

ಉದ್ಯಮಿ ಹಾಗೂ ನಿರ್ಮಾಪಕ ರಾಜ್ ಕುಂದ್ರಾ ತಮ್ಮ ಜೀವನದ ಅತ್ಯಂತ ಕಠಿಣ ಹಂತವನ್ನು ಅಂದರೆ 2021ರಲ್ಲಿ ಅಶ್ಲೀಲ ಚಿತ್ರಗಳ ತಯಾರಿಕೆ ಪ್ರಕರಣದಲ್ಲಿ ತಮ್ಮ ಬಂಧನ ಮತ್ತು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಕಳೆದ 63 ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಜೈಲಿನಲ್ಲಿದ್ದಾಗ, ನಟಿ ಹಾಗೂ ತಮ್ಮ 16 ವರ್ಷಗಳ ಸಂಗಾತಿ ಶಿಲ್ಪಾ ಶೆಟ್ಟಿ ಅವರಿಂದ ವಿಚ್ಛೇದನ ಪಡೆಯುವ ಕುರಿತಾದ ವದಂತಿಗಳು ಹರಡಿದಾಗ 'ಆತ್ಮಹತ್ಯೆ ಮಾಡಿಕೊಳ್ಳುವ' ಆಲೋಚನೆ ನನಗೆ ಬಂದಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
'ನಾನು ಅಲ್ಲಿ ಹೇಗೋ ನಿಭಾಯಿಸುತ್ತಿದ್ದೆ. ಒಂದು ದಿನ ಮಾಧ್ಯಮಗಳ ಮೂಲಕ ಒಂದು ಸುದ್ದಿ ಬಂತು — ಅದು ಕೇವಲ ವದಂತಿ ಎಂದು ನನಗೆ ನಂತರ ತಿಳಿಯಿತು. 'ಶಿಲ್ಪಾ ಶೆಟ್ಟಿ ಅವರು ರಾಜ್ ಕುಂದ್ರಾ ಅವರನ್ನು ತೊರೆಯುತ್ತಿದ್ದಾರೆ' ಮತ್ತು ನಮಗೆ ವಿಚ್ಛೇದನವಾಗುತ್ತಿದೆ ಎಂಬುದು ಆ ಸುದ್ದಿಯಾಗಿತ್ತು. ಆ ಸಮಯದಲ್ಲಿ ತಾನು ಸಂಪೂರ್ಣವಾಗಿ ಕುಸಿದುಹೋಗಿದ್ದೆ ಮತ್ತು ತೀವ್ರ ನೊಂದಿದ್ದೆ' ಎಂದು ಅವರು ಎಬಿಪಿ ನ್ಯೂಸ್ಗೆ ತಿಳಿಸಿದರು.
'ಅಂದು ರಾತ್ರಿ ನನಗೆ ನಿದ್ದೆ ಬರಲಿಲ್ಲ, ಏಕೆಂದರೆ ನನ್ನ ಜೀವನವನ್ನೇ ಕೊನೆಗೊಳಿಸಿಕೊಳ್ಳಬೇಕೆನಿಸುವಷ್ಟು ಹತಾಶೆ ಆವರಿಸಿತ್ತು. ಬದುಕುವುದರಲ್ಲಿ ಅರ್ಥವೇ ಇಲ್ಲವೆಂದು ನನಗೆ ಅನ್ನಿಸಿತು; ಏಕೆಂದರೆ, ನನ್ನ ಪತ್ನಿ ಮತ್ತು ಕುಟುಂಬಕ್ಕಿಂತ ಮುಖ್ಯವಾದದ್ದು ನನಗೆ ಬೇರೇನೂ ಇರಲಿಲ್ಲ. ನನ್ನ ಜೀವನವನ್ನು ಅಂತ್ಯಗೊಳಿಸಿಕೊಳ್ಳಬೇಕೆನಿಸಿತು... ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದೇ ಅನಿಸಿತ್ತು' ಎಂದು ಅವರು ಆ ಕ್ಷಣಗಳನ್ನು ನೆನಪಿಸಿಕೊಂಡರು.
