

ಬೆಂಗಳೂರು: 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ನಟ ಸಂಚಾರಿ ವಿಜಯ್ ಹಾಗೂ ಅತ್ಯುತ್ತಮ ಪ್ರಸಾದನ ಪ್ರಶಸ್ತಿ ಪಡೆದ ನಾಗರಾಜು ಮತ್ತು ರಾಜು ಅವರಿಗೆ ಕನ್ನಡಪ್ರಭ.ಕಾಂ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಇಂಡಿಯನ್ ಎಕ್ಸ್ ಪ್ರೆಸ್ ಕಟ್ಟಡದಲ್ಲಿ ಕನ್ನಡಪ್ರಭ.ಕಾಂ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನ ಕಾರ್ಯಕ್ರಮದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ ಜನರಲ್ ಮ್ಯಾನೇಜರ್ ವಿನೋದ್ ನಾಯರ್ ಅವರು ಸಂಚಾರಿ ವಿಜಯ್ ಅವರಿಗೆ ಪುಷ್ಪಗುಚ್ಛ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿದರು. ಪ್ರಸಾದನ ಕಲಾವಿದರಾದ ರಾಜು, ನಾಗರಾಜು ಹಾಗೂ ಅವರ ಗುರುಗಳಾದ ರಮೇಶ್ ಬಾಬು ಅವರನ್ನು ಕನ್ನಡಪ್ರಭ.ಕಾಂ ವತಿಯಿಂದ ಗೌರವಿಸಲಾಯಿತು.
ಬಳಿಕ ತಮ್ಮ ಮನದಾಳದ ಮಾತನ್ನು ಹಂಚಿಕೊಂಡ ಸಂಚಾರಿ ವಿಜಯ್, ನಾನು ಅವನಲ್ಲ ಅವಳು ಚಿತ್ರಕ್ಕೆ ಶ್ರೇಷ್ಠ ನಟ ಪ್ರಶಸ್ತಿ ಬಂದಿರುವುದಕ್ಕೆ ತುಂಬಾ ಸಂತೋಷವಾಗಿತ್ತು. ಅದರ ಜತೆಗೆ ನಮ್ಮ ಶ್ರಮವನ್ನು ಗುರುತಿಸಿ ಗೌರವಿಸಿದ ಕನ್ನಡಪ್ರಭ.ಕಾಂ ಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ಚಿತ್ರದಲ್ಲಿ ನಾನು ಮಂಗಳಮುಖಿ ಪಾತ್ರವನ್ನು ನಿರ್ವಹಿಸಿದ್ದೇನೆ. ಇದು ಒಂದು ರೀತಿಯ ಸವಾಲಿನ ಕೆಲಸವಾಗಿತ್ತು. ಚಿತ್ರದ ಚಿತ್ರೀಕರಣಕ್ಕೂ ಮುನ್ನ ಕೆಲ ದಿನ ಮಂಗಳಮುಖಿಯರ ಜತೆ ಬೆರೆತು ಅವರ ಹಾವಭಾವ, ಅವರ ಕಲಾಚಾರ, ಸಂಪ್ರದಾಯಗಳನ್ನು ಅರ್ಥೈಸಿಕೊಂಡ ನಂತರ ಪಾತ್ರ ಪೋಷಣೆ ಸಾಧ್ಯವಾಯಿತು. ಈ ಪಾತ್ರ ಮಾಡುವಾಗ ತುಂಬ ಜನ ನನ್ನನ್ನು ಮಂಗಳಮುಖಿಯಂತೆ ನೋಡುತ್ತಿದ್ದದ್ದು ಉಂಟು. ಯಾವುದೇ ಒಂದು ಪಾತ್ರವನ್ನು ನಿರ್ವಹಿಸಬೇಕಾದರು ಆ ಪಾತ್ರಕ್ಕೆ ಜೀವ ತುಂಬುವದು, ತಲ್ಲಿನನಾಗುವುದು ಬಹು ಮುಖ್ಯ ಎಂದರು. ಪಾತ್ರ ಪೋಷಣೆ ಬಳಿಕ ತಮ್ಮಲ್ಲಿ ಏನಾದರೂ ವ್ಯತ್ಯಾಸಗಳಾಗಿವೆ ಎಂದು ಕೇಳಿದಕ್ಕೆ? ಪಾತ್ರ ಪೋಷಣೆ ಬಳಿಕ ನನ್ನಲ್ಲಿ ಯಾವುದು ಬದಲಾವಣೆಯಾಗಿಲ್ಲ. ಪಾತ್ರ ಪಾತ್ರವಷ್ಟೆ, ನಾನು ನಾನೇ ಎಂದು ತಮಾಷೆ ಮಾಡಿದರು.
ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದು ನನ್ನಲ್ಲಿ ಹೆಚ್ಚಿನ ಜವಾಬ್ದಾರಿಯ ತಂದಿದೆ. ಮುಂದಿನ ಚಿತ್ರಗಳ ಆಯ್ಕೆಗಳಿಗೆ ಇನ್ನಷ್ಟು ಪಾಮುಖ್ಯತೆ ನೀಡುತ್ತೇನೆ. ಸದ್ಯ ನಾನು ಅವನಲ್ಲ ಅವಳು ಚಿತ್ರ ಕಲಾತ್ಮಕ ಚಿತ್ರವಲ್ಲ ಇದರಲ್ಲೂ ಒಂದು ಕಮರ್ಶಿಯಲ್ ಚಿತ್ರಗಳಲ್ಲಿ ಇರುವಂತ ಎಲ್ಲಾ ಅಂಶಗಳು ಇವೆ. ನಿರ್ದೇಶಕ ಲಿಂಗದೇವರು ಅವರು ಸಾಕಷ್ಟು ಶ್ರಮ ವಹಿಸಿ ಚಿತ್ರ ನಿರ್ದೇಶಿಸಿದ್ದಾರೆ ಎಂದರು.
ನನಗೆ ರಾಷ್ಟ್ರಪ್ರಶಸ್ತಿ ಬಂದರು ಗಾಂಧಿನಗರದಲ್ಲಿ ನಮ್ಮನ್ನು ಗುರುತಿಸುವುದು ಕಷ್ಟ. ಹೀಗಿದ್ದರು, ಖ್ಯಾತ ನಿರ್ದೇಶಕರಾದ ಸುನೀಲ್ ಕುಮಾರ್ ದೇಸಾಯಿ, ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರು ಕರೆ ಮಾಡಿದ್ದು ತುಂಬ ಸಂತೋಷ ತಂದಿದೆ. ಮುಂದೆ ಚಿತ್ರಕಥೆ ನೋಡಿ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದರು.
ನಂತರ ಮಾತನಾಡಿದ ಪ್ರಸಾದನ ಕಲಾವಿದರಾದ ನಾಗರಾಜು ಅವರು, ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದಕ್ಕೆ ರಾಷ್ಟ್ರಪ್ರಶಸ್ತಿ ಬಂದಿರುವುದು ತುಂಬಾ ಸಂತೋಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡಪ್ರಭ.ಕಾಂ ನ ಸಹಾಯಕ ಸಂಪಾದಕ ಎಸ್.ಎನ್ ಪ್ರಸಾದ್, ಸಖಿ ಪಾಕ್ಷಿಕ ಸಂಪಾದಕ ಡಾ. ವೆಂಕಟೇಶ್ ರಾವ್ ಹಾಜರಿದ್ದರು.
ಕಾರ್ಯಕ್ರಮದ ಫೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ
Advertisement