ಚೆನ್ನೈ: ಕಾಲಿವುಡ್ ನಲ್ಲಿ ಎದ್ದಿದ್ದ ಕತ್ತಿ ಸಂಡೈ ಚಿತ್ರವಿವಾದ ಅಂತೂ ತಣ್ಣಗಾಗಿದ್ದು, ನಟಿ ತಮನ್ನಾ ಸೇರಿದಂತೆ ನಟಿಯರ ವಿರುದ್ಧ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದ ಚಿತ್ರ ನಿರ್ದೇಶಕ ಸೂರಜ್ ಅವರು ಬೇಷರತ್ ಕ್ಷಮೆಯಾಚಿಸಿದ್ದಾರೆ.
ಈ ಹಿಂದೆ ಚಿತ್ರದ ನಟಿಯರು ನಟನೆಗಿಂತ ದೇಹ ಪ್ರದರ್ಶನದಂತಹ ಗ್ಲಾಮರ್ ಗಷ್ಟೇ ಸೀಮಿತ ಎಂದು ಸೂರಜ್ ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ನಟಿ ತಮನ್ನಾ ಟ್ವಿಟರ್ ನಲ್ಲಿ ಸೂರಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಕತ್ತಿ ಸಂಡೈ ಚಿತ್ರದ ನಾಯಕ ನಟ ವಿಶಾಲ್ ಕೂಡ ಸೂರಜ್ ಹೇಳಿಕೆಯನ್ನು ಖಂಡಿಸಿದ್ದರು. ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಎಚ್ಚೆತ್ತಿರುವ ನಿರ್ದೇಶಕ ಸೂರಜ್ ಕ್ಷಮೆ ಯಾಚಿಸಿದ್ದಾರೆ. ಈ ಬಗ್ಗೆ ಸೂರಜ್ ಟ್ವೀಟ್ ಮಾಡಿದ್ದು, ಟ್ವೀಟ್ ನಲ್ಲಿ "ನನ್ನ ಹೇಳಿಕೆಯಿಂದ ಕೆಲವರಿಗೆ ನೋವಾಗಿದೆ ಎಂದು ತಿಳಿದಿದೆ. ಆದರೆ ನನ್ನ ದುರುದ್ದೇಶ ಪೂರಕವಾಗಿ ಆ ಹೇಳಿಕೆ ನೀಡಿರಲಿಲ್ಲ. ಆದರೂ ನನ್ನ ಹೇಳಿಕೆಯಿಂದ ನೋವಾಗಿದೆ. ಹೀಗಾಗಿ ನಟಿ ತಮನ್ನಾ ಹಾಗೂ ಇತರೆ ನಟಿಯರನ್ನು ನಾನು ಕ್ಷಮೆ ಕೇಳುತ್ತೇನೆ ಮತ್ತು ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ನಿರ್ದೇಶಕ ಸೂರಜ್ ಹೇಳಿದ್ದಾರೆ.
ನಟ ವಿಶಾಲ್ ಹಾಗೂ ತಮನ್ನಾ ಅಭಿನಯದ ಬಹು ನಿರೀಕ್ಷಿತ ಕತ್ತಿ ಸಂಡೈ ಚಿತ್ರ ಕಳೆದ ವಾರವಷ್ಟೇ ತೆರೆಕಂಡಿತ್ತು. ಆದರೆ ನಿರ್ದೇಶಕರ ವಿವಾದಾತ್ಮಕ ಹೇಳಿಕೆಯಿಂದಾಗಿ ಚಿತ್ರತಂಡ ನಿರ್ದೇಶಕರ ವಿರುದ್ಧ ಅಸಮಾಧಾನಗೊಂಡಿತ್ತು.
Advertisement