ಶಿಕ್ಷಣ ಮಾಧ್ಯಮವಾಗಿ ಸಿನಿಮಾ ಬಳಸಿ: ನಾಗಾಭರಣ ಅಭಿಮತ

`ಚಲನಚಿತ್ರ ಶಿಕ್ಷಣ ಮಾಧ್ಯಮವಾಗಿಲ್ಲ. ಈ ಮಾಧ್ಯಮವನ್ನು ಶಿಕ್ಷಣ ಮಾರ್ಗವಾಗಿ ಬಳಸಬೇಕು' ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು...
ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷ ಟಿ.ಎಸ್.ನಾಗಾಭರಣ
ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷ ಟಿ.ಎಸ್.ನಾಗಾಭರಣ

ಬೆಂಗಳೂರು: `ಚಲನಚಿತ್ರ ಶಿಕ್ಷಣ ಮಾಧ್ಯಮವಾಗಿಲ್ಲ. ಈ ಮಾಧ್ಯಮವನ್ನು ಶಿಕ್ಷಣ ಮಾರ್ಗವಾಗಿ ಬಳಸಬೇಕು' ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಚಂದನವನ, ಅಕಾಡೆಮಿಯ ವರ್ಷದ ಹಾದಿ ಪುಸ್ತಕ ಬಿಡುಗಡೆ ಮತ್ತು ಅಕಾಡೆಮಿ ವೆಬ್‍ಸೈಟ್ ಉದ್ಘಾಟಿಸಿ ಮಾತನಾಡಿದರು. ಚಲನಚಿತ್ರ ಶಿಕ್ಷಣ ಮಾಧ್ಯಮವಾಗಿಲ್ಲ, ಬೇರೆ ಸಿನಿಮಾಗಳು ವಿಷಯಕ್ಕೆ ಹೆಚ್ಚು ಬೆಲೆಕೊಟ್ಟರೆ ನಮ್ಮ ಕನ್ನಡ ಸಿನಿಮಾಗಳು ಕೇವಲ ತಂತ್ರಗಾರಿಕೆಯೊಂದಿಗೆ ಮನರಂಜನೆ ನೀಡಲು ಒತ್ತು ನೀಡುತ್ತಿವೆ, ವಿನಃ ಶಿಕ್ಷಣ ನೀಡುತ್ತಿಲ್ಲ. ಹೀಗಾಗಿ ಬೇರೆ ಭಾಷೆಗಳ ರೀತಿಯಲ್ಲಿ ಕನ್ನಡ ಸಿನಿಮಾಗಳು ವಿಷಯಾಧಾರಿತವಾಗಿರಬೇಕು ಎಂದು ಕಿವಿ ಮಾತು ಹೇಳಿದರು.

