
ಬಾಲಿವುಡ್ ನಲ್ಲಿ ತೀವ್ರ ಚರ್ಚಗೆ ಗ್ರಾಸವಾಗಿರುವ 'ಹೇರಾ ಫೇರಿ -3' ಯಿಂದ ಹಠಾತ್ ಹೊರಬಂದಿರುವ ಸಹ ನಟ ಪರೇಶ್ ರಾವಲ್ ಅವರಿಗೆ ನಟ ಅಕ್ಷಯ್ ಕುಮಾರ್ ಲೀಗಲ್ ನೋಟಿಸ್ ಕಳುಹಿಸಿದ್ದು, ರೂ. 25 ಕೋಟಿ ಪರಿಹಾರ ಕೇಳಿದ್ದಾರೆ.
ಕಾನೂನು ಒಪ್ಪಂದಕ್ಕೆ ಸಹಿ ಹಾಕಿ, ಆರಂಭಿಕ ದೃಶ್ಯಗಳನ್ನು ಚಿತ್ರೀಕರಿಸಿದ್ದರೂ ಇದೀಗ ಪರೇಶ್ ಅವರು ಅರ್ಧದಲ್ಲೇ ಚಿತ್ರದಿಂದ ಹೊರಗೆ ಬಂದಿರುವುದು ' ವೃತ್ತಿಪರವಲ್ಲದ ನಡವಳಿಕೆ' ಎಂದು ಹೇಳಿ ಅವರ ವಿರುದ್ಧ ಅಕ್ಷಯ್ ಕುಮಾರ್ ಅವರ ಕೇಪ್ ಆ ಗುಡ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆ ಲೀಗಲ್ ನೋಟಿಸ್ ಕಳುಹಿಸಿದೆ.
ಫಿರೋಜ್ ನಾಡಿಯಾಡ್ವಾಲಾ ಅವರಿಂದ ಚಿತ್ರದ ಹಕ್ಕುಗಳನ್ನು ಪಡೆದುಕೊಂಡ ನಂತರ ಚಿತ್ರದ ನಿರ್ಮಾಪಕರೂ ಆಗಿರುವ ಅಕ್ಷಯ್ ಕುಮಾರ್, ಇದೀಗ ರಾವಲ್ ವಿರುದ್ಧ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದಾರೆ.
ಕಳೆದ ವಾರ ಟ್ವೀಟ್ ಮೂಲಕ ಚಿತ್ರದಿಂದ ಹೊರಗೆ ಬಂದಿರುವ ನಿರ್ಧಾರವನ್ನು ಪರೇಶ್ ತಿಳಿಸಿದ್ದರು. ಹೇರಾ ಫೇರಿ 3 ಚಿತ್ರದಿಂದ ಹಿಂದೆ ಸರಿಯುವ ನನ್ನ ನಿರ್ಧಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಿರ್ದೇಶಕರ ಜೊತೆಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಚಲನಚಿತ್ರ ನಿರ್ದೇಶಕರಾದ ಪ್ರಿಯದರ್ಶನ್ ಅವರ ಮೇಲೆ ನನಗೆ ಅಪಾರ ಪ್ರೀತಿ, ಗೌರವ ಮತ್ತು ನಂಬಿಕೆ ಇದೆ ಎಂದಿದ್ದರು.
ಅರ್ಧದಲ್ಲೇ ಚಿತ್ರದಿಂದ ಹೊರಗೆ ಬರಲು ಪರೇಶ್ ಸೂಕ್ತ ಕಾರಣ ನೀಡಿಲ್ಲ . ಚಿತ್ರದಲ್ಲಿ ಅಭಿನಯಿಸಲು ಇಷ್ಟವಿಲ್ಲದಿದ್ದರೆ ಒಪ್ಪಂದಕ್ಕೆ ಸಹಿ ಹಾಕುವ ಮುನ್ನಾವೇ ಯೋಚಿಸಬೇಕಿತ್ತು. ಮುಂಗಡ ಹಣ ತೆಗೆದುಕೊಂಡು ಈಗ ಚಿತ್ರದಿಂದ ಹೊರಗೆ ಹೋಗಿರುವುದರಿಂದ ಸಾಕಷ್ಟು ಆರ್ಥಿಕ ನಷ್ಟ ಉಂಟಾಗಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಇದು ಅಕ್ಷಯ್ ಕುಮಾರ್ ಅವರ 35 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ನಟನ ವಿರುದ್ಧ ಕಾನೂನು ಹೋರಾಟ ತೆಗೆದುಕೊಂಡ ಮೊದಲ ನಿದರ್ಶನವಾಗಿದೆ.
ಪರೇಶ್ ರಾವಲ್ ಚಿತ್ರ ಒಪ್ಪಿದ ನಂತರ ನಿರ್ಗಮಿಸುತ್ತಿರುವುದು ಇದೇ ಮೊದಲಲ್ಲ. 2023 ರಲ್ಲಿ ಸ್ಕ್ರೀಪ್ಟ್ ಬಗ್ಗೆ ಅಸಮಾಧಾನಗೊಂಡು ಅವರು ಓ ಮೈ ಗಾಡ್ 2 ನ ಭಾಗವಾಗಲು ನಿರಾಕರಿಸಿದ್ದರು. ಪ್ರಿಯದರ್ಶನ್ ನಿರ್ದೇಶನದ ಮತ್ತು ಶಾರುಖ್ ಖಾನ್ ನಿರ್ಮಾಣದ ಬಿಲ್ಲು ಬಾರ್ಬರ್ ಚಿತ್ರದಿಂದಲೂ ಪರೇಶ್ ಹೀಗೆ ಮಾಡಿದ್ದರು. ಆರಂಭದಲ್ಲಿ ಒಪ್ಪಿ ತದನಂತರ ಅರ್ಧದಲ್ಲೇ ಚಿತ್ರದಿಂದ ಹೊರಗೆ ಬಂದಿದ್ದರು.
ಸುನೀಲ್ ಶೆಟ್ಟಿ, ಪರೇಶ್ ರಾವಲ್ ಮತ್ತಿತರರು ಅಭಿನಯಿಸಿರುವ 'ಹೇರಾ ಫೇರಿ' ಸರಣಿಯಲ್ಲಿ ಬಾಬುರಾವ್ ಪಾತ್ರದಿಂದ ಮಿಂಚಿದ್ದಾರೆ. ಈಗಾಗಲೇ ಬಂದಿರುವ ಹೇರಾ ಫೇರಿ ಎರಡು ಭಾಗಗಳಲ್ಲಿ ಅವರ ಪಾತ್ರ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಮೂರನೇ ಭಾಗವನ್ನು ಜನರು ಕಾತುರದಿಂದ ನಿರೀಕ್ಷಿಸುತ್ತಿದ್ದರು. ಇದೀಗ ಪರೇಶ್ ಆ ಚಿತ್ರದಿಂದ ಹೊರಗೆ ಬಂದಿರುವುದು ಅದರ ಮುಂದಿನ ಚಿತ್ರೀಕರಣಕ್ಕೆ ಅಡ್ಡಿಯಾಗುವ ಸಾಧ್ಯತೆಯನ್ನು ತೋರುತ್ತಿದೆ.
Advertisement