ಬೆಂಗಳೂರು: ಈಗಾಗಲೇ ಕೆಲವು ಪರಭಾಷಾ ನಟರು ಪುನೀತ್ ರಾಜಕುಮಾರ್ ನಟಿಸುತ್ತಿರುವ 'ಚಕ್ರವ್ಯೂಹ' ಸಿನೆಮಾದಲ್ಲಿ ಹಿನ್ನಲೆ ಗಾಯಕರಾಗಿರುವ ಸುದ್ದಿಯ ಜೊತೆಗೆ ಕನ್ನಡ ಸಿನೆಮಾ ಅಭಿಮಾನಿಗಳಿಗೆ ಖುಷಿ ತರುವಂತಹ ಮತ್ತೊಂದು ಸುದ್ದಿಯಲ್ಲಿ ಸುದೀಪ್ ಈ ಸಿನೆಮಾದ ಆರಂಭಿಕ ಭಾಗದಲ್ಲಿ ನಿರೂಪಕನಾಗಿ ಕಂಠದಾನ ಮಾಡಲಿದ್ದಾರೆ.
"'ಚಕ್ರವ್ಯೂಹ' ಮನರಂಜನಾ ಸಿನೆಮಾ. ಅದಕ್ಕೆ ಸುದೀಪ್ ಕಂಠದಾನ ಮಾಡುವುದು ಅತಿ ಸೂಕ್ತ ಎಂದೆನಿಸಿತ್ತು. ಅಲ್ಲದೆ ಈ ಸಿನೆಮಾದಲ್ಲಿ ಸಾಮಾಜಿಕ ಸಂದೇಶವೊಂದಿದೆ. ಅದಕ್ಕಾಗಿ ಚಿಂತಿಸಿದಾಗ, ನಮಗೆ ಹೊಳೆದದ್ದು ಸುದೀಪ್. ನಾವು ಅವರನ್ನು ಕೇಳಿಕೊಂಡಾಗ ಅವರು ಒಪ್ಪಿಕೊಂಡರು" ಎನ್ನುತಾರೆ ನಿರ್ಮಾಣ ತಂಡದ ಸದಸ್ಯರೊಬ್ಬರು.
ಇದನ್ನು ಪುನೀತ್ ಕೂಡ ಒಪ್ಪಿದ್ದು, ಸುದೀಪ್ ಇದನ್ನು ಗೆಳೆತನದ ಸಲುವಾಗಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಜೂನಿಯರ್ ಎನ್ ಟಿ ಆರ್ ಮತ್ತು ಕಾಜಲ್ ಅಗರವಾಲ್ ಈ ಸಿನೆಮಾಗಾಗಿ ಹಾಡುಗಳನ್ನು ಹಾಡಿದ್ದಾರೆ.
ಚಿತ್ರೀಕರಣದ ನಂತರದ ಕೆಲಸಗಳು ಮುಂದುವರೆದಿದ್ದು, ಮಾರ್ಚ್ ೧೨ ಕ್ಕೆ ವೈಭವಯುತ ಆಡಿಯೋ ಅನಾವರಣ ಹಮ್ಮಿಕೊಳ್ಳಲು ಚಿತ್ರತಂಡ ಸಜ್ಜಾಗಿದೆ.
ಸರವಣನ್ ನಿರ್ದೇಶನದ ಈ ಸಿನೆಮಾದಲ್ಲಿ ರಚಿತಾ ರಾಮ್ ನಾಯಕ ನಟಿ. ತಮಿಳು ನಟ ಅರುಣ್ ವಿಜಯ್ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದು, ಎಸ್ ಎಸ್ ತಮನ್ ಸಂಗೀತ ಮತ್ತು ಷಣ್ಮುಗ ಸುಂದರಮ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
Advertisement