ಬೆಂಗಳೂರು: ಕನ್ನಡ ಚಿತ್ರೋದ್ಯಮದಲ್ಲಿ ಕ್ಲೀಶೆಯೆನಿಸಿದ ಪಾತ್ರಗಳನ್ನು ಮೀರಿ ಹೊಸದಕ್ಕೆ ತೆರೆದುಕೊಳ್ಳುವ ನಟರು ಕೆಲವೇ ಮಂದಿ. ಅಂತಹವರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಟ ಕಿಶೋರ್. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ವಾಸ್ಕೊಡಗಾಮದಲ್ಲಿ ಪ್ರಾಧ್ಯಾಪಕನಾಗಿ ಕಾಣಿಸಿಕೊಂಡಿದ್ದ ಕಿಶೋರ್, ಕಮಲಹಾಸನ್ ನಟನೆಯ ತಮಿಳು ಚಿತ್ರ 'ತೂಂಗವಾನಮ್' ನಲ್ಲೂ ಕಾಣಿಸಿಕೊಂಡಿದ್ದರು. ಇವರ ಮುಂದಿನ ಬಿಡುಗಡೆ ಆಕ್ಟೋಪಸ್.
"ನಟನಾಗಿ ಬಿಡುಗಡೆ ದಿನಾಂಕ ನನ್ನ ನಿರ್ಧಾರವಲ್ಲ. ಆಕ್ಟೋಪಸ್ ತಂಡ ಇದು ಬಿಡುಗಡೆಗೆ ಸರಿಯಾದ ಸಮಯ ಎಂದು ತಿಳಿದಿದ್ದರೆ ಅದಕ್ಕೆ ನನ್ನ ಒಮ್ಮತವೂ ಇರುತ್ತದೆ. ತೆರೆಯ ಮೇಲೆ ನನ್ನನು ಹಲವಾರು ಬಾರಿ ಕಂಡ ಪ್ರೇಕ್ಷಕನಿಗೆ ಅತಿಯೆನ್ನಿಸಬಾರದು ಎಂದಷ್ಟೇ ನನ್ನ ಕಾಳಜಿ" ಎನ್ನುತ್ತಾರೆ ನಟ ಕಿಶೋರ್.
ವಿಭಿನ್ನ ಪಾತ್ರಗಳತ್ತ ಒಲವು ತೋರುವ ಕಿಶೋರ್ ವಾಸ್ಕೋಡಗಾಮದಲ್ಲಿ ಪ್ರಾಧ್ಯಾಪಕ, ತೂಂಗವಾನಮ್ ನಲ್ಲಿ ಖಳನಾಯಕನಾಗಿದ್ದರೆ ಈಗ ಆಕ್ಟೋಪಸ್ ನಲ್ಲಿ ವೈದ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ. "ನಾನು ಪಾತ್ರಗಳ ಜೊತೆ ಜೂಜಾಡುತ್ತಿದ್ದೇನೆ ಎಂಬುದು ಸರಿಯೋ ಅಲ್ಲವೋ ಗೊತ್ತಿಲ್ಲ, ಆದರೆ ಒಪ್ಪಿಗೆಯಾದನ್ನು ಮಾಡಲು ಎಲ್ಲ ನಟನೂ ಪ್ರಯತ್ನಿಸಬೇಕು. ಸುಮ್ಮನೆ ಕುಣಿದು ಹಣ ಮಾಡುವೆ ಇರಾದೆ ನನ್ನದಲ್ಲ. ಸಿನೆಮಾ ಕಲೆ. ನಾನು ನನ್ನ ಸಿನೆಮಾಗಳ ಜೊತೆಗೆ ಎಷ್ಟು ಪ್ರಾಮಾಣಿಕವಾಗಿದ್ದೇನೆಯೋ ತಿಳಿದಿಲ್ಲ. ನನ್ನ ನಟನೆ ತುಸು ಬದಲಾವಣೆ ತರುವುದಾದರೆ ಒಳ್ಳೆಯದೇ" ಎನ್ನುತ್ತಾರೆ ಕಿಶೋರ್.
ವೈದ್ಯಕೀಯ ರಂಗದಲ್ಲಿರುವ ಮಾಫಿಯಾ ಕುರಿತ ಥ್ರಿಲ್ಲರ್ ಆಕ್ಟೋಪಸ್. ಈ ಸಿನೆಮಾ ಅಲ್ಲದೆ ರಜನಿಕಾಂತ್ ಅವರ ಮುಂದಿನ ತಮಿಳು ಸಿನೆಮಾ 'ಕಬಾಲಿ'ಯಲ್ಲೂ ಪಾತ್ರ ಪಡೆದಿದ್ದಾರೆ. ಅಲ್ಲದೆ ಜಿಯಾವುಲ್ಲ ಖಾನ್ ನಿರ್ದೇಶನದ ಸಿನೆಮಾದಲ್ಲಿ ಕೂಡ ನಟಿಸಲಿದ್ದಾರಂತೆ "ಇದು ಪ್ರೇಮ ಮತ್ತು ಸೆಕ್ಸ್ ಬಗೆಗಿನ ಚಿತ್ರ, ಇದರ ಅಡಿ ಶೀರ್ಷಿಕೆ ಅಲ್ಪ ವಿರಾಮ ಪೂರ್ಣ ವಿರಾಮವಲ್ಲ ಎಂದು. ಇದು ತ್ರಿಕೋನ ಪ್ರೇಮಕಥೆ. ಇದರಲ್ಲಿ ಯಾವುದೇ ವಲ್ಗಾರಿಟಿ ಇರುವುದಿಲ್ಲ" ಎಂದು ವಿವರಿಸುತ್ತಾರೆ ಕಿಶೋರ್. ಕೃಷಿ ಮತ್ತು ಮೇಘನಾ ಕೂಡ ಈ ಸಿನೆಮಾದಲ್ಲಿ ಪಾತ್ರ ಪಡೆದಿದ್ದು ಬುಧವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
Advertisement