ಮರು ಮದುವೆ ಆಗಿಲ್ಲ: ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ
ಬೆಂಗಳೂರು: ಮರುಮದುವೆಯಾಗಿಲ್ಲ, ಮುಂದೆ ಆಗುವುದೂ ಇಲ್ಲ. ನಾನು ಮತ್ತು ನನ್ನ ಕುಟುಂಬ ಸಂತೋಷವಾಗಿದ್ದೇವೆಂದು ನಟಿ ರಾಧಿಕಾ ಕುಮಾರಸ್ವಾಮಿ ಅವರು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರು ಮೂಲದ ಉದ್ಯಮಿ ವಿವೇಕ್ ರೈ ಎಂಬುವವರ ಜೊತೆ ನಟಿ ರಾಧಿಕಾ ಅವರು ಮರುಮದುವೆಯಾಗಿದ್ದಾರೆಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಫೋಟೋಗಳು ಓಡಾಡುತ್ತಿದ್ದವು.
ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ರಾಧಿಕಾ ಅವರು, ಮರು ಮದುವೆ ಆಗಿರುವ ಸುದ್ದಿಯೊಂದು ವದಂತಿಯಷ್ಟೇ. ನಾನು ಮತ್ತು ನನ್ನ ಕುಟುಂಬ ಸಂತೋಷವಾಗಿದ್ದೇವೆ. ಮರು ಮದುವೆಯಾಗಿಲ್ಲ. ಮುಂದೆ ಆಗುವುದೂ ಇಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಫೋಟೋಗಳು ಕಳೆದ 1 ವರ್ಷದ ಹಿಂದೆ ಕೆಮ್ಮಣ್ಣುಗುಂಡಿಗೆ ಹೋಗಿದ್ದಾಗ ತೆಗೆದಿದ್ದು. ಇದೀಗ ಈ ಫೋಟೋ ಯಾವ ಕಾರಣಕ್ಕೆ ಹರಿದಾಡುತ್ತಿದೆ ಎಂಬುವುದು ಅರ್ಥವಾಗುತ್ತಿಲ್ಲ. ನನಗೆ ನನ್ನದೇ ಆದ ಕುಟುಂಬವಿದ್ದು, ನನ್ನ ಮಗಳಿಗೆ ಹಾಗೂ ನನ್ನ ಕುಟುಂಬಕ್ಕೆ ಇದೀಗ ನಾನು ಉತ್ತರ ಕೊಡಬೇಕಿದೆ. ಫೋಟೋದಿಂದ ಸಾಕಷ್ಟು ಬೇಸರವಾಗಿದೆ. ಶೀಘ್ರದಲ್ಲೇ ಫೋಟೋ ಹಾಕಿದವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗುತ್ತೇನೆ.
ವಿವೇಕ್ ರೈ ಅವರು ನನ್ನ ಅಣ್ಣನ ಸ್ನೇಹಿತರಾಗಿದ್ದು, ಮಂಗಳೂರಿನಲ್ಲಿ ಅವರು ಕೃಷಿ ಮಾಡುತ್ತಿದ್ದಾರೆ. ವಿವೇಕ್ ನನ್ನ ಕುಟುಂಬದವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಕೃಷಿ ಮಾಡುವ ಆಲೋಚನೆ ಇದ್ದ ಕಾರಣ ಅವರ ಕೃಷಿ ತೋಟಕ್ಕೆ ಭೇಟಿ ನೀಡಿದಾಗ ಫೋಟೋ ತೆಗೆಯಲಾಗಿತ್ತು. ಭೇಟಿ ನೀಡಿದ್ದ ವೇಳೆ ಸಾಕಷ್ಟು ಅಭಿಮಾನಿಗಳೂ ಕೂಡ ನನ್ನ ಜೊತೆ ಫೋಟೋ ತೆಗೆಸಿಕೊಂಡಿದ್ದರು. ಕೃಷಿ ಮಾಡಲು ಸಾಕಷ್ಟು ಸಮಯವಿಲ್ಲದ ಕಾರಣ ಆ ವ್ಯವಹಾರವನ್ನು ಕೈಬಿಡಲಾಗಿತ್ತು. ಇದೀಗ ಆ ಫೋಟೋಗಳನ್ನು ಯಾವ ಕಾರಣಕ್ಕೆ ಹರಿಬಿಟ್ಟಿದ್ದಾರೆಂಬುದು ಅರ್ಥವಾಗುತ್ತಿಲ್ಲ. ಇದಾವುದೂ ಸೀಕ್ರೇಟೆ ಫೋಟೋಗಳೂ ಅಲ್ಲ
ಪ್ರಸ್ತುತ ನಾನು ಬೆಂಗಳೂರಿನಲ್ಲೇ ಇದ್ದು, ನನಗೆ ನನ್ನದೇ ಆದಂತಹ ಕೆಲಸಗಳಿವೆ. ಸಿನಿಮಾ ಮಾಡಬೇಕೆಂದರೆ ಸಾಕಷ್ಟು ಸಮಯವನ್ನು ಅದರಲ್ಲಿಯೇ ಕಳೆಯಬೇಕಾಗುತ್ತದೆ. ಆದರೆ, ಅದಕ್ಕೀಗ ನನ್ನ ಬಳಿ ಸಮಯವಿಲ್ಲ. ನನ್ನ ಸಿನಿಮಾದಲ್ಲಿ ನಾನೇ ನಟನೆ ಮಾಡಬೇಕೆಂಬುದು ನನಗೆ ಆಸೆ. ಮುಖ್ಯವಾಗಿ ಒಳ್ಳೆಯ ವಿಷಯಗಳೂ ಸಿಗುತ್ತಿಲ್ಲ. ಹೀಗಾಗಿ ಸಿನಿಮಾದಿಂದ ದೂರು ಉಳಿದಿದ್ದೇನೆ. ಹಾಗೆಂದ ಮಾತ್ರಕ್ಕೆ ಸಿನಿಮಾ ರಂಗದಿಂದ ದೂರಾಗುತ್ತಿನೆ ಎಂದಲ್ಲ. ಸಿನಿಮಾ ಮಾಡುತ್ತೇನೆ. ಸಿನಿಮಾ ರಂಗವನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