ಚೆನ್ನೈ: ತಮಿಳುನಾಡಿನ ಒಳಿತಿಗಾಗಿ ಅಗತ್ಯಬಿದ್ದರೆ ಒಂದಾಗುವುದಾಗಿ ಸೂಪರ್ ಸ್ಟಾರ್ ಹಾಗೂ ರಾಜಕಾರಣಿಗಳಾದ ರಜನಿ ಕಾಂತ್ ಹಾಗೂ ಕಮಲ್ ಹಾಸನ್ ಸ್ಪಷ್ಟಪಡಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಮಕ್ಕಳ್ ನಿಧಿ ಮನ್ರಾಮ್ ಸ್ಥಾಪಕ ಕಮಲ್ ಹಾಸನ್ , ಕಳೆದ 44 ವರ್ಷಗಳಿಂದಲೂ ಚಿತ್ರರಂಗದಲ್ಲಿ ಜೊತೆಯಲ್ಲಿದ್ದೇವೆ. ಇದರಲ್ಲಿ ಅಶ್ಚರ್ಯಪಡಬೇಕಾದದ್ದು ಏನು ಇಲ್ಲ. ಆದರೆ, ರಾಜಕೀಯದಲ್ಲಿ ಒಂದು ವೇಳೆ ಅಗತ್ಯಬಿದ್ದರೆ ತಮಿಳುನಾಡಿನ ಅಭಿವೃದ್ದಿಗಾಗಿ ಜೊತೆಯಾಗುತ್ತೇವೆ ಎಂದರು.
ಇದಾದ ಒಂದು ಗಂಟೆಯ ನಂತರ ಕಮಲ್ ಹಾಸನ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ರಜನಿಕಾಂತ್, ರಾಜಕೀಯವಾಗಿ ಒಂದು ವೇಳೆ ಅಗತ್ಯಬಿದ್ದರೆ ಕಮಲ್ ಹಾಸನ್ ಅವರೊಂದಿಗೆ ಕೈ ಜೋಡಿಸುವುದಾಗಿ ತಿಳಿಸಿದರು.
ಇದೇ ಮೊದಲ ಬಾರಿಗೆ ಇಬ್ಬರು ಸ್ಟಾರ್ ಗಳು ರಾಜಕೀಯ ಮೈತ್ರಿ ಸಾಧ್ಯತೆ ಕುರಿತಂತೆ ಮಾತನಾಡಿದ್ದಾರೆ. ಆದಾಗ್ಯೂ, ಈ ಬೆಳವಣಿಗೆ ಅಭಿಮಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇಂತಹ ಮೈತ್ರಿ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ತಮ್ಮನ್ನು ಕೇಸರಿಕರಣಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ರಜನಿಕಾಂತ್ ಹೇಳುವ ಮೂಲಕ ಬಿಜೆಪಿ ಸೇರ್ಪಡೆ ಕುರಿತ ವದಂತಿಗಳನ್ನು ತಳ್ಳಿ ಹಾಕಿದ್ದರು.ಕಮಲ್ ಹಾಸನ್ ಚಿತ್ರೋದ್ಯಮ ಪ್ರವೇಶಕ್ಕೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲ್ ಹಾಸನ್, ನಿನ್ನೆ ದಿನ ಏನು ನಡೆಯಿತು, ಇಂದು ಏನು ಆಯಿತು, ನಾಳೆ ಏನು ನಡೆಯುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಈ ಹೇಳಿಕೆ ಬೆನ್ನಲ್ಲೇ ಇಂತಹ ಬೆಳವಣಿಗೆಯೊಂದು ನಡೆದಿದ್ದು, ಇಬ್ಬರು ಸ್ಟಾರ್ ಗಳು ತಮ್ಮ ನಡುವಿನ 4 ದಶಕಗಳ ಸ್ನೇಹದ ಕುರಿತಾಗಿ ಮಾತನಾಡಿ ಪರಸ್ಪರ ಹೊಗಳಿದ್ದಾರೆ. ಇದು ತಮಿಳುನಾಡು ರಾಜಕಾರಣದಲ್ಲಿ ಯಾವ ರೀತಿಯ ಬೆಳವಣಿಗೆಗೆ ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
Advertisement