
ಹೈದರಾಬಾದ್: ಮೂರು ವರ್ಷಗಳ ಸತತ ಯೋಜನೆ, ೧೫೦೦೦ ಸ್ಟೋರಿಬೋರ್ಡ್ ಚಿತ್ರಗಳು, ೮೦೦ ಗ್ರಾಫಿಕ್ಸ್ ತಂತ್ರಜ್ಞರು, ೩೮೦ ದಿನಗಳ ಚಿತ್ರೀಕರಣ, ೨೫೦ ಕೋಟಿ ವೆಚ್ಚ. ತೆಲುಗು ಚಿತ್ರರಂಗಕ್ಕೆ ರಾಷ್ಟ್ರೀಯ ಪ್ರಸಸ್ತಿ ದಕ್ಕಿಸಿಕೊಡಲು ಇಷ್ಟೆಲ್ಲಾ ಬೇಕಾಯಿತೇ? ಪ್ರಭಾಸ್, ರಾಣಾ ದಗ್ಗುಬಟಿ, ತಮಣ್ಣ ನಟಿಸಿದ್ದ, ರಾಜಮೌಳಿ ನಿರ್ದೇಶನದ 'ಬಾಹುಬಲಿ' ಕೊನೆಗೂ ತೆಲುಗು ಚಿತ್ರರಂಗಕ್ಕೆ ಹಿಡಿದಿದ್ದ ರಾಷ್ಟ್ರ ಪ್ರಶಸ್ತಿ ಗ್ರಹಣವನ್ನು ಬಿಡಿಸಿದೆ.
ಎಷ್ಟೋ ಬಾಲಿವುಡ್ ಸಿನೆಮಾಗಳನ್ನು ಹಿಂದಿಕ್ಕಿ ೬೦೦ ಕೋಟಿಗೂ ಹೆಚ್ಚು ಗಳಿಸಿದ, ಕಾಲ್ಪನಿಕ ಲೋಕವನ್ನು ಕಟ್ಟಿಕೊಟ್ಟ ಈ ಚಿತ್ರ ನಿಜಕ್ಕೂ ರಾಷ್ಟ್ರಪ್ರಶಸ್ತಿ ಗಳಿಸಲು ಅತ್ಯುತ್ತಮ ಕಂಟೆಂಟ್ ಹೊಂದಿತ್ತೇ?
"ಬಾಹುಬಲಿ ಕಾಲ್ಪನಿಕ ಚಿತ್ರ, ನಿರ್ಮಾಣದಲ್ಲಿ ಮತ್ತು ಚಿತ್ರೀಕರಣದಲ್ಲಿ ಅದ್ಭುತ" ಎಂದಿದ್ದಾರೆ ತೀರ್ಪುಗಾರರಲ್ಲಿ ಒಬ್ಬರಾದ ರಮೇಶ್ ಸಿಪ್ಪಿ.
ಸಿನೆಮಾದಲ್ಲಿ ಖಳನಾಯಕನ ಪಾತ್ರ ಮಾಡಿದ್ದ ರಾಣಾ ದಗ್ಗುಬಟಿ "ಜೈ ಮಹಿಷ್ಮತಿ! ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.
ಈ ಪ್ರಶಸ್ತಿ ದಕ್ಕಿರುವುದಕ್ಕೆ ತೆಲುಗು ಚಿತ್ರರಂಗದಲ್ಲಿ ಹೊಸ ಚಿಲುಮೆ ಮೂಡಿದೆಯಂತೆ. "ಕೊನೆಗೂ ತೆಲುಗು ಸಿನೆಮಾಗೆ ನ್ಯಾಯ ಸಲ್ಲಿದೆ" ಎನ್ನುತ್ತಾರೆ ಬಾಹುಬಲಿ ಸಿನೆಮ್ಯಾಟೋಗ್ರಾಫರ್ ಕೆ ಕೆ ಸೆಂಥಿಲ್.