'ಮರುದಿನ ನಾನು ಶಿಲ್ಪಾ ಅವರೊಂದಿಗೆ ಫೋನ್ನಲ್ಲಿ ಮಾತನಾಡಿದೆ. ಅವರು, 'ಇದು ಕೇವಲ ಅರ್ಥಹೀನ ಸುದ್ದಿ. ನಾನು ನಿಮ್ಮೊಂದಿಗಿದ್ದೇನೆ. ನನಗೆ ನಿಮ್ಮ ಮೇಲೆ ನಂಬಿಕೆಯಿದೆ. ಇದರ ಬಗ್ಗೆ ಚಿಂತಿಸಬೇಡಿ' ಎಂದು ಹೇಳಿದರು. ಆ ಸಂಭಾಷಣೆಯ ನಂತರ ನನಗೆ ಅಪಾರ ಧೈರ್ಯ ಬಂತು. 'ಏನು ಬೇಕಾದರೂ ಆಗಲಿ. ನನ್ನ ಪತ್ನಿ ನನ್ನೊಂದಿಗಿದ್ದಾಳೆ. ನಾನು ಇಡೀ ಜಗತ್ತನ್ನೇ ಎದುರಿಸಬಲ್ಲೆ. ನನಗೆ ಯಾವುದರ ಚಿಂತೆಯೂ ಇಲ್ಲ' ಎಂದು ನಾನು ಅಂದುಕೊಂಡೆ' ಎಂದು ಅವರು ಹೇಳಿದರು.
ಪಾರ್ಲೆ-ಜಿ ಬಿಸ್ಕತ್ತು ಮತ್ತು ನೀರು ಕುಡಿದು ಬದುಕಿದ್ದೆ
ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಕಳೆದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಅಲ್ಲಿನ ಪರಿಸ್ಥಿತಿ, ಅದರಲ್ಲೂ ವಿಶೇಷವಾಗಿ ಆಹಾರ ಅತ್ಯಂತ ಕಷ್ಟಕರವಾಗಿತ್ತು. ಆ ಆಹಾರ ಸೇವಿಸುವುದೇ ಕಷ್ಟವಾಗಿತ್ತು. ಅಲ್ಲಿಂದ 63 ದಿನಗಳ ಕಾಲ ಬಹುತೇಕ ಪಾರ್ಲೆ-ಜಿ ಬಿಸ್ಕತ್ತು ಮತ್ತು ನೀರಿನ ಆಧಾರದ ಮೇಲೆ ಬದುಕುಳಿದಿದ್ದೆ ಎಂದರು.
ಜೈಲಿನಲ್ಲಿದ್ದ ಅವಧಿಯಲ್ಲಿ ತಾನು ಸುಮಾರು 17-18 ಕೆಜಿ ತೂಕವನ್ನು ಕಳೆದುಕೊಂಡಿದ್ದಾಗಿ ರಾಜ್ ಹೇಳಿಕೊಂಡರು.
ಜುಲೈ 2021ರಲ್ಲಿ ಅಶ್ಲೀಲವಾದ ವಿಡಿಯೋಗಳನ್ನು ವಿತರಿಸಿದ ಅಥವಾ ಪ್ರಸಾರ ಮಾಡಿದ ಆರೋಪದ ಮೇಲೆ, ಭಾರತೀಯ ದಂಡ ಸಂಹಿತೆ (IPC), ಮಹಿಳೆಯರ ಅಸಭ್ಯ ಪ್ರದರ್ಶನ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ರಾಜ್ ಕುಂದ್ರಾ ವಿರುದ್ಧ ಆರೋಪ ಹೊರಿಸಲಾಗಿತ್ತು. ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದರು ಮತ್ತು ನಂತರ ಸೆಪ್ಟೆಂಬರ್ 2021ರಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿತ್ತು.
63 ದಿನಗಳ ಕಾಲ ಬಂಧನ ಕೇಂದ್ರದಲ್ಲಿದ್ದ ನಂತರ ಬಿಡುಗಡೆಯಾದ ರಾಜ್ ಕುಂದ್ರಾ, ವಿಶಿಷ್ಟವಾದ ಮಾಸ್ಕ್ ಧರಿಸಿ ಓಡಾಡುತ್ತಿದ್ದರು.
ಕಳೆದ ವರ್ಷ, ರಾಜ್ ಕುಂದ್ರಾ ಅವರು ಪ್ರೈಮ್ ವಿಡಿಯೋದ ರಿಯಾಲಿಟಿ ಶೋ 'ದಿ ಟ್ರೈಟರ್ಸ್'ನ ಮೊದಲ ಸೀಸನ್ನಲ್ಲಿ ಭಾಗವಹಿಸಿದ್ದರು ಮತ್ತು ತಮ್ಮ ಬಗ್ಗೆ ಸಾರ್ವಜನಿಕರಲ್ಲಿದ್ದ ಅಭಿಪ್ರಾಯವನ್ನು ಬದಲಾಯಿಸಲು ಪ್ರಯತ್ನಿಸಿದ್ದರು.