

ಬಾಲಿವುಡ್ನ ಖ್ಯಾತ ನಟ ಗೋವಿಂದ ಅವರ 37 ವರ್ಷಗಳ ದಾಂಪತ್ಯ ಜೀವನ ಈಗ ಮುರಿದುಬೀಳುವ ಹಂತಕ್ಕೆ ತಲುಪಿದೆಯೇ? ಹೌದು, ಇಂತಹದೊಂದು ಬಲವಾದ ಅನುಮಾನ ಈಗ ಇಡೀ ಚಿತ್ರರಂಗ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗೋವಿಂದ ಅವರ ಪತ್ನಿ ಸುನಿತಾ ಅಹುಜಾ ಅವರು ಇಂದು (ಬುಧವಾರ) ತಮ್ಮ ಪುತ್ರ ಯಶ್ವರ್ಧನ್ ಅಹುಜಾ ಅವರೊಂದಿಗೆ ಮುಂಬೈನ ಬಾಂದ್ರಾ ಫ್ಯಾಮಿಲಿ ಕೋರ್ಟ್ಗೆ ಭೇಟಿ ನೀಡಿರುವುದು ಈ ವದಂತಿಗಳಿಗೆ ಪ್ರಮುಖ ಕಾರಣವಾಗಿದೆ.
ತಾಯಿ-ಮಗ ನ್ಯಾಯಾಲಯದ ಆವರಣದ ಬಳಿ ಕಾಣಿಸಿಕೊಂಡಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಭೇಟಿ ಕುರಿತು ಹಲವು ರೀತಿಯ ಚರ್ಚೆಗಳು ಆರಂಭವಾಗಿವೆ.
ಸುನೀತಾ ಹಾಗೂ ಯಶವರ್ಧನ್ ಅವರು ನ್ಯಾಯಾಲಯಕ್ಕೆ ಏಕೆ ಭೇಟಿ ನೀಡಿದ್ದರು ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಗೋವಿಂದ ಮತ್ತು ಸುನೀತಾ ಅವರ ದಾಂಪತ್ಯ ಜೀವನದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣ ಬಳಕೆದಾರರು ಈ ಭೇಟಿಯನ್ನು ವಿಚ್ಛೇದನದ ವದಂತಿಗೆ ಜೋಡಿಸಿದ್ದಾರೆ.
ನ್ಯಾಯಾಲಯದ ಬಳಿ ಛಾಯಾಗ್ರಾಹಕರು ಸುನೀತಾ ಅವರನ್ನು ಪ್ರಶ್ನಿಸಿದ್ದು, ಅವರು ನಗುತ್ತಾ, “ಹುಟ್ಟುಹಬ್ಬ ಆಚರಿಸಲು ಬಂದಿದ್ದೇವೆ” ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಯಶವರ್ಧನ್ ಅವರು ಪಾಪರಾಜಿಗಳ ಪ್ರಶ್ನೆಗಳಿಂದ ಅಸಮಾಧಾನಗೊಂಡಂತೆ ಕಂಡುಬಂದಿದ್ದು, ದಾರಿ ಬಿಡುವಂತೆ ಹಾಗೂ ಪ್ರಶ್ನೆಗಳನ್ನು ಕೇಳದಂತೆ ಸೂಚಿಸಿದ್ದಾರೆ.
‘ವಿಚ್ಛೇದನ ಪಡೆಯುತ್ತಿದ್ದಾರಾ?’ ನೆಟ್ಟಿಗರ ಪ್ರಶ್ನೆ
ಈ ನಡುವೆ ಸುನೀತಾ ಮತ್ತು ಯಶವರ್ಧನ್ ಕೌಟುಂಬಿಕ ನ್ಯಾಯಾಲಯದ ಬಳಿ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಹಲವು ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
“ಕಾನೂನುಬದ್ಧವಾಗಿ ಬೇರ್ಪಡುತ್ತಿದ್ದಾರೆ, ವಿಚ್ಛೇದನ ಪಡೆಯುತ್ತಿದ್ದಾರೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು “ಇದು ಬಾಂದ್ರಾ ಕೌಟುಂಬಿಕ ನ್ಯಾಯಾಲಯ. ವಿಚ್ಛೇದನ ಖಚಿತ” ಎಂದು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಗೋವಿಂದ ಅವರಿಗೆ ಸಲಹೆ ನೀಡಿದ್ದು, ದೀರ್ಘಕಾಲದ ದಾಂಪತ್ಯವನ್ನು ಕ್ಷಣಾರ್ಧದಲ್ಲಿ ಮುಗಿಸಬೇಡಿ, ಸಂಬಂಧವನ್ನು ಉಳಿಸಿಕೊಳ್ಳಲು ಪ್ರೌಢವಾಗಿ ಯೋಚಿಸಬೇಕು ಎಂದು ಹೇಳಿದ್ದಾರೆ.
