
ಬೆಂಗಳೂರು: ತಮ್ಮ ಇತ್ತೀಚಿನ ಸಿನೆಮಾ 'ಗೇಮ್' ನಿರೀಕ್ಷಿತ ಯಶಸ್ಸು ತಂದುಕೊಡದಿದ್ದರೂ ಅದನ್ನು 'ಕೆಟ್ಟ ಕನಸು' ಎಂದು ತಿಳಿದಿರುವ ನಿರ್ದೇಶಕ ಎ ಎಂ ಆರ್ ರಮೇಶ್ ಮುಂದಿನ ಚಿತ್ರ 'ಆಸ್ಫೋಟ'ಕ್ಕೆ ಅಣಿಯಾಗಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ-ತನಿಖೆಯ ಕಥಾಹಂದರ ಹೊಂದಿದೆ ಈ ಸಿನೆಮಾ.
'ಸೈನೈಡ್' ಮತ್ತು 'ಅಟ್ಟಹಾಸ' ಸಿನೆಮಾದ ನಿರ್ದೇಶಕ ೨೫ ವರ್ಷದ ಹಿಂದೆ ನಡೆದ ಈ ಹತ್ಯೆಯ ಬಗ್ಗೆ ಬೆಳಕು ಚೆಲ್ಲಲು ಮುಂದಾಗಿದ್ದಾರೆ. "ರಾಜೀವ್ ಗಾಂಧಿ ಜನ್ಮ ದಿನವಾದ ಆಗಸ್ಟ್ ೨೦ ರಿಂದ ಸಿನೆಮಾದ ಕೆಲಸಗಳನ್ನು ಪ್ರಾರಂಭಿಸಲಿದ್ದೇನೆ. ಅವರು ಹತ್ಯೆಯಾದ ಮೇ ೨೧ ರಂದು (ಮುಂದಿನ ವರ್ಷ) ಸಿನೆಮಾ ಬಿಡುಗಡೆ ಮಾಡುವ ಗುರಿ ಹೊಂದಿದ್ದೇನೆ" ಎನ್ನುತ್ತಾರೆ ರಮೇಶ್. ಈ ಹತ್ಯೆಯ ಹಿಂದಿನ ಸತ್ಯವನ್ನು ಬಿಚ್ಚಿಡುವುದು ತಮ್ಮ ಕಾಳಜಿ ಎಂದಿರುವ ನಿರ್ದೇಶಕ "ಅವರ ಸಾವಿನ ಬಗ್ಗೆ ಬಹಳಷ್ಟು ವಿಷಯಗಳನ್ನು ಕಲೆ ಹಾಕಿದ್ದೀನಿ. ಇದು ಹೇಗೆ ನಡೆಯಿತು ಎಂದು ನಿಖರವಾಗಿ ಹೇಳಲಿದ್ದೇನೆ" ಎನ್ನುತ್ತಾರೆ.
ರಾಜೀವ್ ಹತ್ಯೆಗೆಗಾಗಿ ನಡೆದ ೧೧೦ ದಿನಗಳ ಸಂಚನ್ನು 'ಆಸ್ಫೋಟ'ದ ಮೂಲಕ ರಮೇಶ್ ಹಿಡಿದಿಡಲಿದ್ದಾರಂತೆ. ೧೯೯೧ರ ಮೇ ೧ ರಂದು ಹಂತಕರು ಭಾರತಕ್ಕೆ ಬಂದಿಳಿದಿದ್ದು ಮತ್ತು ಕಾರ್ತಿಕೇಯನ್ ಈ ಪ್ರಕರಣವನ್ನು ತನಿಖೆ ಮಾಡಿ ಬೇಧಿಸಿದ್ದು ಎಲ್ಲವನ್ನೂ ಒಳಗೊಳ್ಳಲಿದೆಯಂತೆ. "ಈ ತನಿಖೆಯ ಭಾಗವಾಗಿದ್ದ ಸುಮಾರು ಜನರೊಂದಿಗೆ ನಾನು ಮಾತನಾಡಿದ್ದೇನೆ. ಕೆಲವು ಎಲ್ ಟಿ ಟಿ ಇ ಜನರ ಸಂದರ್ಶನಗಳನ್ನು ನಾನು ನಡೆಸಿದ್ದೇನೆ. ಎರಡು ವರ್ಷದ ಹಿಂದೆ ಶ್ರೀಲಂಕಾಕ್ಕೆ ತೆರಳಿ ಅಲ್ಲಿನ ಯುದ್ಧದ ದೃಶ್ಯಗಳನ್ನು ಕೂಡ ನಾನು ಹೊಂದಿದ್ದೇನೆ. ಇವುಗಳನ್ನು ಸಿನೆಮಾದಲ್ಲಿ ಬಳಸುತ್ತೇನೆ" ಎನ್ನುತ್ತಾರೆ ರಮೇಶ್.
ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸ್ಕ್ರಿಪ್ಟ್ ಸಿದ್ಧಪಡಿಸಿರುವ ರಮೇಶ್, ಕಾರ್ತಿಕೇಯನ್ ಪಾತ್ರಕ್ಕೆ ನಟನೆ ಆಯ್ಕೆಯಲ್ಲಿದ್ದಾರೆ.
"ತೆಲುಗು, ಹಿಂದಿ ಮತ್ತು ತಮಿಳಿಗೆ ಕಮಲ ಹಾಸನ್ ಮತ್ತು ವಿಕ್ರಮ್ ಮನಸ್ಸಿನಲ್ಲಿದ್ದಾರೆ, ಕನ್ನಡಲ್ಲಿ ದರ್ಶನ್ ಅಥವಾ ಸುದೀಪ್ ಮಾಡಬೇಕೆಂದು ಆಸೆ. ಆದರೆ ಇನ್ನು ಯಾರನ್ನೂ ಕೇಳಿಕೊಂಡಿಲ್ಲ" ಎನ್ನುವ ಅವರು ಶಿವರಸನ್ ಪಾತ್ರಕ್ಕೆ ರವಿ ಕಾಳೆ ಅವರನ್ನು ಆಯ್ಕೆ ಮಾಡಿದ್ದಾರೆ.
"ರತನ್ ವೇಲು ಸಿನೆಮ್ಯಾಟೋಗ್ರಾಫರ್, ಆಂಟನಿ ಸಂಕಲನ ಮತ್ತು ಸಂದೀಪ್ ಚೌಟ ಸಂಗೀತ ನೀಡಲಿದ್ದಾರೆ. ರಾಜೀವ್ ಗಾಂಧಿ ಪಾತ್ರಕ್ಕೂ ನಟನ ಹುಡುಕಾಟದಲ್ಲಿದ್ದೇನೆ" ಎಂದು ತಿಳಿಸುತ್ತಾರೆ ರಮೇಶ್.
Advertisement