೧೯೫೩ರಿಂದಲೂ ಈ ಪ್ರಶಸ್ತಿಯನ್ನು ನೀಡಲಾಗುತ್ತಾ ಬಂದಿದ್ದರೂ, ಖ್ಯಾತ ತೆಲುಗು ಸಿನೆಮಾಗಳಾದ 'ಶಂಕಾರಾಭರಣಂ', 'ಸಾಗರ ಸಂಗಮಂ', 'ಮಾಯಾ ಬಜಾರ್' ಮತ್ತು 'ಸ್ವಾತಿ ಮುತ್ಯಂ' ಅಂತಹ ಸಿನೆಮಾಗಳಿಗೂ ಪ್ರಶಸ್ತಿ ದಕ್ಕಿಲ್ಲ. "ಶಂಕರಾಭರಣಂ ಸಿನೆಮಾಗೆ ವಿಶೇಷ ತೀರ್ಪುಗಾರರ ಅತ್ಯುತ್ತಮ ಸಿನೆಮಾ ಪ್ರಶಸ್ತಿ ದೊರೆತಿದ್ದರೂ, ಬಾಹುಬಲಿಯೇ ಅತ್ಯುತ್ತಮ ಸಿನೆಮಾ ರಾಷ್ಟ್ರಪ್ರಶಸ್ತಿ ಗೆದ್ದಿರುವುದು. ಇದು ತೆಲುಗು ಚಿತ್ರರಂಗಕ್ಕೆ ರಾಷ್ಟ್ರ ಮನ್ನಣೆ ನೀಡಿದೆ. ನನಗೆ ಸಂತಸವಾಗಿದೆ" ಎನ್ನುತ್ತಾರೆ ತೆಲುಗು ಸಿನೆಮಾ ವಿಮರ್ಶಕ ಜಯದೇವ ರೆಂತಲ.
ಕೆಲವು ವಿಮರ್ಶಕರ ಪ್ರಕಾರ 'ಬಾಹುಬಲಿ'ಯ ಜಾಗತಿಕ ಯಶಸ್ಸಿಗೆ ಕಾರಣ ಅತ್ಯುತ್ತಮ ಪ್ರಚಾರ. ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಮ್ ಭಾಷೆಗಳಲ್ಲಿ ನಿರ್ಮಿಸಿ ಪ್ರಚಾರ ಮಾಡಿದ್ದು ಕೂಡ ಇದಕ್ಕೆ ಕಾರಣ ಎನ್ನಲಾಗಿದೆ.
"ತೆಲುಗು ಸಿನೆಮಾರಂಗದಲ್ಲಿ ನಿರ್ಮಾಣವಾಗಿರುವ ಅತ್ಯುತ್ತಮ ಸಿನೆಮಾ ಬಾಹುಬಲಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸಿನೆಮಾ ತಂತ್ರಜ್ಞಾನದ ಮಾಪನದಲ್ಲಿ ಇದು ಉನ್ನತ ಚಿತ್ರ" ಎನ್ನುತ್ತಾರೆ ಜಯದೇವ.
ಹಲವಾರು ವಿಮರ್ಶಕರು 'ಬಾಹುಬಲಿ'ಯ ದೋಷಗಳನ್ನು ಎತ್ತಿಹಿಡಿದಿದ್ದು "ಇದು ಅತ್ಯುತ್ತಮ ಜನಪ್ರಿಯ ಚಿತ್ರ ಪ್ರಶಸ್ತಿ ಗೆಲ್ಲಬೇಕಿತ್ತು. ಖಂಡಿತಾ ಇದು ಅತ್ಯುತ್ತಮ ಸಿನೆಮಾ ಪ್ರಶಸ್ತಿಗೆ ಅರ್ಹವಲ್ಲ. ಇದು ಅಪೂರ್ಣ ಸಿನೆಮಾ, ಕಥೆ ಪೂರ್ಣಗೊಂಡಿಲ್ಲ, ಕ್ಲೈಮ್ಯಾಕ್ಸ್ ಅರ್ಧಕ್ಕೆ ನಿಂತಿದೆ" ಎಂದಿದ್ದಾರೆ ಮಹೇಶ್ ಕಥಿ.
Advertisement