ಬೆಂಗಳೂರು: ಸಹೋದರರಾದ ದರ್ಶನ್ ತೂಗುದೀಪ್ ಮತ್ತು ದಿನಕರ್ ತೂಗುದೀಪ್ ಮೊದಲಬಾರಿಗೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. 'ಚಕ್ರವರ್ತಿ' ಸಿನೆಮಾದಲ್ಲಿ ದರ್ಶನ್ ನಾಯಕನಟನಾಗಿ ಕಾಣಿಸಿಕೊಂಡರೆ ದಿನಕರ್ ಖಳನಾಯಕನಾಗಲಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ದರ್ಶನ್ "ತಮ್ಮನ ಜೊತೆ ಕೆಲಸ ಮಾಡುವುದಕ್ಕೆ ಹೆಮ್ಮೆ ಎಂದಿದ್ದಾರೆ".
ನಿರ್ದೇಶಕ-ನಿರ್ಮಾಪಕನಾಗಿ ತೊಡಗಿಸಿಕೊಂಡಿರುವ ದಿನಕರ್ ಈ ಪಾತ್ರಕ್ಕಾಗಿ ಸಜಾಗುತ್ತಿದ್ದಾರಂತೆ. 'ಸಾರಥಿ' ಸಿನೆಮಾದ ನಿರ್ಮಾಪಕರಾದ ಕೆ ವಿ ಸತ್ಯಪ್ರಕಾಶ್ ಇದನ್ನು ನಿರ್ಮಿಸುತ್ತಿದ್ದು ಆದಿತ್ಯ ಮತ್ತು ಸೃಜನ್ ಲೋಕೇಶ್ ಕೂಡ ತಾರಾಗಣದ ಭಾಗವಾಗಿದ್ದಾರೆ.
ನಿರ್ದೇಶಕ್ ಚಿಂತನ್ ಹೇಳುವಂತೆ "ದಿನಕರ್ ಜೊತೆಗೆ ಮತ್ತಿಬ್ಬರು ವಿಲನ್ ಗಳು ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರನ್ನು ಇನ್ನೂ ಅಂತಿಮಗೊಳಿಸಬೇಕಿದೆ. ಆದಿತ್ಯ ಮತ್ತು ಸೃಜನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರೀಕರಣ ಪ್ರಾರಂಭವಾದ ಮೇಲೆ ಹೆಚ್ಚಿನ ವಿವರಗಳು ತಿಳಿಯಲಿವೆ. ಅಂಜಲಿ ನಾಯಕನಟಿಯಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ. ಉಳಿದ ನಟರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದೇವೆ" ಎನ್ನುತ್ತಾರೆ.
ಈ ಹಿಂದೆ ದರ್ಶನ್ ಮತ್ತು ಆದಿತ್ಯ 'ಸ್ನೇಹಾನ ಪ್ರೀತೀನಾ' ಸಿನೆಮಾದಲ್ಲಿ ಒಟ್ಟಿಗೆ ನಟಿಸಿದ್ದರೆ, ಸೃಜನ್ ಜೊತೆಗೆ ದರ್ಶನ್ 'ನವಗ್ರಹ' ಮಾತು 'ಜಗ್ಗು ದಾದ' ಸಿನೆಮಾಗಳಲಿ ನಟಿಸಿದ್ದಾರೆ. ಆದಿತ್ಯ ಮತ್ತು ಸೃಜನ್ ಎದೆಗಾರಿಕೆಯಲ್ಲಿ ಒಟ್ಟಿಗೆ ನಟಿಸಿದ್ದರು.
ಮೇ ೨೪ ರಿಂದ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.
Advertisement