ಬೆಂಗಳೂರು: ಯೂ ಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಸ್ಯಾಂಡಲ್ ವುಡ್ ನಿರ್ಮಾಪಕರ ಗಮನ ಸೆಳೆಯುತ್ತಿದ್ದಾರೆ. ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ಶ್ರದ್ಧಾ, ಪ್ರೀತಂ ಗುಬ್ಬಿ ಮುಂದಿನ ಪ್ರಾಜೆಕ್ಟ್ ಗೂ ಸಹಿ ಮಾಡಿದ್ದಾರೆ.
ಜಾನಿ ಜಾನಿ ಎಸ್ ಪಾಪಾ ಸಿನಿಮಾದಲ್ಲಿ ಮೊದಲ ಬಾರಿಗೆ ವಿಜಯ್ ಗೆ ನಾಯಕಿಯಾಗಿ ನಟಿಸಲಿದ್ದಾರೆ, ಇನ್ನೂ ನಂದ ಕಿಶೋರ್ ನಿರ್ದೇಶನದ ಹಯಗ್ರೀವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಶ್ರದ್ಧಾಗೆ ಒದಗಿ ಬಂದಿದೆ.
ಕನ್ನಡ ನಟಿಯರನ್ನು ನಾಯಕಿಯಾಗಿ ಆಯ್ಕೆ ಮಾಡುವ ವಿಚಾರದಲ್ಲಿ ನಂದ ಕಿಶೋರ್ ನಿರ್ಧಿಷ್ಟ ಮಾನದಂಡ ಅನುಸರಿಸುತ್ತಾರೆ, ಅವರ ಪ್ರಕಾರ ಶ್ರದ್ಧಾ ಸೂಕ್ತ ನಾಯಕಿಯಾಗಿದ್ದಾರೆ. ಆಕೆಯ ಅದ್ಭುತ ನಟನೆ ನಂದ ಕಿಶೋರ್ ಗೆ ಹಿಡಿಸಿದೆಯಂತೆ ಎಂದು ಮೂಲಗಳು ತಿಳಿಸಿವೆ.
ಹಯಗ್ರೀವದಲ್ಲಿ ಶ್ರದ್ಧಾ ನಾಯಕಿಯಾಗಿ ನಟಿಸುವ ಸಂಬಂಧ ಈಗಾಗಲೇ ಹಲವು ಬಾರಿ ಚರ್ಚೆ ಮಾಡಲಾಗಿದೆ.ಎಲ್ಲವೂ ಅಂದುಕೊಂಡಂತೆ ಆದರೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಫ್ರೆಶ್ ಜೋಡಿ ತೆರೆ ಮೇಲೆ ಬರಲಿದೆ. ಹಯಗ್ರೀವದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗುವ ಶ್ರದ್ಧಾ ಗ್ಲಾಮರಸ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಲೋಕೇಶನ್ ಹುಡುಕಾಟಕ್ಕಾಗಿ ನಿರ್ದೇಶಕರು ಶೀಘ್ರವೇ ಚೀನಾಗೆ ತೆರಳಲಿದ್ದು, ಎಷ್ಟು ಸಾಧ್ಯವೋ ಅಷ್ಟು ಬೇಗ ಶೂಟಿಂಗ್ ಆರಂಭಿಸಲಿದ್ದಾರೆ.ಬಿಕೆ ಗಂಗಾಧರ್ ಸಿನಿಮಾ ನಿರ್ಮಿಸುತ್ತಿದ್ದು, ಸತ್ಯ ಹೆಗಡೆ ಛಾಯಾಗ್ರಾಹಣವಿದೆ.