ಸಂಗ್ರಹ ಚಿತ್ರ
ಸಿನಿಮಾ ಸುದ್ದಿ
ತಮಿಳುನಾಡಿನಲ್ಲಿ ನಾಗರಹಾವು ಚಿತ್ರ ಸಮಸ್ಯೆ ಎದುರಿಸಿದ್ದಾಗ ಪ್ರಕಾಶ್ ರೈ ಎಲ್ಲಿದ್ದರು?: ಸಾರಾ ಗೋವಿಂದು ಆಕ್ರೋಶ
ಕಾವೇರಿ ವಿವಾದ ಸಂಬಂಧ ಕಾಳಾ ಚಿತ್ರ ಬಿಡುಗಡೆಗೆ ನಿಷೇಧ ಹೇರುವುದು ಸರಿಯಲ್ಲ ಎಂದು ಹೇಳಿದ್ದ ನಟ ಪ್ರಕಾಶ್ ರೈ ಟ್ವೀಟ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಖಾರವಾಗಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಕಾವೇರಿ ವಿವಾದ ಸಂಬಂಧ ಕಾಳಾ ಚಿತ್ರ ಬಿಡುಗಡೆಗೆ ನಿಷೇಧ ಹೇರುವುದು ಸರಿಯಲ್ಲ ಎಂದು ಹೇಳಿದ್ದ ನಟ ಪ್ರಕಾಶ್ ರೈ ಟ್ವೀಟ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಖಾರವಾಗಿ ತಿರುಗೇಟು ನೀಡಿದ್ದಾರೆ.
ನಟ ಪ್ರಕಾಶ್ ರೈ ಟ್ವೀಟ್ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, 2016ರಲ್ಲಿ ಇದೇ ಕಾವೇರಿ ವಿವಾದ ಉಂಟಾದಾಗ ತಮಿಳುನಾಡಿನಲ್ಲಿ ನಾಗರಹಾವು ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತವಾಗಿತ್ತು. ಆಗ ಪ್ರಕಾಶ್ ರೈ ಎಲ್ಲಿ ಹೋಗಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕಾಶ್ ರೈ ಆಗಲಿ, ರಜನಿಕಾಂತ್ ಆಗಲಿ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಹೇಳಿಕೆ ನೀಡುವಾಗ ಯೋಚಿಸಿ ಮಾತನಾಡಬೇಕು. ರಜನಿಕಾಂತ್ ಪ್ರೀತಿಯಿಂದ ಮಾತನಾಡಬೇಕಿತ್ತು. ಆಗ ಕನ್ನಡಿಗರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಕಾವೇರಿ ನದಿ ನೀರು ಎರಡೂ ರಾಜ್ಯದವರಿಗೆ ಅನಿವಾರ್ಯ. ಹಾಗಾಗಿ ಪ್ರಕಾಶ್ ರೈ ಮತ್ತು ರಜನಿಕಾಂತ್ ಇಬ್ಬರೂ ಸೌಜನ್ಯದಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಹೇಳಬೇಕಿತ್ತು ಎಂದು ಸಾ.ರಾ. ಗೋವಿಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ನಿನ್ನೆಯಷ್ಟೇ ರಜನಿಕಾಂತ್ ಅಭಿನಯದ ಕಾಳಾ ಚಿತ್ರಕ್ಕೆ ತಡೆಯೊಡ್ಡುವುದು ಸರಿಯಲ್ಲ ಎಂದು ಹೇಳಿದ್ದ ನಟ ಪ್ರಕಾಶ್ ರೈ, ಕಾವೇರಿ ವಿವಾದಕ್ಕೂ ಕಾಳಾ ಚಿತ್ರಕ್ಕೂ ಏನು ಸಂಬಂಧ.. ರಜನಿಕಾಂತ್ ಒಬ್ಬರ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಕಾಳಾ ಚಿತ್ರದ ಬಿಡುಗಡೆಗೆ ತಡೆಯೊಡ್ಡುವುದು ಎಷ್ಟು ಸರಿ ಎಂದು ಪ್ರಕಾಶ್ ರೈ ಸುಧೀರ್ಘ ಟ್ವೀಟ್ ಮಾಡಿ ಪ್ರಶ್ನಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