

ಮುಂಬೈ: ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಹಿಟ್ ಸಿನಿಮಾ 'ಗುಲಾಲ್' ಏಕೆ ತಪ್ಪಿತು ಎಂಬುದನ್ನು ನಟಿ ತೇಜಸ್ವಿನಿ ಕೊಲ್ಹಾಪುರೆ ಅವರು ಹೇಳಿದ್ದಾರೆ.
"ನಾನು ಪರದೆಯ ಮೇಲೆ ಬೆತ್ತಲೆಯಾಗುವುದಿಲ್ಲ"
ಇತ್ತೀಚೆಗೆ ನಟಿ ತೇಜಸ್ವಿನಿ ಕೊಲ್ಹಾಪುರೆ ಅವರು ತಮ್ಮ ವೃತ್ತಿಜೀವನದ ಒಂದು ಪ್ರಮುಖ ಘಟನೆಯನ್ನು ಪುನಃ ನೆನಪಿಸಿಕೊಂಡಿದ್ದು, ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಮೆಚ್ಚುಗೆ ಪಡೆದ 2009ರ ಹಿಟ್ ಸಿನಿಮಾ ಗುಲಾಲ್ ಅನ್ನು ಅವರು ಏಕೆ ನಿರಾಕರಿಸಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ಅವರ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡಿದ ನಟಿ, ಕಶ್ಯಪ್ ಅವರು ಚಿತ್ರದಲ್ಲಿ ನಾನು ನಟಿಸಲು ಬಯಸಿದ್ದರೂ, ಪರದೆಯ ಮೇಲೆ ತಮ್ಮ ಪಾತ್ರವು ನಗ್ನವಾಗಿ ಕಾಣಿಸಿಕೊಳ್ಳುವ ದೃಶ್ಯ ತಮಗೆ ಒಪ್ಪಿಗೆಯಾಗಲಿಲ್ಲ ಎಂದು ಹೇಳಿದ್ದಾರೆ.
ಅನುರಾಗ್ ಅವರು ನನಗೆ ಚಿತ್ರಕಥೆ ನೀಡಿ ಓದಲು ಹೇಳಿದರು. ಆದರೆ, ನನಗೆ ಆ ಕಥೆಯಲ್ಲಿ ನಟಿಸಬೇಕಿದ್ದ ಮಹಿಳಾ ಪಾತ್ರಕ್ಕೆ ಅಷ್ಟಾಗಿ ಪ್ರಾಮುಖ್ಯತೆ ಇದೆ ಎನಿಸಲಿಲ್ಲ. ಅದಕ್ಕಿಂತ ಹೆಚ್ಚಾಗಿ ಆ ಪಾತ್ರದಲ್ಲಿ ಬೆತ್ತಲಾಗಿ ನಟಿಸಬೇಕಾದ ಅಗತ್ಯವಿತ್ತು. ಇದನ್ನು ಕೇಳಿದ ತಕ್ಷಣವೇ ನಾನು ಅನುರಾಗ್ ಅವರ ಬಳಿ, ನಿಮಗೇನಾದರೂ ತಲೆ ಕೆಟ್ಟಿದೆಯಾ? ಇದನ್ನು ಮಾಡಲು ಹೇಗೆ ಸಾಧ್ಯ? ಇದು ಹಿಂದಿ ಸಿನಿಮಾ, ನಾನು ಹೀಗೆ ನಟಿಸಿದರೆ ನನ್ನನ್ನು ಮನೆಯಿಂದಲೇ ಹೊರಹಾಕುತ್ತಾರೆ ಎಂದು ನೇರವಾಗಿಯೇ ಹೇಳಿದೆ. ಆದರೆ ಆ ಪಾತ್ರವನ್ನು ಬರೆದಿರುವುದೇ ಆ ರೀತಿ ಎಂದು ಅನುರಾಗ್ ಉತ್ತರಿಸಿದ್ದರು ಎಂದು ತೇಜಸ್ವಿನಿ ಸ್ಪಷ್ಟಪಡಿಸಿದ್ದಾರೆ.
ನಂತರ ಆ ಪಾತ್ರವನ್ನು ಮಾಡೆಲ್ ಜೆಸ್ಸಿ ರಾಂಧವಾ ಅಭಿನಯಿಸಿದರು. ಆದರೆ ಜೆಸ್ಸಿ ಆ ದೃಶ್ಯಗಳಲ್ಲಿ 'ಬಾಡಿಸೂಟ್' ಧರಿಸಿ ನಟಿಸಿದ್ದರು ಎಂಬುದು ತೇಜಸ್ವಿನಿಗೆ ಆ ಬಳಿಕ ತಿಳಿಯಿತು. ಜೆಸ್ಸಿ ಆ ರೀತಿ ನಟಿಸಿದ್ದನ್ನು ನೋಡಿದಾಗ, ನಾನೂ ಕೂಡ ಅದೇ ರೀತಿ ಬಾಡಿಸೂಟ್ ಧರಿಸಿ ಆ ಪಾತ್ರವನ್ನು ಮಾಡಬಹುದಿತ್ತಲ್ಲಾ ಎನಿಸಿತು ಎಂದು ತೇಜಸ್ವಿನಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.