ಪ್ರತಿದಾಳಿ ಪಾತ್ರಗಳಿಂದ ಹೆಸರುವಾಸಿಯಾಗಿರುವ ನಟ ರವಿಶಂಕರ್ ಇತ್ತೀಚೆಗೆ ಆಯ್ಕೆಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಕಾಲೇಜ್ ಕುಮಾರ ಚಿತ್ರದಲ್ಲಿ ಅವರ ಪಾತ್ರ ಅಭಿಮಾನಿಗಳಿಗೆ ಇಷ್ಟವಾಗಿತ್ತು. ರಾಜರಥ ಸಿನಿಮಾದಲ್ಲಿ ಕೂಡ ರವಿಶಂಕರ್ ಅವರದ್ದು ವಿಭಿನ್ನ ಪಾತ್ರ.
ಇದೀಗ ಅಯೋಗ್ಯ ಸಿನಿಮಾದಲ್ಲಿ ಬಚ್ಚೇಗೌಡ ಪಾತ್ರದೊಂದಿಗೆ ಪ್ರವೇಶಿಸಿದ್ದಾರೆ ರವಿಶಂಕರ್. ಮಹೇಶ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರವಿಶಂಕರ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದ ಮೂರು ದಿನಗಳಿಂದ ಚಿತ್ರದ ಎರಡನೇ ಶೆಡ್ಯೂಲ್ ನ ಶೂಟಿಂಗ್ ನಲ್ಲಿ ತೊಡಗಿರುವ ಮಹೇಶ್, ರವಿಶಂಕರ್ ಅವರು ಗ್ರಾಮ ಪಂಚಾಯತ್ ಅಧ್ಯಕ್ಷರ ಪಾತ್ರ ಅಭಿನಯಿಸುತ್ತಿದ್ದಾರೆ ಎಂದು ಸಿಟಿ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದರು. ಸತೀಶ್ ಇಲ್ಲಿ ಗ್ರಾಮ ಪಂಚಾಯತ್ ಸದಸ್ಯನ ಪಾತ್ರ ವಹಿಸುತ್ತಾರೆ. ಅವರಿಗೂ ರವಿಶಂಕರ್ ಗೂ ಜಗಳವಾಗುತ್ತದೆ.
ತನ್ನ ಗ್ರಾಮದಲ್ಲಿ ಶೌಚಾಲಯ ಕೂಡ ನಿರ್ಮಿಸದಿರುವ ಅಧ್ಯಕ್ಷ ಈ ಸಿನಿಮಾದ ಬಚ್ಚೇಗೌಡ. ಆದರೆ ಸತೀಶ್ ಗೆ ತನ್ನ ಸ್ಥಳೀಯ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಬೇಕೆಂಬ ಹುಮ್ಮಸ್ಸು. ರವಿಶಂಕರ್ ಇದೇ ಮೊದಲ ಬಾರಿಗೆ ಇಂತಹ ಪಾತ್ರವನ್ನು ಮಾಡುತ್ತಿರುವುದು ಎನ್ನುತ್ತಾರೆ.
ಇನ್ನು 10 ದಿನಗಳಲ್ಲಿ ಚಿತ್ರದ ಶೂಟಿಂಗ್ ಮುಗಿಯುವ ಸಾಧ್ಯತೆಯಿದೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಸಿನಿಮಾದ ಹೆಚ್ಚಿನ ಭಾಗದ ಚಿತ್ರೀಕರಣ ಮಂಡ್ಯದಲ್ಲಿ ನಡೆದಿದೆ.
ಅಯೋಗ್ಯ ತಂಡದಲ್ಲಿ ಚಿಕ್ಕಣ್ಣ, ರಂಗಾಯಣ ರಘು ಮತ್ತು ರವಿಶಂಕರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ ಮತ್ತು ಪ್ರೀತ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.