಾಗಿ ನಾನು ನಿಮಗೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಒಂದು ವರ್ಗದ ಜನರಿಗೆ ಸಮಸ್ಯೆಯಿರುವ ಸಿನಿಮಾವಾಗಿದೆ. ಆದರೆ, ಚಿತ್ರಕ್ಕೆ ಸಿಕ್ಕಿರುವ ಯಶಸ್ಸು ಚಿತ್ರದ ಮೇಲಿನ ಪ್ರೀತಿಯನ್ನು ಸಾಬೀತುಪಡಿಸುತ್ತದೆ. ಸಿನಿಮಾ ಮೇಲಿನ ಪ್ರೀತಿಯನ್ನು ಮೀರಿರುವುದು ಯಾವುದೂ ಇಲ್ಲ, ಯಾವುದೂ ಸಿನಿಮಾವನ್ನು ಮೀರುವುದಿಲ್ಲ' ಎಂದು ನಟ ಹೇಳಿದರು.

ಸಕ್ಸಸ್ ಪಾರ್ಟಿಯಲ್ಲಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗ, ನಟರಾದ ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ, ಟ್ರಿಪ್ಟಿ ಡಿಮ್ರಿ, ಪ್ರೇಮ್ ಚೋಪ್ರಾ, ಸುರೇಶ್ ಒಬೆರಾಯ್, ಸೌರಭ್ ಸಚ್‌ದೇವ ಮತ್ತು ಸಿದ್ಧಾಂತ್ ಕಾರ್ನಿಕ್ ಭಾಗವಹಿಸಿದ್ದರು.

ಚಿತ್ರದ ಯಶಸ್ಸಿಗೆ ಸಹಕರಿಸಿದ್ದಕ್ಕಾಗಿ ನಿರ್ದೇಶಕರು ಅನಿಮಲ್ ಚಿತ್ರತಂಡ ಮತ್ತು ಸಿಬ್ಬಂದಿಗೆ ಧನ್ಯವಾದ ಹೇಳಿದರು.

'ಚಿತ್ರದಲ್ಲಿ ಪ್ರತಿಯೊಂದು ಪಾತ್ರವು ತುಂಬಾ ವಿಶೇಷ ಮತ್ತು ಗಮನಾರ್ಹವಾಗಿದೆ. ಇದು ಎಲ್ಲರ ಪರಿಶ್ರಮದಿಂದ ಸಂಭವಿಸಿದೆ. ನಿರ್ಮಾಪಕರು, ಗೀತರಚನೆಕಾರ, ಸಂಗೀತಗಾರರಿಗೆ ಧನ್ಯವಾದಗಳು ಮತ್ತು ಎಲ್ಲರಿಗೂ ಧನ್ಯವಾದಗಳು' ಎಂದು ವಂಗ ಹೇಳಿದರು.

'ಇದೆಲ್ಲವೂ ತುಂಬಾ ಅದ್ಭುತವಾಗಿದೆ. ಸಂದೀಪ್ ರೆಡ್ಡಿ ವಂಗ ಅವರಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಅವರು ಈ ಚಿತ್ರವನ್ನು ಕನ್ವಿಕ್ಷನ್‌ನೊಂದಿಗೆ ರಚಿಸಲು ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದರು' ಎಂದು ಬಾಬಿ ಡಿಯೋಲ್ ಹೇಳಿದರು.

ಚಿತ್ರದಲ್ಲಿ ರಣವಿಜಯ್ ಅವರ ಪ್ರೇಯಸಿ ಜೋಯಾ ಪಾತ್ರವನ್ನು ನಿಭಾಯಿಸಿರುವ ಟ್ರಿಪ್ಟಿ ಡಿಮ್ರಿ ಅವರು, 'ನನಗೆ ಈ ಅವಕಾಶವನ್ನು ನೀಡಿದ ಮತ್ತು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಸಂದೀಪ್ ಸರ್ ಅವರಿಗೆ ನನ್ನ ಹೃದಯದಿಂದ ಧನ್ಯವಾದ ಹೇಳಲು ಬಯಸುತ್ತೇನೆ' ಎಂದು ಹೇಳಿದರು.

ನಟ ಅನಿಲ್ ಕಪೂರ್, ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರನ್ನು ಚಿತ್ರದ 'ಲಕ್ಕಿ ಮಾಸ್ಕಾಟ್' ಎಂದು ಕರೆದರು.
'ಸಿನಿಮಾವು ನಿರ್ದೇಶಕರ ಮಾಧ್ಯಮವಾಗಿದೆ. ಇದು ಸಂದೀಪ್ ಅವರ ದೃಷ್ಟಿಕೋನ. ರಶ್ಮಿಕಾ ಅವರು ಲಕ್ಕಿ ಮಾಸ್ಕಾಟ್ ಆಗಿದ್ದಾರೆ. 'ಪುಷ್ಪ' ಮತ್ತು ಈಗ 'ಅನಿಮಲ್' ಚಿತ್ರ ಯಶಸ್ಸು ಗಳಿಸಿದೆ. ಅವರು ಯಾವಾಗಲೂ ಅದೃಷ್ಟವಂತರು. ಇದು ನಿಮ್ಮ ಜೀವನವನ್ನು ಬದಲಾಯಿಸುತ್ತದೆ ಎಂದು ನಾನು ಬಾಬಿಗೆ ಹೇಳಿದ್ದೆ' ಎಂದರು.

ರಣಬೀರ್ ಕಪೂರ್ ಅವರ ಪತ್ನಿ ನಟಿ ಆಲಿಯಾ ಭಟ್, ತಾಯಿ-ನಟಿ ನೀತು ಸಿಂಗ್, ಮಾವ, ನಿರ್ದೇಶಕರಾದ ಮಹೇಶ್ ಭಟ್, ನಟರಾದ ವಿವೇಕ್ ಒಬೆರಾಯ್, ರಾಧಿಕಾ ಮದನ್ ಮತ್ತು ನಿರ್ದೇಶಕರಾದ ಅನೀಸ್ ಬಾಜ್ಮಿ, ಫರಾ ಖಾನ್ ಅವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com