

ಬಾಲಿವುಡ್ ನಲ್ಲಿ ನಟ ರಣವೀರ್ ಸಿಂಗ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಪ್ರತಿಕ್ರಿಯಿಸಿದ್ದು, ಇದಕ್ಕೆ ಅವರ ಇತ್ತೀಚಿನ ಚಿತ್ರ ಧುರಂಧರ್ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.
ಕಳೆದ ತಿಂಗಳು ರಣವೀರ್ ಸಿಂಗ್ ಅವರು ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್ 3’ ಚಿತ್ರದಿಂದ ಹೊರಬಂದಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಚಲನಚಿತ್ರ ಕಾರ್ಮಿಕರ ಒಕ್ಕೂಟ ಅವರ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಬಹಿಷ್ಕಾರ ಹಾಕಿತ್ತು. ಆದರೆ, ಕೆಲ ದಿನಗಳ ತರುವಾಯ ಈ ನಿಷೇಧವನ್ನು ಒಕ್ಕೂಟ ಹಿಂಪಡೆದಿತ್ತು.
ಈ ಬಗ್ಗೆ ಮಾತನಾಡಿರುವ ಕಂಗನಾ, ಬಾಲಿವುಡ್ನಲ್ಲಿ ಪಾಕಿಸ್ತಾನದ ಮೇಲಿನ ಪ್ರೀತಿ ಇನ್ನೂ ಕಮ್ಮಿಯಾಗಿಲ್ಲ. ರಣವೀರ್ ನಟನೆಯ ಧುರಂಧರ್ ಸಕ್ಸಸ್ ಜೀರ್ಣಿಸಿಕೊಳ್ಳಲು ಆಗದಿದ್ದವರು ನಟನ ವಿರುದ್ದ ಈ ಪಿತೂರಿ ರೂಪಿಸಿದ್ದರೆಂದು ನಾನು ನಂಬಿದ್ದೆನೆಂದು ನಟಿ ಹೇಳಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, ಬಾಲಿವುಡ್ನಲ್ಲಿ ಪಾಕಿಸ್ತಾನವನ್ನು ಮಿತ್ರದೇಶ ಎಂದು, ಅವರು ಸಜ್ಜನರೆಂದು ತೋರಿಸುವ ಒಂದು ಚಾಳಿಯಿದೆ. ಅದರೆ ಧುರಂಧರ್ ಸಿನಿಮಾದಲ್ಲಿ ಪಾಕಿಸ್ತಾನದ ನಿಜವಾದ ಮುಖ ಅನಾವರಣ ಆಗಿದ್ದು, ಇದು ಕೆಲವರ ಕೋಪಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಹೀಗಾಗಿ ನಟ ರಣವೀರ್ನನ್ನು ಟಾರ್ಗೆಟ್ ಮಾಡಿದ್ದರು. ಆದರೆ ಜನರ ಪ್ರೀತಿ, ಮತ್ತು ಒತ್ತಡಕ್ಕೆ ಮಣಿದು ಹೇರಲಾಗಿದ್ದ ನಿಷೇಧವನ್ನು ಹಿಂತೆಗೆದುಕೊಂಡಿದ್ದಾರೆ ಎಂದರು.
ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ಗಳಿಕೆ ಮಾಡಿ ದಾಖಲೆ ನಿರ್ಮಿಸಿತ್ತು. ಈ ಚಿತ್ರದಲ್ಲಿ ರಣವೀರ್ ಅವರು ಭಾರತೀಯ ಗೂಡಾಚಾರಿಯಾಗಿ ಪಾಕಿಸ್ತಾನದ ಭಯೋತ್ಪಾದಕ ಜಾಲವನ್ನು ಧ್ವಂಸ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಯಶಸ್ಸಿನ ನಂತರವೇ ರಣವೀರ್ ಅವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ ಎಂಬುದು ಕಂಗನಾ ಅವರ ವಾದ.
Advertisement