ಇನ್ನೊಬ್ಬರು, “ಇಬ್ಬರೂ ಪರಸ್ಪರರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡುತ್ತಿದ್ದರೆ, ಶಾಂತಿಯುತವಾಗಿ ಪ್ರತ್ಯೇಕವಾಗುವುದು ಉತ್ತಮ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಇವೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಊಹಾಪೋಹಗಳಷ್ಟೇ. ಗೋವಿಂದ ಅಥವಾ ಸುನೀತಾ ಅವರು ವಿಚ್ಛೇದನ ಪಡೆಯುತ್ತಿರುವುದಾಗಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯಕ್ಕೆ ಭೇಟಿ ನೀಡಿರುವ ನಿಖರ ಕಾರಣವೂ ಬಹಿರಂಗವಾಗಿಲ್ಲ.
ಗೋವಿಂದ ಮತ್ತು ಸುನೀತಾ ಅವರ ದಾಂಪತ್ಯ ಜೀವನ ಇತ್ತೀಚೆಗೆ ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ಕೇಂದ್ರವಾಗಿದೆ.
ಇಬ್ಬರೂ ತಮ್ಮ ವೈವಾಹಿಕ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ವಿಭಿನ್ನ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಗಮನ ಸೆಳೆದಿದೆ.
ಸುನೀತಾ ಅವರು ತಮ್ಮ ದಾಂಪತ್ಯ ಜೀವನದ ಕುರಿತು ಹಲವು ಸಂದರ್ಭಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಗೋವಿಂದ ಅವರ ವೈಯಕ್ತಿಕ ಜೀವನ ಹಾಗೂ ಇತರ ಮಹಿಳೆಯರೊಂದಿಗಿನ ಸಂಬಂಧದ ಕುರಿತೂ ಅವರು ಆರೋಪಗಳನ್ನು ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಪಾಪರಾಜಿಗಳೊಂದಿಗೆ ಮಾತನಾಡುವ ವೇಳೆ ಸುನೀತಾ ಅವರು ಗೋವಿಂದ ಅವರ ಹೊಸ ಸಹನಟಿ ಕೋಮಲ್ ರಾಣಿ ಕುರಿತು ‘ಶುಗರ್ ಡ್ಯಾಡಿ’ ಎಂಬ ಪದ ಬಳಸಿದ್ದರು. ಕೋಮಲ್ ರಾಣಿಯೊಂದಿಗೆ ಗೋವಿಂದ ಸಂಬಂಧ ಹೊಂದಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದ್ದರು.
ಈ ಹೇಳಿಕೆಗಳ ಬಳಿಕ ಗೋವಿಂದ ಅವರು ಪರೋಕ್ಷವಾಗಿ ಸುನೀತಾ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಬಗ್ಗೆ ಕೆಟ್ಟ ರೀತಿಯಲ್ಲಿ ಮಾತನಾಡುವುದನ್ನು ನಿಲ್ಲಿಸಬೇಕು ಹಾಗೂ ಅಸಭ್ಯ ಪದಗಳ ಬಳಕೆಯಲ್ಲಿ ನಿಯಂತ್ರಣ ಇರಬೇಕು ಎಂದು ಅವರು ಸೂಚಿಸಿದ್ದರು.ಸಹನಟಿಯೊಂದಿಗೆ ತೆರೆ ಹಂಚಿಕೊಂಡಾಕ್ಷಣ ಸಂಬಂಧವಿದೆ ಎಂದು ಅರ್ಥವಲ್ಲ ಎಂದೂ 62 ವರ್ಷದ ಹೇಳಿದ್ದರು.
ಈ ಮೂಲಕ ತಮ್ಮ ಮತ್ತು ಕಿರಿಯ ನಟಿಯ ನಡುವಿನ ವಯಸ್ಸಿನ ಅಂತರವನ್ನು ಆಧರಿಸಿ ಸಂಬಂಧದ ಬಗ್ಗೆ ಊಹಾಪೋಹಗಳನ್ನು ಹರಡುವುದು ಸರಿಯಲ್ಲ ಎಂಬ ಸಂದೇಶವನ್ನೂ ಅವರು ನೀಡಿದ್ದರು.
ಗೋವಿಂದ ಮತ್ತು ಸುನೀತಾ ಅವರ ದಾಂಪತ್ಯದ ಕುರಿತು ಈ ಹಿಂದೆ ಹಲವು ವದಂತಿಗಳು ಹರಿದಾಡಿದ್ದರೂ, ಪ್ರಸ್ತುತ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.