ಸಿನಿಮಾ ವಿದ್ಯಾರ್ಥಿಗಳಿಂದ ಚಳವಳಿಯಾಗಬೇಕು. ಜಿಲ್ಲೆಗಳಲ್ಲಿ ಚಲನಚಿತ್ರ ಪ್ರದರ್ಶಿಸುವ ಬೆಳ್ಳಿ ಮಂಡಲ ಹಾಗೂ ಕಾಲೇಜುಗಳಲ್ಲಿ ಪ್ರದರ್ಶಿಸುವ ಬೆಳ್ಳಿ ಸಾಕ್ಷಿ- ಯಂತಹ ಕಾರ್ಯಕ್ರಮಗಳನ್ನು ಉಳಿಸಿಕೊಳ್ಳುವುದರ ಜತೆಗೆ ಭಾಷೆಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗಬೇಕು. ಈಗ ಯುವಕರೆಲ್ಲರೂ ಸರ್ವಜ್ಞರಾಗಿದ್ದಾರೆ, ಚಲನಚಿತ್ರರಂಗದ ಹೊಸ ಪ್ರಯತ್ನಗಳನ್ನು ಯಾವುದೋ ಮೂಲೆಯಿಂದ ತಂದು ಅದನ್ನು ಇದೇ ಮೊದಲ ಬಾರಿಗೆ ಮಾಡುತ್ತಿರುವ ನನ್ನದೇ ಪ್ರಯತ್ನವೆಂದು ಹೇಳಿಕೊಳ್ಳುತ್ತಾರೆ. ಸಿನಿಮಾ ವಿದ್ಯಾರ್ಥಿಗಳ ತೊಡಕನ್ನು ನಿವಾರಿಸಲು ಸಹಾಯವಾಗಬೇಕು ಎಂದು ನುಡಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ಮಾತನಾಡಿ, ಪರಭಾಷೆ ಚಿತ್ರಗಳ ಹಾವಳಿಯಲ್ಲಿ ರಾಷ್ಟ್ರ, ರಾಜ್ಯಪ್ರಶಸ್ತಿ ಪಡೆದ ಚಿತ್ರಗಳು ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೊಂದು ವೇದಿಕೆ ಕಲ್ಪಿಸಲು 30ಚಿತ್ರಮಂದಿರಗಳ ನಿರ್ಮಾಣಕ್ಕಾಗಿ ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದರು.

ಜೇನುಗೂಡು ಕಥಾ ಬ್ಯಾಂಕ್ ಎನ್ನುವ ವಿನೂತನ ದಾಖಲೆಯನ್ನು ಬರೆಯಲು ಹೊರಟಿದ್ದೇವೆ, ಈ ಪುಸ್ತಕ ಹಳೆಯ ನೈಜ ಕಥೆಗಳನ್ನಾಧರಿಸಿರುತ್ತದೆ. ಸಾಹಿತಿ, ಪತ್ರಕರ್ತರು ಎಲ್ಲರೂ ಸೇರಿ ಚಿತ್ರರಂಗಕ್ಕೆ ಕೊಡುಗೆಯನ್ನು ಕೊಡಲು ಹೊರಟಿದ್ದಾರೆ. ಡಬ್ಬಿಂಗ್ ಮೂಲಕ ಬೇರೆ ಕಥೆಗಳನ್ನು ಪಡೆಯುವ ಬದಲು ನಮ್ಮ ನಿರ್ಮಾಪಕರಿಗೆ ನಮ್ಮದೇ ಕಥೆಯನ್ನು ನೀಡಲು ಹೊರಟಿರುವುದಾಗಿ ತಿಳಿಸಿದರು.

ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ಕನ್ನಡ ಚಲನಚಿತ್ರ ಇತಿಹಾಸದ ಬಗ್ಗೆಸಾಕಷ್ಟು ಪುಸ್ತಕಗಳಿವೆ, ಆದರೆ ಚಲನಚಿತ್ರ ಆತ್ಮವನ್ನು ಗುರುತಿಸುವ ಪ್ರಯತ್ನವಾಗಿಲ್ಲ, ಕೇವಲ ವಿಜ್ಞಾನದ ಹಾಗೆಯೇ ಎಲ್ಲಾ ವಿಷಯವನ್ನು ಎರವಲು ಪಡೆಯುತ್ತಿದ್ದೇವೆ ಆದರೆ ನಮ್ಮಲ್ಲೇನಿದೆ ಎನ್ನುವ ಹುಡುಕುವ ಪ್ರಯತ್ನವಾಗಿಲ್ಲ ಎಂದು ಹೇಳಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿಯ.

www.kcinfo.comವೆಬ್‍ಸೈಟ್ ಅನ್ನು ಬಿಡುಗಡೆ ಮಾಡಲಾಯಿತು. ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ. ರಾ. ಗೋವಿಂದು, ಚಂದನವನ-ಸಂಪಾದಕ ಮಂಡಲಿ ಸದಸ್ಯ ಚ.ಹ. ರಘುನಾಥ್, ವಿಶಾಖ ಎನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com