'ಲಕ್ಷ್ಮಣ'ನಿಗೆ ಸ್ಫೂರ್ತಿ ತೆಲುಗಿನ 'ಅಥನೊಕ್ಕಡೆ'
ಬೆಂಗಳೂರು: ನಿರ್ದೇಶಕ ಆರ್ ಚಂದ್ರು ನಿರ್ದೇಶನದ 'ಲಕ್ಷ್ಮಣ' ೨೦೦೫ರ ಸೂಪರ್ ಹಿಟ್ ತೆಲುಗು ಚಲನಚಿತ್ರ 'ಅಥನೊಕ್ಕಡೆ'ಯ ಸಂಪೂರ್ಣ ರಿಮೇಕ್ ಅಲ್ಲವಂತೆ ಆದರೆ ಅಲ್ಲಿಂದ ಸ್ಫೂರ್ತಿ ಪಡೆದು ಕನ್ನಡ ಜಾಯಮಾನಕ್ಕೆ ಒಗ್ಗಿಸಿಕೊಂಡಿರುವ ಸಿನೆಮಾ ಅಂತೆ.
ಅಲ್ಲಿ ಕಲ್ಯಾಣ್ ರಾಮ್ ಪಾತ್ರವನ್ನು ಇಲ್ಲಿ ತಮ್ಮ ಮಗ ಅನೂಪ್ ಕೈಲಿ ಮಾಡಿಸಬೇಕೆಂದು ಎಚ್ ಎಂ ರೇವಣ್ಣ ನವರೇ ಸಿನೆಮಾ ಹಕ್ಕುಗಳನ್ನು ಖರೀದಿಸಿದ್ದರು ಎನ್ನುವ ನಿರ್ದೇಶಕ "ರೇವಣ್ಣ ಹಲವಾರು ನಿರ್ದೇಶಕರನ್ನು ಕೇಳಿ ಬಂದು ಕೊನೆಗೆ ನನ್ನನ್ನು ಆಯ್ಕೆ ಮಾಡಿದರು. ಅವರಿಗೆ ಕನ್ನಡ ಸಿನೆಮಾಗಳ ಬಗ್ಗೆ ಅರಿವಿದೆ ಹಾಗು ನಮ್ಮ ಬಾಷೆ ಮತ್ತು ಸಂಸ್ಕೃತಿಯನ್ನು ಸಿನೆಮಾದಲ್ಲಿ ಅಳವಡಿಸಿಕೊಳ್ಳಬೇಕೆಂಬುದು ಅವರ ಇಂಗಿತ. ಆದುದರಿಂದ 'ಅಥನೊಕ್ಕಡೆ' ಸಿನೆಮಾದಿಂದ ಸ್ಫೂರ್ತಿ ತೆಗೆದುಕೊಂಡಿದ್ದರೂ ಕೂಡ ಇದು ಹೊಸ ಅನುಭವ" ಎಂದು ವಿವರಿಸುತ್ತಾರೆ ಚಂದ್ರು.
ಈಗಾಗಲೇ ಚಿತ್ರೀಕರಣದ ಬಹುತೇಗ ಭಾಗ ಸಂಪೂರ್ಣವಾಗಿದ್ದು, ಕ್ಲೈಮ್ಯಾಕ್ ಚಿತ್ರೀಕರಣಕ್ಕಾಗಿ ಸಾಹಸ ನಿರ್ದೇಶಕ ರವಿವರ್ಮಾ ಅವರ ದಿನಾಂಕಕ್ಕೆ ಕಾಯುತ್ತಿದ್ದಾರೆಂತೆ.
ಅನೂಪ್ ಅಲ್ಲದೆ ಸಿನೆಮಾದಲ್ಲಿ ಮೇಘನಾ ರಾಜ್ ಮತ್ತು ರವಿಚಂದ್ರನ್ ನಟಿಸಿದ್ದಾರೆ.
ವದಂತಿಗಳ ಪ್ರಕಾರ ಚಿತ್ರದ ಬಜೆಟ್ ೮ ಕೋಟಿ ಮತ್ತು ಚಂದ್ರು ಅವರಿಗೂ ಒಳ್ಳೆಯ ಮೊತ್ತ ನೀಡಲಾಗಿದೆ ಎಂದು ತಿಳಿದುಬಂದಿದೆ. "ರೇವಣ್ಣ ನನ್ನ ನಂಟ. ಆದುದರಿಂದ ಬಜೆಟ್ ಮೇಲೆ ತಲೆಕೆಡಿಸಿಕೊಳ್ಳದೆ ಅವರು ಧಾರಾಳವಾಗಿದ್ದಾರೆ" ಎನ್ನುತ್ತಾರೆ ಚಂದ್ರು.
ಚಂದ್ರು ಈ ಹಿಂದೆ 'ಬ್ರಹ್ಮ' ನಿರ್ದೇಶಿಸಿದ್ದರು, ನಂತರ 'ಚಾರ್ ಮಿನಾರ್' ಸಿನೆಮಾವನ್ನು ತೆಲುಗಿನಲ್ಲಿ ರಿಮೇಕ್ ಮಾಡಿ ನಿರ್ದೇಶಿಸಿದ್ದರು ಹಾಗು ಪ್ರೇಮ್ ಮತ್ತು ಅಮೂಲ್ಯ ನಟಿಸಿದ 'ಮಳೆ' ಸಿನೆಮಾವನ್ನು ಕೂಡ ನಿರ್ಮಾಣ ಮಾಡಿದ್ದರು.