

ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಬಾಲಿವುಡ್ ನಟಿ ರಾಖಿ ಸಾವಂತ್ ಧ್ವನಿ ಎತ್ತಿದ್ದಾರೆ. ಸಿಜೆಪಿ (CJP) ನೇತೃತ್ವದ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ವಿರುದ್ಧ ನಡೆದಿದೆ ಎನ್ನಲಾದ ಲಾಠಿಚಾರ್ಜ್ ಕುರಿತು ಪ್ರತಿಕ್ರಿಯಿಸುತ್ತಾ ಕಣ್ಣೀರಿಟ್ಟಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜುಲೈ 20 ರಂದು ನಡೆದ ಘಟನೆಗೆ ಕಾರಣರಾದವರು "ನಾಚಿಕೆಪಡಬೇಕು" ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ 6 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮೋದಿ ಜೀ, ನಿಮಗೇನಾಗಿದೆ? ನಿಮಗೇನಾಗಿದೆ ಮೋದಿ ಜೀ?" ಎಂದು ಅಳುತ್ತಾ ಕೇಳಿದ್ದು, ಮಕ್ಕಳ ಮೇಲೆ ಇಷ್ಟೊಂದು ದೌರ್ಜನ್ಯ ಎಸಗುತ್ತಿದ್ದೀರಾ? ಅಧಿಕಾರದ ಕುರ್ಚಿಗಾಗಿ? ನಿಮಗೇನಾಗಿದೆ ಮೋದಿ ಜೀ? ಎಂದು ರಾಖಿ ಸಾವಂತ್ ಪ್ರಶ್ನಿಸಿದ್ದಾರೆ.
"ನೀವು ಮಕ್ಕಳ ಮೇಲೆ ಲಾಠಿಚಾರ್ಜ್ ಮಾಡುತ್ತಿದ್ದೀರಾ? ದೇಶದ ಮಕ್ಕಳ ಬಗ್ಗೆ ಸ್ವಲ್ಪವೂ ಕರುಣೆ ಇಲ್ಲವೇ? ಅಧಿಕಾರದ ಕುರ್ಚಿಯನ್ನು ಇಟ್ಟುಕೊಂಡು ಏನು ಮಾಡುತ್ತೀರಿ? ಇದೆಲ್ಲವನ್ನೂ ಏನು ಮಾಡುತ್ತಿದ್ದೀರಿ ಮೋದಿ ಜೀ? ಎಲ್ಲರಿಗೂ ನಾಚಿಕೆಯಾಗಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಹೀಗೆ ಯಾರಾದ್ರೂ ಹೊಡೆಯುತ್ತಾರೆಯೇ? "ಇದು ನಿಮ್ಮ ಪೊಲೀಸರೇ? ಇದು ದೆಹಲಿ ಪೊಲೀಸರೇ? ಎಂದು ಪ್ರಶ್ನಿಸಿದ್ದಾರೆ. ಈ ಮಧ್ಯೆ ಪ್ರತಿಭಟನಾ ಸ್ಥಳದಲ್ಲಿ ಹಿಂಸಾಚಾರ ನಡೆದಿದೆ ಎಂಬ ಆರೋಪಗಳನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ.