ಬಾಲಿವುಡ್ ಉದ್ಯಮ ಕುಸಿಯುವತ್ತ ದಾಪುಗಾಲು ಹಾಕಿದೆ: ನಿರ್ದೇಶಕ ಶೇಖರ್ ಕಪೂರ್

೧೦೦ ಕೋಟಿ ಬಜೆಟ್ ಸಿನೆಮಾಗಳನ್ನು ಹೆಚ್ಚೆಚ್ಚು ಮಾಡುತ್ತಿರುವ ಹಿಂದಿ ಸಿನೆಮಾ ಉದ್ಯಮ ಕುಸಿಯುವತ್ತ ಮುನ್ನಡೆದಿದೆ...
ನಿರ್ದೇಶಕ ಶೇಖರ್ ಕಪೂರ್ (ಸಂಗ್ರಹ ಚಿತ್ರ)
ನಿರ್ದೇಶಕ ಶೇಖರ್ ಕಪೂರ್ (ಸಂಗ್ರಹ ಚಿತ್ರ)

ಪಣಜಿ: ೧೦೦ ಕೋಟಿ ಬಜೆಟ್ ಸಿನೆಮಾಗಳನ್ನು ಹೆಚ್ಚೆಚ್ಚು ಮಾಡುತ್ತಿರುವ ಹಿಂದಿ ಸಿನೆಮಾ ಉದ್ಯಮ ಕುಸಿಯುವತ್ತ ಮುನ್ನಡೆದಿದೆ ಎಂದು ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಅಭಿಪ್ರಾಯಪಟ್ಟಿದ್ದಾರೆ. ನಾನು 'ಮಿ. ಇಂಡಿಯಾ' ಸಿನೆಮಾವನ್ನು ೩೫೦ ಕಡೆ ಬಿಡುಗಡೆ ಮಾಡಿದ್ದಾಗ ನನ್ನನ್ನು ಹುಚ್ಚ ಎಂದು ಕರೆದದ್ದು ನೆನಪಿದೆ. ಯಾರೂ ಅಷ್ಟು ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆ ಮಾಡುವುದಿಲ್ಲ, ನಾನು ಸುಮ್ಮನೆ ದುಡ್ಡು ದಂಡ ಮಾಡುತ್ತಿದ್ದೇನೆ ಎಂದಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಿರ್ಮಾಪಕರು ೧೦೦ ಕೋಟಿ ಗೆರಯನ್ನು ಬೇಗನೆ ದಾಟಲು ಈಗ ೪೦೦೦ ದಿಂದ ೫೦೦೦ ಕೇಂದ್ರಗಳಲ್ಲಿ ಸಿನೆಮಾ ಬಿಡುಗಡೆ ಮಾಡುತ್ತಾರೆ. ಈ ಹೊಸ ದಿಕ್ಕು ನೋಡಿದರೆ, ಬಾಲಿವುಡ್ ಕುಸಿಯುವತ್ತ ಮುನ್ನಡೆದಿದೆ" ಎಂದು ಕಪೂರ್ ಎನ್ ಎಫ್ ಡಿ ಸಿ ಯ ಫಿಲ್ಮ್ ಬಾಜಾರ್ ನ ಸಂವಾದದಲ್ಲಿ ತಿಳಿಸಿದ್ದಾರೆ.

ಇದೇ ಸಂವಾದದಲ್ಲಿ ಅಥಿತಿ ಭಾಷಣಕಾರನಾಗಿ ಭಾಗವಹಿಸಿದ್ದ ನಿರ್ದೇಶಕ ಅನುರಾಗ್ ಕಶ್ಯಪ್ ಈ ರೂಢಿಯಿಂದ ಪ್ರಾದೇಶಿಕ ಸಿನೆಮಾಗಳ ವ್ಯವಹಾರಕ್ಕೆ ತೊಂದರೆಯಾಗಿದೆ ಎಂದಿದ್ದಾರೆ. "ಪ್ರಾದೇಶಿಕ ಸಿನೆಮಾ ಉದ್ಯಮ ಕೆಲವು ಅತ್ಯುತ್ತಮ ಸಿನೆಮಾಗಳನ್ನು ಮಾಡುತ್ತಿದೆ. ಮರಾಠಿ ಮತ್ತು ತಮಿಳು ಚಲನಚಿತ್ರ ಉದ್ಯಮಗಳಲ್ಲಿ ಬಾಲಿವುಡ್ ಗಿಂತ ಅತ್ಯುತ್ತಮ ಸಿನೆಮಾಗಳನ್ನು ಮಾಡುತ್ತಿದ್ದಾರೆ. ಆದರೆ ದೊಡ್ಡ ದೊಡ್ಡ ನಟರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಯಾಗುವ ನಮ್ಮ ಸಿನೆಮಾಗಳಿಗೆ ಹೋಲಿಸಿದರೆ ಅವರ ಸಿನೆಮಾಗಳಿಗೆ ಈ ರೀತಿಯ ಸ್ವಾಗತ ಸಿಗುವುದು ಅತಿ ವಿರಳ" ಎಂದಿದ್ದಾರೆ ಕಶ್ಯಪ್.

ಹಲವಾರು ಸಣ್ಣ ಬಜೆಟ್ ಸಿನೆಮಾಗಳು ಮತ್ತು ಸಾಮಾಜಿಕ ಹೊಣೆಯುಳ್ಳ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು ಸಹಾಯ ಮಾಡಿರುವ ಅನುರಾಗ್, ನಾನು ಪ್ರೇಕ್ಷಕನಾಗಿ ಎಂತಹ ಚಿತ್ರಗಳನ್ನು ನೋಡಬೇಕೆಂದುಕೊಂಡಿದ್ದೆನೊ ಅಂತಹ ಸಿನೆಮಾಗಳನ್ನು ನಿರ್ಮಿಸುವವರಿಗೆ ಸಹಾಯ ಮಾಡಲು ನಿರ್ಮಾಪಕನಾಗಿದ್ದೇನೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com