ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಹುಚ್ಚಾಟ: ಸಾರ್ವಜನಿಕರಿಂದ ಬಿತ್ತು ಗೂಸಾ!

ನಟ ಹುಚ್ಚ ವೆಂಕಟ್ ಮತ್ತೆ ಹಳೇ ವರಸೆಯನ್ನು ಮುಂದುವರಿಸಿದ್ದು, ಇಂದು ಮಡಿಕೇರಿಯಲ್ಲಿ ಹುಚ್ಚಾಟವಾಡಿ ಸಾರ್ಜಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಹುಟ್ಟು ವೆಂಕಟ್ ಹುಚ್ಚಾಟ
ಹುಟ್ಟು ವೆಂಕಟ್ ಹುಚ್ಚಾಟ

ಮಡಿಕೇರಿ: ನಟ ಹುಚ್ಚ ವೆಂಕಟ್ ಮತ್ತೆ ಹಳೇ ವರಸೆಯನ್ನು ಮುಂದುವರಿಸಿದ್ದು, ಇಂದು ಮಡಿಕೇರಿಯಲ್ಲಿ ಹುಚ್ಚಾಟವಾಡಿ ಸಾರ್ಜಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಮಡಿಕೇರಿಯಲ್ಲಿ ಹುಚ್ಚ ವೆಂಕಟ್​ ಹುಚ್ಚಾಟ-ರಂಪಾಟ ನಡೆಸಿದ್ದಾರೆ. ಮಧ್ಯ ದಾರಿಯಲ್ಲಿ ಮನಸೋ ಇಚ್ಛೆ ವರ್ತನೆ ಮಾಡಿದ್ದು ಕಾರೊಂದನ್ನು ಪುಡಿ ಪುಡಿ ಮಾಡಿದ್ದಾರೆ.ಮಡಿಕೇರಿ ನಗರದ ಕೆಎಸ್ ಆರ್ ಟಿಸಿ ಡಿಪೋ ಬಳಿ ಘಟನೆ ನಡೆದಿದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರಿನ ಗ್ಲಾಸ್ ಒಡೆದು ಪುಂಡಾಟ ಮೆರೆದ ವೆಂಕಟ್ ಗೆ ಸ್ಥಳೀಯರು ಗೂಸಾ ನೀಡಿದ್ದಾರೆ.

ಹುಚ್ಚ ವೆಂಕಟ್ ಮಡಿಕೇರಿ ನಗರದ ಡಿಪೋ ಬಳಿ ಕಾಣಿಸಿಕೊಂಡು, ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದರು. ಈ ವೇಳೆ ನಾಪೋಕ್ಲುವಿನ ದಿಲೀಪ್ ಎಂಬವರು ತಮ್ಮ ಕಾರನ್ನು ಡಿಪೋ ಬಳಿ ನಿಲ್ಲಿಸಿ ಸಮೀಪದ ಎಟಿಎಂಗೆ ಹೋಗಿದ್ದರು. ಎಟಿಎಂನಿಂದ ಹಿಂತಿರುಗುತ್ತಿದ್ದ ದಿಲೀಪ್ ಸಾಮಾನ್ಯವಾಗಿಯೇ ಹುಚ್ಚ ವೆಂಕಟ್ ಅವರನ್ನು ನೋಡಿದ್ದಾರೆ. ಇಷ್ಟಕ್ಕೆ ಕೆರಳಿದ ಹುಚ್ಚ ವೆಂಕಟ್ ‘ನನ್ನ ಯಾಕೆ ಗುರಾಯಿಸುತ್ತಿದ್ದೀಯಾ’ ಎಂದು ತಕರಾರು ಎತ್ತಿದ್ದಾರೆ.

ದಿಲೀಪ್ ಉತ್ತರಿಸಲು ಯತ್ನಿಸುತ್ತಿದ್ದಂತೆ ಹುಚ್ಚ ವೆಂಕಟ್ ಏಕಾಏಕಿ ದಾಳಿ ಮಾಡಲು ಆರಂಭಿಸಿದ್ದಾರೆ. ಮಾಧ್ಯಮದವರು ಸ್ಥಳಕ್ಕೆ ಹೋಗಿ ವರದಿ ಮಾಡುತ್ತಿದ್ದಾಗಲೂ ಹುಚ್ಚ ವೆಂಕಟ್ ದಿಲೀಪ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ದಿಲೀಪ್ ತಪ್ಪಿಸಿಕೊಳ್ಳುತ್ತಿದ್ದಂತೆ ಕಾರಿನತ್ತ ಆಗಮಿಸಿದ ಹುಚ್ಚ ವೆಂಕಟ್ ಸ್ಥಳದಲ್ಲಿದ್ದ ಕಲ್ಲಿನಿಂದ ಕಾರಿನ ಗ್ಲಾಸ್ ಒಡೆದಿದ್ದಾರೆ. ಅಷ್ಟೇ ಅಲ್ಲದೆ, ಕಾರಿನ ಮೇಲೆ ಕಾಲಿಟ್ಟು ದಿಲೀಪ್‍ರನ್ನು ಗದರಿಸಿದ್ದಾರೆ.

ಹುಚ್ಚ ವೆಂಕಟ್ ಹುಚ್ಚಾಟವನ್ನು ಗಮನಿಸುತ್ತಿದ್ದ ಸ್ಥಳೀಯರು ಕೋಪಗೊಂಡು, ಬುದ್ಧಿ ಹೇಳಲು ಮುಂದಾದರು. ಆದರೆ ಹುಚ್ಚ ವೆಂಕಟ್ ಸುಮ್ಮನಾಗದಿದ್ದಾಗ ಸುತ್ತುವರಿದ ಸಾರ್ವಜನಿಕರು ದಿಲೀಪ್ ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ, ತಾವೂ ಕೂಡ ಥಳಿಸಿದ್ದಾರೆ.

ಮಳೆಯ ನಡುವೆ ಬಿದ್ದ ಹೊಡೆತಕ್ಕೆ ತಣ್ಣಗಾಗದ ಹುಚ್ಚ ವೆಂಕಟ್ ಮತ್ತೆ ಗದರಿ ಅಚ್ಚರಿ ಮೂಡಿಸಿದರು. ಈ ಬಗ್ಗೆ ಸಾರ್ವಜನಿಕರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಮಡಿಕೇರಿ ಪೊಲೀಸರು ಹುಚ್ಚ ವೆಂಕಟ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com